ಮಂಗಳೂರಿನಲ್ಲಿ ಯುವಕನ ಕೊಲೆ| ವದಂತಿಗಳಿಗೆ ಕಿವಿಗೊಡದಿರಿ: ಪೊಲೀಸ್ ಕಮಿಷನರ್ ಮನವಿ

Update: 2025-04-27 23:08 IST
ಮಂಗಳೂರಿನಲ್ಲಿ ಯುವಕನ ಕೊಲೆ| ವದಂತಿಗಳಿಗೆ ಕಿವಿಗೊಡದಿರಿ: ಪೊಲೀಸ್ ಕಮಿಷನರ್ ಮನವಿ

ಅನುಪಮ್ ಅಗರ್ವಾಲ್

  • whatsapp icon

ಮಂಗಳೂರು, ಎ.27: ನಗರ ಹೊರವಲಯದ ಕುಡುಪು ಸಮೀಪ ರವಿವಾರ ಸಂಜೆ ಅಪರಿಚಿತ ಯುವಕನ ಮೃತದೇಹ ಪತ್ತೆಯಾಗಿದ್ದು, ಕೊಲೆಶಂಕೆ ವ್ಯಕ್ತವಾಗಿದೆ. ಮೃತ ಯುವಕನ ಗುರುತು ಪತ್ತೆಯಾಗಿಲ್ಲ. ಸುಮಾರು 35ರಿಂದ 40 ವರ್ಷ ಪ್ರಾಯದ ಹೊರ ರಾಜ್ಯದ ಈ ಯುವಕನನ್ನು ಕಲ್ಲಿನಿಂದ ಜಜ್ಜಿ ಕೊಲೆಗೈಯಲಾಗಿದೆ ಎಂದು ಹೇಳಲಾಗುತ್ತಿದೆ.

ನಗರದ ಕುಡುಪು ಕಟ್ಟೆ ಸಮೀಪದ ಗದ್ದೆಯಲ್ಲಿ ಯುವಕರ ಗುಂಪೊಂದು 6 ತಂಡಗಳ ಕ್ರಿಕೆಟ್ ಮ್ಯಾಚ್ ಆಯೋಜಿಸಿತ್ತು. ಸಂಜೆ ವೇಳೆ ಕ್ರಿಕೆಟ್ ಪಂದ್ಯಾಟ ನಡೆಯುತ್ತಿದ್ದ ಗದ್ದೆಗೆ ಅಪರಿಚಿತ ಯುವಕನೊಬ್ಬ ತೆರಳಿದ್ದು, ಯಾವುದೋ ಕಾರಣಕ್ಕೆ ಈ ಯುವಕ ಮತ್ತು ಕ್ರಿಕೆಟ್ ಆಟಗಾರರ ಮಧ್ಯೆ ಮಾತಿಗೆ ಮಾತು ಬೆಳೆದಿದೆ ಎನ್ನಲಾಗಿದೆ. ಆಕ್ರೋಶಗೊಂಡ ಯುವಕರ ತಂಡವು ಈ ಯುವಕನಿಗೆ ಹಲ್ಲೆಗೈದಿದ್ದು, ಗಂಭೀರ ಗಾಯಗೊಂಡ ಯುವಕ ಸ್ಥಳದಲ್ಲೇ ಮೃತಪಟ್ಟಿರುವುದಾಗಿ ವರದಿಯಾಗಿದೆ.

ಘಟನಾ ಸ್ಥಳಕ್ಕೆ ನಗರ ಉಪ ಆಯುಕ್ತ ಸಿದ್ದಾರ್ಥ್ ಗೋಯಲ್, ನಗರ ದಕ್ಷಿಣ ಉಪವಿಭಾಗ ಸಹಾಯಕ ಪೊಲೀಸ್ ಆಯುಕ್ತೆ ಧನ್ಯಾ ನಾಯಕ್, ಮಂಗಳೂರು ಗ್ರಾಮಾಂತರ ಠಾಣಾ ಇನ್‌ಸ್ಪೆಕ್ಟರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈತ ಕೂಲಿ ಕಾರ್ಮಿಕ ಎಂದು ಹೇಳಲಾಗುತ್ತಿದೆ. ಘಟನೆಯ ಬಗ್ಗೆ ಮಂಗಳೂರು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

ಮೃತಪಟ್ಟ ಯುವಕನ ಗುರುತು ಇನ್ನೂ ಪತ್ತೆಯಾಗಿಲ್ಲ. ಪೊಲೀಸರು ಆತನ ಗುರುತು ಪತ್ತೆಗಾಗಿ ಪ್ರಯತ್ನ ಸಾಗಿಸಿದ್ದಾರೆ. ಪ್ರಾಥಮಿಕ ವರದಿಯ ಬಳಿಕ ಸಾವಿಗೆ ಕಾರಣ ಏನು ಎಂದು ತಿಳಿಯಬಹುದಾಗಿದೆ. ಈ ಬಗ್ಗೆ ಹರಡುತ್ತಿರುವ ವದಂತಿಗಳಿಗೆ ಕಿವಿಗೊಡದಿರಿ ಎಂದು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News