ನಮ್ಮ ಮೆದುಳಿಗಿಂತ ಯಾವ ತಂತ್ರಜ್ಞಾನವೂ ದೊಡ್ಡದಲ್ಲ: ಬಾಲಕೃಷ್ಣ ಕೆ

Update: 2023-08-29 16:21 GMT

ಮಂಗಳೂರು: ಕಂಪ್ಯೂಟರ್ ಕಂಡುಹಿಡಿದವರು ಮನುಷ್ಯರು. ಕೃತಕ ಬುದ್ಧಿಮತ್ತೆ, ತಂತ್ರಜ್ಞಾನವನ್ನು ಬೆಳೆಸುತ್ತಿರುವವರು ಮನುಷ್ಯರು. ಅದನ್ನು ಹ್ಯಾಕ್ ಮಾಡುತ್ತಿರುವವರೂ ಮನುಷ್ಯರೇ. ಹಾಗಾಗಿ ಯಾವ ತಂತ್ರಜ್ಞಾನವೂ ಕೂಡ ಮಾನವನ ಮೆದುಳಿಗಿಂತ ದೊಡ್ಡದಲ್ಲ, ಎಂದು ಗೋವಿಂದದಾಸ ಕಾಲೇಜಿನ ನಿವೃತ್ತ ಗ್ರಂಥಪಾಲಕ ಬಾಲಕೃಷ್ಣ ಕೆ. ಹೇಳಿದ್ದಾರೆ.

ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಮಂಗಳವಾರ ಕಾಲೇಜಿನ ಗ್ರಂಥಾಲಯ ಮತ್ತು ಆಂತರಿಕ ಗುಣಮಟ್ಟ ಖಾತರಿಕೋಶದ ಸಹಯೋಗದೊಂದಿಗೆ ಗ್ರಂಥಾಲಯ ಪಿತಾಮಹ ಡಾ. ಎಸ್. ಆರ್. ರಂಗನಾಥನ್ ಸಂಸ್ಮರಣಾ ದಿನಾಚರಣೆಯ ಅಂಗವಾಗಿ ’ಓದುವ ಹವ್ಯಾಸ’ ಎನ್ನುವ ವಿಶೇಷ ಉಪನ್ಯಾಸ ನೀಡಿದ ಅವರು, ಯುವ ಪೀಳಿಗೆ ಹೆಚ್ಚು ಹೆಚ್ಚು ಪುಸ್ತಕಗಳನ್ನು, ನಿಘಂಟುಗಳನ್ನು ಓದಬೇಕು. ಓದಿ ಅರ್ಥೈಸಿಕೊಳ್ಳುವುದಕ್ಕಿಂತಲೂ ಮನನ ಮಾಡಿಕೊಳ್ಳುವುದು ಮುಖ್ಯವಾಗಿರುತ್ತದೆ, ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲೆ ಡಾ. ಅನಸೂಯ ರೈ ಮಾತನಾಡಿ, ಕಲಾ, ವಾಣಿಜ್ಯ ಅಥವಾ ವಿಜ್ಞಾನ ವಿಭಾಗವೇ ಇರಲಿ ಎಲ್ಲರಿಗೂ ಓದು ಮುಖ್ಯವಾದದ್ದು. ಓದುವಿಕೆ ಜ್ಞಾನದ ವೃದ್ಧಿಗೆ ಸಹಕಾರಿ. ಗ್ರಂಥಾಲಯದ ಪಿತಾಮಹ ಎಂದು ಕರೆಯಲ್ಪಡುವ ಎಸ್. ಆರ್. ರಂಗನಾಥನ್ ನಮ್ಮ ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರಿನಲ್ಲಿ ಕಾರ್ಯನಿರ್ವಹಿಸಿದ್ದರು ಎನ್ನುವುದು ಹೆಮ್ಮೆಯ ವಿಷಯ, ಎಂದು ಸಂತಸ ವ್ಯಕ್ತಡಿಸಿದರು.

ಗ್ರಂಥಪಾಲಕಿ ಡಾ.ವನಜ ಸ್ವಾಗತಿಸಿ, ಐಕ್ಯೂಎಸಿ ಸಂಯೋಜಕ ಡಾ. ಸಿದ್ದರಾಜು ಎಂ. ಎನ್. ವಂದಿಸಿದರು. ಇದೇ ಸಂದರ್ಭದಲ್ಲಿ 23 ವರ್ಷಗಳ ಕಾಲ ಗ್ರಂಥಾಲಯ ಸಿಬ್ಬಂದಿಯಾಗಿ ಸೇವೆ ಸಲ್ಲಿಸಿದ ವಸಂತಿ ಇವರನ್ನು ಸನ್ಮಾನಿಸಲಾಯಿತು.

ಕ್ರೀಡಾ ದಿನಾಚರಣೆ: ಹಾಕಿ ದಂತ ಕತೆ ಮೇಜರ್ ಧ್ಯಾನ್ ಚಂದ್ ಅವರ ಜನ್ಮದಿನಾಚರಣೆಯನ್ನು ರಾಷ್ಟ್ರೀಯ ಕ್ರೀಡಾ ದಿನವಾಗಿ ಆಚರಿಸಲಾಯಿತು. ಕಾಲೇಜಿನ ದೈಹಿಕ ವಿಭಾಗದ ಮುಖ್ಯಸ್ಥ ಡಾ. ಡಾ. ಕೇಶವಮೂರ್ತಿ ದಿನದ ಪ್ರಾಮುಖ್ಯತೆ ಯನ್ನು ವಿವರಿಸಿದರು.

ಎನ್.ಎಸ್.ಎಸ್ ಕಾರ್ಯಕ್ರಮ ಅಧಿಕಾರಿ ಡಾ. ಸುರೇಶ್ ನಮ್ಮ ಆರೋಗ್ಯದ ಕುರಿತ ನಮ್ಮ ಬದ್ಧತೆಯನ್ನು ನೆನಪಿಸುವ ಪ್ರಮಾಣವಚನ ಬೋಧಿಸಿದರು. ಪ್ರಾಂಶುಪಾಲೆ ಡಾ. ಅನಸೂಯ ರೈ ಅಧ್ಯಕ್ಷೀಯ ಭಾಷಣ ಮಾಡಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News