ಪಹಲ್ಗಾಮ್ ಭಯೋತ್ಪಾದನಾ ದಾಳಿ ಪ್ರಕರಣ: ಶಂಕಿತ ಉಗ್ರರಿಗೆ ಸೇರಿದ ಒಟ್ಟು 10 ಮನೆಗಳು ನೆಲಸಮ

Photo : NDTV
ಶ್ರೀನಗರ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಳಿಕ ಜಮ್ಮು ಹಾಗೂ ಕಾಶ್ಮೀರದ ಆಡಳಿತ ಕನಿಷ್ಠ 10 ಶಂಕಿತ ಭಯೋತ್ಪಾದಕರ ಮನೆಗಳನ್ನು ನೆಲಸಮಗೊಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದಲ್ಲದೆ, ಜಮ್ಮು ಕಾಶ್ಮೀರದಾದ್ಯಂತ ಪೊಲೀಸರು 2000ಕ್ಕೂ ಅಧಿಕ ಜನರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.
ಆಡಳಿತ ಮಂಗಳವಾರ ನಿಷೇಧಿತ ಉಗ್ರಗಾಮಿ ಸಂಘಟನೆ ಲಷ್ಕರೆ ತಯ್ಯಿಬ (ಎಲ್ಇಟಿ)ದ ಸದಸ್ಯರೆಂದು ಶಂಕಿಸಲಾದ ಅನಂತ್ನಾಗ್ನ ಆದಿಲ್ ಥೋಕರ್ ಹಾಗೂ ತ್ರಾಲ್ನ ಆಸಿಫ್ ಶೇಖ್ ಗೆ ಸೇರಿದ ಮನೆಗಳನ್ನು ಧ್ವಂಸಗೊಳಿಸಿತ್ತು.
ಇದಲ್ಲದೆ ಲಷ್ಕರೆ ತಯ್ಯಿಬ (ಎಲ್ಇಟಿ)ದ ಸದಸ್ಯರೆಂದು ಗುರುತಿಸಲಾದ ಝಾಕಿರ್ ಅಹ್ಮದ್ ಗನಿ, ಅಮೀರ್ ಅಹ್ಮದ್ ದಾರ್, ಶಾಹಿದ್ ಅಹ್ಮದ್ ಕುಟ್ಟೆ, ಅಹ್ಸಾನ್ ಉಲ್ ಹಕ್ ಅಮೀರ್; ಜೈಸೆ ಮುಹ್ಮದ್ನ ಸದಸ್ಯರು ಎನ್ನಲಾದ ಅಮೀರ್ ನಸೀರ್ ವಾನಿ, ಜಮೀಲ್ ಅಹ್ಮದ್ ಶೇರ್ ಗೋಜ್ರಿ ಹಾಗೂ ದಿ ರೆಸಿಸ್ಟೆನ್ಸ್ ಫ್ರಂಟ್ಸ್ನ ಸದಸ್ಯರೆಂದು ಹೇಳಲಾದ ಅದ್ನಾನ್ ಸಫಿ ದಾರ್ ಹಾಗೂ ಫಾರೂಕ್ ಅಹ್ಮದ್ ತೆಡ್ವಾರ ಮನೆಗಳನ್ನು ಆಡಳಿತ ನೆಲಸಮಗೊಳಿಸಿದೆ.
ಈ ಮನೆ ನೆಲಸಮದ ಕುರಿತು ಸೇನೆಯಾಗಲಿ ಪೊಲೀಸರಾಗಲಿ ಯಾವುದೇ ಹೇಳಿಕೆ ನೀಡಿಲ್ಲ. ಆದರೆ, ಶಂಕಿತ ಭಯೋತ್ಪಾದಕರು ಲಷ್ಕರೆ ತಯ್ಯಿಬ ಹಾಗೂ ಇನ್ನೊಂದು ಭಯೋತ್ಪಾದಕ ಸಂಘಟನೆ ಹಿಜ್ಬುಲ್ ಮುಜಾಹಿದ್ದೀನ್ಗೆ ಸೇರಿದ್ದಾರೆ ಎಂದು ಅನಾಮಿಕ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.