1985ರ ಕಾನಿಷ್ಕಾ ವಿಮಾನದಲ್ಲಿನ ಬಾಂಬ್ ಸ್ಫೋಟ ಪ್ರಕರಣ | ಮರು ತನಿಖೆಯ ಆಗ್ರಹವನ್ನು ವಿರೋಧಿಸಿದ ಭಾರತ ಮೂಲದ ಕೆನಡಾ ಸಂಸದ
ಒಟ್ಟಾವಾ: 1985ರಲ್ಲಿ ಏರ್ ಇಂಡಿಯಾ ವಿಮಾನ 182ನಲ್ಲಿ ನಡೆದಿದ್ದ ಬಾಂಬ್ ಸ್ಪೋಟ ಪ್ರಕರಣದಲ್ಲಿ ವಿದೇಶಿ ಬೇಹುಗಾರಿಕೆ ಸಂಸ್ಥೆಯ ಪಾತ್ರವೇನಾದರೂ ಇತ್ತೆ ಎಂಬ ಕುರಿತು ಮರು ತನಿಖೆ ನಡೆಸಬೇಕು ಎಂಬ ಆಗ್ರಹವನ್ನು ಭಾರತ ಮೂಲದ ಕೆನಡಾ ಸಂಸದರೊಬ್ಬರು ಟೀಕಿಸಿದ್ದು, ಈ ಆಗ್ರಹವು ಖಾಲಿಸ್ತಾನಿ ಭಯೋತ್ಪಾದಕರ ಪಿತೂರಿ ಸೂತ್ರಗಳಿಗೆ ಉತ್ತೇಜನ ನೀಡುತ್ತದೆ ಎಂದು ಆರೋಪಿಸಿದರು.
ಜೂನ್ 23, 1985ರಲ್ಲಿ ಮಾಂಟ್ರಿಯಲ್ನಿಂದ ಹೊಸದಿಲ್ಲಿಗೆ ತೆರಳುತ್ತಿದ್ದ ಏರ್ ಇಂಡಿಯಾ ಕಾನಿಷ್ಕ 182 ವಿಮಾನವು ಹೀಥ್ರೊ ವಿಮಾನ ನಿಲ್ದಾಣದಲ್ಲಿ ಭೂಸ್ಪರ್ಶ ಮಾಡುವುದಕ್ಕೆ ಇನ್ನು 45 ನಿಮಿಷಗಳಿರುವಾಗ, ಆ ವಿಮಾನದೊಳಗೆ ಬಾಂಬ್ ಸ್ಫೋಟಗೊಂಡಿತ್ತು. ಈ ಸ್ಫೋಟದಲ್ಲಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಎಲ್ಲ 329 ಮಂದಿ ಪ್ರಯಾಣಿಕರೂ ಮೃತಪಟ್ಟಿದ್ದರು. ಅವರಲ್ಲಿ ಬಹುತೇಕರು ಭಾರತೀಯ ಮೂಲದ ಕೆನಡಾ ಪ್ರಜೆಗಳಾಗಿದ್ದರು.
1984ರಲ್ಲಿ ಅಮೃತಸರದ ಸ್ವರ್ಣ ಮಂದಿರದಿಂದ ಭಯೋತ್ಪಾದಕರನ್ನು ಹೊರಹಾಕಲು ನಡೆಸಲಾಗಿದ್ದ 'ಆಪರೇಷನ್ ಬ್ಲೂಸ್ಟಾರ್' ಕಾರ್ಯಾಚರಣೆಗೆ ಪ್ರತೀಕಾರವಾಗಿ ಖಾಲಿಸ್ತಾನಿ ಭಯೋತ್ಪಾದಕರು ಆ ಬಾಂಬ್ ದಾಳಿಯನ್ನು ನಡೆಸಿದ್ದರು ಎಂದು ಆರೋಪಿಸಲಾಗಿತ್ತು.
ಗುರುವಾರ ಸಂಸತ್ತನ್ನು ಉದ್ದೇಶಿಸಿ ಮಾತನಾಡಿದ ನೇಪಿಯನ್ಸ್ ಹೌಸ್ ಆಫ್ ಕಾಮನ್ಸ್ನಿಂದ ಸಂಸತ್ತಿಗೆ ಅಯ್ಕೆಯಾಗಿರುವ ಚಂದ್ರ ಆರ್ಯ, ಏರ್ ಇಂಡಿಯಾ ವಿಮಾನ ಸ್ಫೋಟಕ್ಕೆ ಖಾಲಿಸ್ತಾನಿ ಭಯೋತ್ಪಾದಕರು ಕಾರಣ ಎಂದು ಕೆನಡಾದ ಎರಡು ಸಾರ್ವಜನಿಕ ವಿಚಾರಣೆಯಲ್ಲಿ ಪತ್ತೆಯಾಗಿದೆ ಎಂದು ಹೇಳಿದರು.
ಇಂದಿಗೂ ಕೂಡಾ ಈ ಭಯೋತ್ಪಾದಕ ದಾಳಿಗೆ ಕಾರಣವಾದ ಸೈದ್ಧಾಂತಿಕತೆಯು ಕೆನಡಾದಲ್ಲಿನ ಕೆಲವು ವ್ಯಕ್ತಿಗಳಲ್ಲಿ ಜೀವಂತವಾಗುಳಿದಿದೆ ಎಂದೂ ಅವರು ಆರೋಪಿಸಿದರು.