ದುಬೈ ಪ್ರಯಾಣಿಕನ ಕುರಿತು ಅಸ್ಸಾಂ ಸಿಎಂ ಪೋಸ್ಟ್ ; ಸೈಬರ್ ದಾಳಿಯಾಗಿರಬಹುದು ಎಂದ ಜನರು!

Photo | indiatoday
ಹೊಸದಿಲ್ಲಿ : ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ದಿಲ್ಲಿಯಿಂದ ದುಬೈಗೆ ಎಮಿರೇಟ್ಸ್ ವಿಮಾನದಲ್ಲಿ ಪ್ರಯಾಣಿಸುವಾಗ ತನ್ನ ಬಳಿಯಿದ್ದ ಸಹಪ್ರಯಾಣಿಕನ ಬಗ್ಗೆ ಟಿಪ್ಪಣಿಯನ್ನು ಹಂಚಿಕೊಂಡರು.
ʼಇಂದು ಬೆಳಿಗ್ಗೆ ನಾನು ದಿಲ್ಲಿಯಿಂದ ದುಬೈಗೆ ಎಮಿರೇಟ್ಸ್ ವಿಮಾನದಲ್ಲಿ ಪ್ರಯಾಣಿಸಿದೆ. ವಿಮಾನದಲ್ಲಿ ಸಜ್ಜನನಾದ ಯುವಕನೋರ್ವ ನನಗೆ ಯುನಿವರ್ಸಲ್ ಪ್ಲಗ್ ಮತ್ತು ಚಾರ್ಜಿಂಗ್ ಕೇಬಲ್ ನೀಡಿದನು. ದುರದೃಷ್ಟವಶಾತ್, ನಾನು ನಿದ್ರಿಸುತ್ತಿದ್ದಾಗ ಅವರು ದುಬೈನಲ್ಲಿ ಇಳಿದರು. ಅವರು ಕೊಟ್ಟ ಪ್ಲಗ್ ಮತ್ತು ಚಾರ್ಜಿಂಗ್ ಕೇಬಲ್ ಹಿಂತಿರುಗಿಸಲು ನನಗೆ ಸಾಧ್ಯವಾಗಿಲ್ಲ. ನಾನು ಈಗ ಆಮ್ಸ್ಟರ್ಡ್ಯಾಮ್ಗೆ ಬಂದು ತಲುಪಿದ್ದೇನೆ. ಅವರ ವಸ್ತುಗಳನ್ನು ಹಿಂತಿರುಗಿಸದಿದ್ದಕ್ಕಾಗಿ ಕ್ಷಮೆಯಾಚಿಸುತ್ತೇನೆʼ ಎಂದು ಬರೆದುಕೊಂಡರು.
ಈ ಸಂದೇಶ ಅವರಿಗೆ ತಲುಪಿದರೆ, ದಯವಿಟ್ಟು ನನಗೆ ನೇರವಾಗಿ ಸಂದೇಶ ಕಳುಹಿಸಿ, ನಾನು ನಿಮ್ಮ ಚಾರ್ಜರ್ ಮತ್ತು ಕೇಬಲ್ ಅನ್ನು ಹಿಂತಿರುಗಿಸಲು ವ್ಯವಸ್ಥೆ ಮಾಡುತ್ತೇನೆ. ನಿಮ್ಮ ದಯೆಗೆ ಧನ್ಯವಾದಗಳು ಮತ್ತು ಉಂಟಾದ ಯಾವುದೇ ಅನಾನುಕೂಲತೆಗಾಗಿ ನಾನು ವಿಷಾದಿಸುತ್ತೇನೆ ಎಂದು ಹಿಮಂತ ಬಿಸ್ವಾ ಶರ್ಮಾ ಬರೆದುಕೊಂಡರು.
ಹಲವಾರು ಎಕ್ಸ್ ಬಳಕೆದಾರರು ಶರ್ಮಾ ಅವರ ನಮ್ರತೆಯನ್ನು ಶ್ಲಾಘಿಸಿದರೆ, ಇತರರು ವಿಭಿನ್ನವಾಗಿ ಪ್ರತಿಕ್ರಿಯಿಸಿದರು. ಕೆಲವರು ಅಸ್ಸಾಂ ಮುಖ್ಯಮಂತ್ರಿಗೆ ಅವರ ಫೋನ್ ಅನ್ನು ಪರಿಶೀಲಿಸುವಂತೆ ಸಲಹೆ ನೀಡಿದರು. ಇದು ʼಜ್ಯೂಸ್-ಜಾಕಿಂಗ್ʼ( ಸೈಬರ್ ದಾಳಿ) ಪ್ರಯತ್ನವಾಗಿರಬಹುದು ಎಂದು ಹೇಳಿದರು.
ಜ್ಯೂಸ್ ಜಾಕಿಂಗ್(juice-jacking) ಎನ್ನುವುದು ಒಂದು ರೀತಿಯ ಸೈಬರ್ ದಾಳಿಯಾಗಿದೆ. USB ಪೋರ್ಟ್ಗಳು ಅಥವಾ ಕೇಬಲ್ಗಳನ್ನು ಸೂಕ್ಷ್ಮ ಮಾಹಿತಿಯನ್ನು ಕದಿಯಲು ಬಳಸಲಾಗುತ್ತದೆ.