"ʼಬಿಸ್ಮಿಲ್ಲಾʼ ಹೇಳುತ್ತಾ ರಕ್ಷಿಸಿದ ಮುಸ್ಲಿಮರು": ಪಹಲ್ಗಾಮ್ ದಾಳಿಯಲ್ಲಿ ಬದುಕುಳಿದ ಕರ್ನಾಟಕ ಮೂಲದ ಸಂತ್ರಸ್ತೆ ಹೇಳಿದ್ದೇನು?

Update: 2025-04-23 14:10 IST
"ʼಬಿಸ್ಮಿಲ್ಲಾʼ ಹೇಳುತ್ತಾ ರಕ್ಷಿಸಿದ ಮುಸ್ಲಿಮರು": ಪಹಲ್ಗಾಮ್ ದಾಳಿಯಲ್ಲಿ ಬದುಕುಳಿದ ಕರ್ನಾಟಕ ಮೂಲದ ಸಂತ್ರಸ್ತೆ ಹೇಳಿದ್ದೇನು?

ಮಂಜುನಾಥ ರಾವ್ ಕುಟುಂಬ (Photo credit: newindianexpress.com)

  • whatsapp icon

ಬೆಂಗಳೂರು: ಮಂಗಳವಾರ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಸಾವನ್ನಪ್ಪಿದ ಪ್ರವಾಸಿಗರಲ್ಲಿ ಕರ್ನಾಟಕದ ಇಬ್ಬರು ಸೇರಿದ್ದಾರೆ.

ಶಿವಮೊಗ್ಗ ನಿವಾಸಿ ಮಂಜುನಾಥ್ ರಾವ್ ಮತ್ತು ಬೆಂಗಳೂರಿನ ಮತ್ತಿಕೆರೆ ನಿವಾಸಿ ಭರತ್ ಭೂಷಣ್ ಭಯೋತ್ಪಾದಕರ ದಾಳಿಯಲ್ಲಿ ಮೃತಪಟ್ಟಿದ್ದು, ಆದರೆ ಅವರೊಂದಿಗೆ ಇದ್ದ ಅವರ ಕುಟುಂಬಗಳು ಸುರಕ್ಷಿತವಾಗಿವೆ.

ಸಾಫ್ಟ್‌ವೇರ್ ಉದ್ಯೋಗಿಯಾಗಿದ್ದ 41 ವರ್ಷದ ಭರತ್ ಭೂಷಣ್ ಗುಂಡೇಟಿನಿಂದ ಸಾವನ್ನಪ್ಪಿದ್ದಾರೆ, ಆದರೆ ಆ ಸಮಯದಲ್ಲಿ ಅವರೊಂದಿಗೆ ಇದ್ದ ಅವರ ಪತ್ನಿ ಸುಜಾತಾ ಮತ್ತು ಅವರ ಮೂರು ವರ್ಷದ ಮಗ ದಾಳಿಯಿಂದ ಬದುಕುಳಿದಿದ್ದಾರೆ ಎಂದು ತಿಳಿದುಬಂದಿದೆ.

ಪ್ರಸ್ತುತ ಕಾಶ್ಮೀರದಲ್ಲಿರುವ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ, ಅವರು ಎಕ್ಸ್‌ನಲ್ಲಿ ಪೋಸ್ಟ್ ಮೂಲಕ ಸುದ್ದಿಯನ್ನು ದೃಢಪಡಿಸಿದ್ದಾರೆ. ಹಾಗೂ, ಅನಂತನಾಗ್‌ನಲ್ಲಿ ಮೃತರ ಕುಟುಂಬದ ಸುರಕ್ಷಿತ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ ಮತ್ತು ಅವರನ್ನು ಆದಷ್ಟು ಬೇಗ ಬೆಂಗಳೂರಿಗೆ ಸಾಗಿಸಲಾಗುವುದು ಎಂದು ಅವರು ಹೇಳಿದ್ದಾರೆ.

47 ವರ್ಷದ ರಿಯಲ್ ಎಸ್ಟೇಟ್ ಏಜೆಂಟ್ ಮಂಜುನಾಥ ರಾವ್ ಅವರು ಕೂಡಾ ಗುಂಡಿನ ದಾಳಿಯಲ್ಲಿ ಮೃತಪಟ್ಟಿದ್ದು, ಅವರ ಪತ್ನಿ ಪಲ್ಲವಿ ಮತ್ತು ಅವರ 18 ವರ್ಷದ ಮಗ ಸುರಕ್ಷಿತವಾಗಿದ್ದಾರೆ.

ಪಹಲ್ಗಾಮ್‌ನಿಂದ ದೂರವಾಣಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮಂಜುನಾಥ ರಾವ್ ಅವರ ಪತ್ನಿ ಪಲ್ಲವಿ, ಭಯೋತ್ಪಾದಕರು ತನ್ನ ಪತಿಯ ಮೇಲೆ ಗುಂಡು ಹಾರಿಸಿದಾಗ, ತಾನು ಮತ್ತು ತನ್ನ ಮಗ ಅಲ್ಲೇ ಇದ್ದೆವು ಎಂದು ಹೇಳಿದ್ದಾರೆ.

"ನಾವು ಕುದುರೆ ಸವಾರಿಯ ಮೂಲಕ ಸ್ಥಳಕ್ಕೆ ತಲುಪಿದ್ದೆವು. ನನ್ನ ಪತಿ ನನ್ನ ಮಗನಿಗೆ ತಿಂಡಿ ಖರೀದಿಸಲು ತೆರಳಿದ್ದರು. ಕೆಲವೇ ನಿಮಿಷಗಳಲ್ಲಿ, ನನ್ನ ಪತಿ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡು ಬಂತು. ಅವರು ನನ್ನ ಕಣ್ಣ ಮುಂದೆಯೇ ನಿಧನರಾದರು, ಮತ್ತು ನಾನು ಅಸಹಾಯಕಳಾಗಿದ್ದೆ. ನನ್ನನ್ನೂ ಕೊಲ್ಲುವಂತೆ ಉಗ್ರಗಾಮಿಗಳಿಗೆ ಕೇಳಿಕೊಂಡೆ. ನನ್ನ ಮಗ ಮತ್ತು ನಾನು ಇಬ್ಬರೂ ಉಗ್ರಗಾಮಿಗಳನ್ನು ನಮ್ಮನ್ನೂ ಕೊಲ್ಲುವಂತೆ ಕೇಳಿಕೊಂಡೆವು. ಆದರೆ ಭಯೋತ್ಪಾದಕ ನಮ್ಮನ್ನು ಕೊಲ್ಲುವುದಿಲ್ಲ, ಇದನ್ನು ಪ್ರಧಾನಿ ನರೇಂದ್ರ ಮೋದಿಯವರಿಗೆ ತಿಳಿಸಬೇಕೆಂದು ಹೇಳಿದ" ಎಂದು ಅವರು ಹೇಳಿದ್ದಾರೆ.

ದಾಳಿಯಿಂದ ನಮ್ಮನ್ನು ರಕ್ಷಿಸುವಲ್ಲಿ ನಮ್ಮ ಚಾಲಕ ಹಾಗೂ ಸ್ಥಳೀಯ ಮೂವರು ಮುಸ್ಲಿಮರು ಸಹಾಯ ಮಾಡಿದ್ದಾರೆ. ಘಟನೆ ನಡೆದಾಗಿನಿಂದ ಚಾಲಕ ನಮ್ಮೊಂದಿಗಿದ್ದಾನೆ. ಮೂವರು ಸ್ಥಳೀಯ ಮುಸ್ಲಿಮರು 'ಬಿಸ್ಮಿಲ್ಲಾ' ಎಂದು ಹೇಳುತ್ತಾ ದಾಳಿ ನಡೆದ ಸ್ಥಳದಿಂದ ಕೆಳಗೆ ಬರಲು ನಮಗೆ ಸಹಾಯ ಮಾಡಿದರು. ಅವರು ನನ್ನ ಸಹೋದರರಂತೆ ಇದ್ದರು. ಅವರಲ್ಲಿ ಒಬ್ಬರು ನನ್ನ ಮಗನನ್ನು ಎತ್ತಿಕೊಂಡು ಬಂದರು. ಇನ್ನಿಬ್ಬರು ಕಠಿಣ ಭೂಪ್ರದೇಶವನ್ನು ದಾಟಲು ನನಗೆ ಸಹಾಯ ಮಾಡಿದರು ಎಂದು ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News