ಉತ್ತರಾಖಂಡ| ಅಪ್ರಾಪ್ತೆಯ ಅತ್ಯಾಚಾರ, ಕೊಲೆ ಪ್ರಕರಣ: ಬಿಜೆಪಿ ಮುಖಂಡನ ವಿರುದ್ಧ ಪ್ರಕರಣ ದಾಖಲು

Update: 2024-06-27 11:12 GMT

ಸಾಂದರ್ಭಿಕ ಚಿತ್ರ (PTI)

ಹರಿದ್ವಾರ: ಹರಿದ್ವಾರದಲ್ಲಿ 13 ವರ್ಷದ ಬಾಲಕಿಯೊಬ್ಬಳ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರಾಖಂಡ ಪೊಲೀಸರು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಮುಖಂಡನೊಬ್ಬನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಪ್ರಮುಖ ಆರೋಪಿ ಆದಿತ್ಯ ರಾಜ್‌ ಸೈನಿ ಇತರ ಹಿಂದುಳಿದ ವರ್ಗಗಳ ಆಯೋಗದಲ್ಲಿ ಬಿಜೆಪಿಯ ನಾಮನಿರ್ದೇಶಿತ ಸದಸ್ಯನಾಗಿದ್ದಾನೆ. ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಆತನನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ.

ಪೊಲೀಸರ ಪ್ರಕಾರ ಬಾಲಕಿ ರವಿವಾರ ನಾಪತ್ತೆಯಾಗಿದ್ದಳು. ಆಕೆಯ ಕುಟುಂಬ ಆಕೆಯ ಮೊಬೈಲ್‌ ಫೋನ್‌ಗೆ ಕರೆ ಮಾಡಿದಾಗ ಅದನ್ನು ಸ್ವೀಕರಿಸಿದ್ದ ಆರೋಪಿ ಹುಡುಗಿ ತನ್ನ ಬಳಿ ಇದ್ದಾಳೆಂದು ತಿಳಿಸಿದ್ದ. ನಂತರ ಆ ಫೋನ್‌ ಸ್ವಿಚ್ಡ್‌ ಆಫ್‌ ಆದಾಗ ಬಾಲಕಿಯ ತಾಯಿ ಪೊಲೀಸ್‌ ದೂರು ನೀಡಿದ್ದರು.

ಅಪ್ರಾಪ್ತೆಯ ಮೃತದೇಹ ಮಂಗಳವಾರ ಬಹದ್ರಾಬಾದ್‌ ಪ್ರದೇಶದ ಹೆದ್ದಾರಿಯ ಪಕ್ಕ ಪತ್ತೆಯಾಗಿತ್ತು. ಬಿಜೆಪಿ ಮುಖಂಡ ಮತ್ತಾತನ ಸಹವರ್ತಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಹತ್ಯೆಗೈದಿದ್ದಾರೆಂದು ಬಾಲಕಿಯ ತಾಯಿ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ಆರೋಪಿಗಳ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಲಾಗಿದೆ. ಇಲ್ಲಿಯ ತನಕ ಯಾರನ್ನೂ ಬಂಧಿಸಲಾಗಿಲ್ಲ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News