ಮತದಾರರ ಸಂಖ್ಯೆಯಲ್ಲಿ ʼಅಸಾಮಾನ್ಯ ಹೆಚ್ಚಳʼದ ಬಗ್ಗೆ ಚುನಾವಣಾ ಆಯೋಗ ಸ್ಪಷ್ಟನೆ ನೀಡಬೇಕು: ಮಾಜಿ ಚುನಾವಣಾ ಆಯುಕ್ತ ಅಶೋಕ್ ಲವಾಸಾ ಆಗ್ರಹ

ಅಶೋಕ್ ಲವಾಸಾ (Photo: PTI)
ಹೊಸದಿಲ್ಲಿ: ಮಹಾರಾಷ್ಟ್ರ ಮತ್ತು ದಿಲ್ಲಿ ಸೇರಿದಂತೆ ಇತ್ತೀಚಿನ ಚುನಾವಣೆಗಳಲ್ಲಿ ಕಂಡು ಬಂದಿರುವ ಮತದಾರರ ಸಂಖ್ಯೆಯಲ್ಲಿನ ಅಸಾಮಾನ್ಯ ಹೆಚ್ಚಳದ ಬಗ್ಗೆ ಚುನಾವಣಾ ಆಯೋಗ (ಇಸಿ) ಸ್ಪಷ್ಟನೆ ನೀಡಬೇಕು ಎಂದು ಮಾಜಿ ಚುನಾವಣಾ ಆಯುಕ್ತ ಅಶೋಕ್ ಲವಾಸಾ ಆಗ್ರಹಿಸಿದ್ದಾರೆ.
ಈ ಚುನಾವಣೆಗಳಲ್ಲಿ ಮತದಾರರ ಸಂಖ್ಯೆಯಲ್ಲಿನ ಅನುಮಾನಸ್ಪದ ಹೆಚ್ಚಳದ ಬಗ್ಗೆ ವಿರೋಧ ಪಕ್ಷಗಳು ಪದೇ ಪದೇ ಕಳವಳ ವ್ಯಕ್ತಪಡಿಸಿತ್ತು.
ಮತದಾರರ ಸಂಖ್ಯೆಯಲ್ಲಿನ ಹೆಚ್ಚಳಕ್ಕೆ ಸಂಬಂಧಿಸಿದಂತೆ, ನೋಂದಾಯಿಸಲಾದ ಮತದಾರರ ಸಂಖ್ಯೆ ಅಸಹಜವಾಗಿ ಏಕೆ ಹೆಚ್ಚಾಗಿದೆ ಎಂಬುದನ್ನು ಚುನಾವಣಾ ಆಯೋಗ ವಿವರಿಸಬೇಕು ಎಂದು ಲವಾಸಾ New Indian Express ಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.
“ಈ ಜನರ ಹೆಸರು ಈಗಾಗಲೇ ಬೇರೆ ಸ್ಥಳದ ಮತದಾರರ ಪಟ್ಟಿಯಲ್ಲಿ ದಾಖಲಾಗಿದೆಯೇ ಎಂಬುದು ಪ್ರಶ್ನೆ. ಚುನಾವಣಾ ಆಯೋಗವು ಈಗಾಗಲೇ ರಾಜಕೀಯ ಪಕ್ಷಗಳು ಮತ್ತು ತಾಂತ್ರಿಕ ಇಲಾಖೆಗಳೊಂದಿಗೆ ಸಮಾಲೋಚನೆಯಲ್ಲಿದೆ. ಆದ್ದರಿಂದ, ಈಗಾಗಲೇ 98 ಕೋಟಿ ನೋಂದಾಯಿತ ಮತದಾರರಿರುವುದರಿಂದ ಶೀಘ್ರವೇ ಇದಕ್ಕೊಂದು ಪರಿಹಾರವನ್ನು ಕಂಡುಹಿಡಿಯಬೇಕು, ”ಎಂದು ಲವಾಸಾ ಹೇಳಿದ್ದಾರೆ.
ಒಂದೇ ವ್ಯಕ್ತಿ ಒಂದಕ್ಕಿಂತ ಹೆಚ್ಚು ಸ್ಥಳಗಳಲ್ಲಿ ನೋಂದಾಯಿಸಿಕೊಂಡಿದ್ದಾರೆ. ಒಂದಕ್ಕಿಂತ ಹೆಚ್ಚು ಸ್ಥಳಗಳಲ್ಲಿ ಎಷ್ಟು ಜನರನ್ನು ನೋಂದಾಯಿಸಿಕೊಳ್ಳಬಹುದು ಎಂಬುದು ಇನ್ನೂ ತಿಳಿದಿಲ್ಲ ಎಂದಿದ್ದಾರೆ.
"ನನ್ನ ಅಭಿಪ್ರಾಯದಲ್ಲಿ, ಈ ನಕಲು ಮಾಡುವಿಕೆಯನ್ನು ತೆಗೆದುಹಾಕಲು ಆಧಾರ್ ಮಾತ್ರ ಮತದಾನಕ್ಕೆ ಬಳಸುವುದು ಸರಿಯಾದ ಪರಿಹಾರವಾಗಬಹುದು" ಎಂದು ಲವಾಸಾ ಹೇಳಿದರು.
ಆಧಾರ್ ಅನ್ನು ಮತದಾರರ ಕಾರ್ಡ್ನೊಂದಿಗೆ ಲಿಂಕ್ ಮಾಡುವ ಮೂಲಕ ಈಗಾಗಲೇ ಬೇರೆಡೆ ನೋಂದಾಯಿಸಲಾದ ಮತದಾರರನ್ನು ಪಟ್ಟಿಯಿಂದ ತೆಗೆದುಹಾಕುವ ಏಕೈಕ ಮಾರ್ಗವಾಗಿದೆ. ಏಕೆಂದರೆ ಅದು ವೈಯಕ್ತಿಕ ಬಯೋಮೆಟ್ರಿಕ್ಗಳನ್ನು ಹೊಂದಿರುತ್ತದೆ, ಆದರೆ, ಅದೇ ವೇಳೆ, ಮತದಾನದ ಹಕ್ಕು ಆಧಾರ್ ಅನ್ನು ಹೊಂದಿರುವುದರ ಮೇಲೆ ಅವಲಂಬಿತವಾಗಿರಬಾರದು ಎಂದು ಲವಾಸಾ ಹೇಳಿದರು.