ʼಹವನʼದಿಂದ ಮಳೆಯಾಗಬಹುದೇ ಎಂದು ಸಂಶೋಧನೆಗಿಳಿದ ವಿಜ್ಞಾನಿಗಳ ತಂಡ!

ಸಾಂದರ್ಭಿಕ ಚಿತ್ರ | PC : PTI
ಭೋಪಾಲ್ : ಮಧ್ಯಪ್ರದೇಶದಲ್ಲಿ ವಿಜ್ಞಾನಿಗಳ ತಂಡವೊಂದು ಹವನ(ಯಜ್ಞ) ಮಳೆಯಾಗಲು ಸಹಾಯ ಮಾಡುತ್ತಾ ಎಂದು ಸಂಶೋಧನೆ ನಡೆಸುತ್ತಿದ್ದಾರೆ.
ಮಧ್ಯಪ್ರದೇಶ ಕೌನ್ಸಿಲ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿ ಮತ್ತು ಸೈಂಟಿಫಿಕ್ ಕೌನ್ಸಿಲ್, ಇಂದೋರ್ನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟ್ರಾಪಿಕಲ್ ಮೆಟಿಯರಾಲಜಿ (ಐಐಟಿಎಂ) ವಿಜ್ಞಾನಿಗಳು ಔಷಧೀಯ ಸಸ್ಯವಾದ ಸಮೋವಲ್ಲಿ (ಸಾರ್ಕೊಸ್ಟೆಮ್ಮಾ ಬ್ರೆವಿಸ್ಟಿಗ್ಮಾ, ಒಂದು ರೀತಿಯ ಓಲಿಯಾಂಡರ್) ರಸವನ್ನು ಬೆಂಕಿಗೆ ಅರ್ಪಿಸುವ ಸೋಮ್ ಯಜ್ಞ ಎಂಬ ಹವನವು ಪರಿಸರವನ್ನು ಶುದ್ಧೀಕರಿಸುತ್ತಾ? ಮೋಡವನ್ನು ಕ್ರೋಡಿಕರಿಸಿ ಮಳೆಯನ್ನು ತರುತ್ತಾ ಎಂದು ಪತ್ತೆ ಹಚ್ಚಲು ಸಂಶೋಧನೆ ಪ್ರಾರಂಭಿಸಿದ್ದಾರೆ ಎಂದು ವರದಿಯಾಗಿದೆ.
ಸುಮಾರು 15 ವಿಜ್ಞಾನಿಗಳ ತಂಡ ಪ್ರಸ್ತುತ ಉಜ್ಜಯಿನಿಯ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಎಪ್ರಿಲ್ 24 ರಿಂದ 29ರವರೆಗೆ ಅಧ್ಯಯನ ನಡೆಸುತ್ತಿದೆ. ಅಲ್ಲಿ ಸೋಮ ಯಜ್ಞವನ್ನು ಮಾಡುತ್ತಿದ್ದಾರೆ. ಅವರು ವಿವಿಧ ಅನಿಲಗಳ ಬಿಡುಗಡೆ, ತಾಪಮಾನ ಮತ್ತು ತೇವಾಂಶದಲ್ಲಿನ ಬದಲಾವಣೆ, ಎಪ್ರಿಲ್ 24ರಿಂದ 29ರವರೆಗೆ ಮೋಡದ ಘನೀಕರಣದ ಬಗ್ಗೆ ಸಂಶೋಧನೆ ನಡೆಸುತ್ತಿದ್ದಾರೆ.
ಭಾರತೀಯ ಹವಾಮಾನ ಇಲಾಖೆಯ ನಿವೃತ್ತ ವಿಜ್ಞಾನಿ ರಾಜೇಶ್ ಮಾಲಿ ಈ ಕುರಿತು ಪ್ರತಿಕ್ರಿಯಿಸಿ, ಇದು ಎಪ್ರಿಲ್ 24ರಂದು ಪ್ರಾರಂಭವಾದ ವಿಶಿಷ್ಟ ಸಂಶೋಧನೆಯಾಗಿದೆ. ಮುಂದಿನ ಕೆಲವು ವರ್ಷಗಳವರೆಗೆ ಸಂಶೋಧನೆ ಮುಂದುವರಿಯಲಿದೆ. ನಾವು ಕನಿಷ್ಠ 13 ಉಪಕರಣಗಳನ್ನು ಬಳಸಿಕೊಂಡು ವಿವಿಧ ರೀತಿಯಲ್ಲಿ ಅಳೆಯುತ್ತಿದ್ದೇವೆ. ಕ್ಲೌಡ್ ಕಂಡೆನ್ಸೇಶನ್ ನ್ಯೂಕ್ಲಿಯಸ್ ಕೌಂಟರ್ (CCN counter) ಮತ್ತು ಟೆಥರ್ಸೊಂಡೆ(Tethersonde) (ವಾತಾವರಣದ ನಿಯತಾಂಕಗಳನ್ನು ಅಳೆಯುವ ಸಾಧನ)ಎರಡು ಮುಖ್ಯ ಸಾಧನಗಳನ್ನು ಬಳಸಿಕೊಂಡು ಅಧ್ಯಯನ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.