ಅಸ್ಸಾಂನಲ್ಲಿ ಇನ್ಮುಂದೆ ಆಧಾರ್‌ ಗೆ ಅರ್ಜಿ ಸಲ್ಲಿಸಲು NRC ರಸೀದಿ ಸಂಖ್ಯೆ ಕಡ್ಡಾಯ : ಸಿಎಂ ಹಿಮಂತ ಬಿಸ್ವ ಶರ್ಮ

Update: 2024-09-07 15:59 GMT

ಹಿಮಂತ ಬಿಸ್ವ ಶರ್ಮ | PC : PTI

ಗುವಾಹಟಿ : ಅಸ್ಸಾಂನಲ್ಲಿ ಇನ್ನು ಮುಂದೆ ಆಧಾರ್‌ ಗೆ ಅರ್ಜಿ ಸಲ್ಲಿಸುವಾಗ ಎನ್ ಆರ್ ಸಿ ರಸೀದಿ ಸಂಖ್ಯೆ ಕಡ್ಡಾಯ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಶನಿವಾರ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ''ಆಧಾರ್ ಕಾರ್ಡ್‌ಗಾಗಿ ಅರ್ಜಿಗಳು ಜನಸಂಖ್ಯೆಗಿಂತ ಹೆಚ್ಚಿವೆ. ಇದು ಅನುಮಾನಾಸ್ಪದ ವಿದೇಶಿ ನಾಗರಿಕರಿದ್ದಾರೆ ಎಂದು ಸೂಚಿಸುತ್ತದೆ. ಹೊಸ ಅರ್ಜಿದಾರರು ತಮ್ಮ ಎನ್‌ಆರ್‌ಸಿ ಅರ್ಜಿ ರಶೀದಿ ಸಂಖ್ಯೆಯನ್ನು (ಎಆರ್‌ಎನ್) ಸಲ್ಲಿಸಬೇಕು ಎಂದು ನಾವು ನಿರ್ಧರಿಸಿದ್ದೇವೆ” ಎಂದು ಹೇಳಿದರು.

ಈ ಉದ್ದೇಶಕ್ಕಾಗಿ ಎಸ್‌ಒಪಿ ಸಿದ್ಧಪಡಿಸಲಾಗುವುದು, ಅಕ್ಟೋಬರ್ 1 ರಿಂದ ಜಾರಿಗೆ ಬರಲಿದೆ. ರಾಷ್ಟ್ರೀಯ ನಾಗರಿಕರ ನೋಂದಣಿಯ (ಎನ್‌ಆರ್‌ಸಿ) ಅರ್ಜಿ ರಶೀದಿ ಸಂಖ್ಯೆಯನ್ನು ಸಲ್ಲಿಸುವುದರಿಂದ ಅಕ್ರಮ ವಿದೇಶಿಗರನ್ನು ಪತ್ತೆ ಹಚ್ಚಬಹುದು. ಆಧಾರ್ ಕಾರ್ಡ್‌ಗಳನ್ನು ನೀಡುವಲ್ಲಿ ರಾಜ್ಯ ಸರ್ಕಾರವು ಅತ್ಯಂತ ಕಟ್ಟುನಿಟ್ಟಾಗಿದೆ ಎಂದು ಹಿಮಂತ್ ಬಿಸ್ವ ಶರ್ಮ ಹೇಳಿದರು.

ಅಸ್ಸಾಂನಲ್ಲಿ ಆಧಾರ್ ಪಡೆಯುವುದು ಸುಲಭವಲ್ಲ. ಇತರ ರಾಜ್ಯಗಳೂ ಆಧಾರ್ ಕಾರ್ಡ್‌ಗಳನ್ನು ನೀಡುವಲ್ಲಿ ಕಟ್ಟುನಿಟ್ಟಾಗಿ ಕ್ರಮಗಳನ್ನು ಕೈಗೊಳ್ಳುತ್ತದೆ ಎಂದು ಆಶಿಸುತ್ತೇವೆ. ಈಗಾಗಲೇ ಎನ್‌ಆರ್‌ಸಿ ಪ್ರಕ್ರಿಯೆಯಲ್ಲಿ ಬಯೋಮೆಟ್ರಿಕ್ಸ್ ಮಾಡಿರುವ 9.55 ಲಕ್ಷ ಜನರು ಎಆರ್‌ಎನ್ ಸಲ್ಲಿಕೆ ಪ್ರಕ್ರಿಯೆ ಬೇಕಾಗಿಲ್ಲ. ಅವರು ತಮ್ಮ ಕಾರ್ಡ್‌ಗಳನ್ನು ಪಡೆಯಲಿದ್ದಾರೆ ಎಂದು ಸಿಎಂ ಹೇಳಿದರು.

"ಕಳೆದ ಎರಡು ತಿಂಗಳಲ್ಲಿ ಹಲವಾರು ಬಾಂಗ್ಲಾದೇಶೀಯರನ್ನು ಬಂಧಿಸಿ ನೆರೆಯ ದೇಶದ ಅಧಿಕಾರಿಗಳಿಗೆ ಹಸ್ತಾಂತರಿಸಿರುವುದರಿಂದ ಅಕ್ರಮ ವಿದೇಶಿಯರನ್ನು ಗುರುತಿಸುವ ಪ್ರಕ್ರಿಯೆಯನ್ನು ತಮ್ಮ ಸರ್ಕಾರ ತೀವ್ರಗೊಳಿಸಲಿದೆ" ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News