ವಯನಾಡ್ ಭೂಕುಸಿತ ಸಂತ್ರಸ್ತರ ಸಾಲಗಳನ್ನು ಮನ್ನಾ ಮಾಡದಿರುವುದು ದ್ರೋಹ: ಪ್ರಿಯಾಂಕಾ ಗಾಂಧಿ

ಪ್ರಿಯಾಂಕಾ ಗಾಂಧಿ | PTI
ಹೊಸದಿಲ್ಲಿ: ವಯನಾಡ್ ಭೂಕುಸಿತ ಸಂತ್ರಸ್ತರ ಸಾಲಗಳನ್ನು ಮನ್ನಾ ಮಾಡದಿರುವ ಕೇಂದ್ರ ಸರಕಾರದ ನಿರ್ಧಾರವು ಅವರಿಗೆ ಬಗೆದಿರುವ ದ್ರೋಹವಾಗಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಗುರುವಾರ ಹೇಳಿದ್ದಾರೆ.
ನೈಸರ್ಗಿಕ ವಿಕೋಪಗಳ ಕುರಿತು ಆರ್ ಬಿ ಐ ನಿರ್ದೇಶನಗಳಂತೆ ಸಾಲಗಳನ್ನು ಕೇವಲ ಮರುಹೊಂದಾಣಿಕೆ ಅಥವಾ ಪುನರ್ ರಚನೆ ಮಾಡಬಹುದು ಎಂದು ಕೇಂದ್ರ ಸರಕಾರವು ಕೇರಳ ಉಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿರುವ ಅಫಿಡವಿಟ್ ಅನ್ನು ತನ್ನ ಫೇಸ್ಬುಕ್ ಪೋಸ್ಟ್ನಲ್ಲಿ ಉಲ್ಲೇಖಿಸಿರುವ ವಯನಾಡ್ ಸಂಸದೆಯೂ ಆಗಿರುವ ಪ್ರಿಯಾಂಕಾ, ಭೂಕುಸಿತ ಸಂತ್ರಸ್ತರು ಮನೆಗಳು, ಭೂಮಿ, ಜೀವನೋಪಾಯಗಳು ಸೇರಿದಂತೆ ಎಲ್ಲವನ್ನೂ ಕಳೆದುಕೊಂಡಿದ್ದಾರೆ. ಆದರೂ ಸರಕಾರವು ಅವರ ಸಾಲಗಳನ್ನು ಮನ್ನಾ ಮಾಡಲು ನಿರಾಕರಿಸಿದೆ. ಬದಲಾಗಿ ಅವರಿಗೆ ಕೇವಲ ಸಾಲ ಮರುಹೊಂದಾಣಿಕೆಗೆ ಅವಕಾಶ ನೀಡಿದೆ. ಇದು ಪರಿಹಾರವಲ್ಲ. ಇದು ದ್ರೋಹ ಎಂದು ಹೇಳಿದ್ದಾರೆ.
‘ಕಾಂಗ್ರೆಸ್ ಕೇಂದ್ರದ ಈ ನಿಲುವನ್ನು ಬಲವಾಗಿ ಖಂಡಿಸುತ್ತದೆ. ನಾವು ವಯನಾಡಿನ ಸಂತ್ರಸ್ತರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಿಲ್ಲುತ್ತೇವೆ. ಅವರಿಗೆ ನ್ಯಾಯ ಸಿಗುವವರೆಗೂ ಅವರ ಧ್ವನಿಯಾಗಿ ಪ್ರತಿಯೊಂದೂ ವೇದಿಕೆಯಲ್ಲಿ ಹೋರಾಟ ನಡೆಸುತ್ತೇವೆ’ ಎಂದಿದ್ದಾರೆ.