ಕೇಂದ್ರದ ಪ್ರತಿಕೂಲ ನೀತಿಯ ಹೊರತಾಗಿಯೂ ಕೇರಳದಲ್ಲಿ ಪ್ರಗತಿ: ಪಿಣರಾಯಿ ವಿಜಯನ್

ಪಿಣರಾಯಿ ವಿಜಯನ್ | PC : PTI
ತಿರುವನಂತಪುರಮ್: ಕೇರಳದ ಬಗ್ಗೆ ಕೇಂದ್ರ ಸರಕಾರದ ನಕಾರಾತ್ಮಕ ಧೋರಣೆಯ ಹೊರತಾಗಿಯೂ ರಾಜ್ಯವು ಅಭಿವೃದ್ಧಿ ಸಾಧಿಸಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೋಮವಾರ ಹೇಳಿದ್ದಾರೆ.
ಎಡ ರಂಗ (ಎಲ್ಡಿಎಫ್) ಸರಕಾರವು ಒಂಭತ್ತು ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ಕಾಸರಗೋಡಿನಲ್ಲಿ ನಡೆದ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.
‘‘ಈ ಒಂಭತ್ತು ವರ್ಷಗಳ ಅವಧಿಯಲ್ಲಿ ರಾಜ್ಯದಲ್ಲಿ ಹಲವು ಪ್ರಾಕೃತಿಕ ವಿಕೋಪಗಳು ಸಂಭವಿಸಿದವು. 2018ರ ಮಹಾಪ್ರವಾಹ, 2019ರ ಕೋವಿಡ್-19 ಮತ್ತು ಕಳೆದ ವರ್ಷದ ವಯನಾಡ್ ಭೂಕುಸಿತ ಅವುಗಳ ಪೈಕಿ ಕೆಲವು. ಈ ಯಾವುದೇ ಸಂದರ್ಭದಲ್ಲಿ ರಾಜ್ಯವು ಕೇಂದ್ರ ಸರಕಾರದಿಂದ ಅಗತ್ಯ ನೆರವನ್ನು ಪಡೆಯಲಿಲ್ಲ. ಕೇಂದ್ರ ಸರಕಾರವು ರಾಜ್ಯದ ಬಗ್ಗೆ ನಕಾರಾತ್ಮಕ ಧೋರಣೆಯನ್ನು ಅನುಸರಿಸಿತ್ತು’’ ಎಂದು ಪಿಣರಾಯಿ ವಿಜಯನ್ ಹೇಳಿದರು.
‘‘ಬೇರೆಯವರು ಕೊಡುವ ನೆರವಿಗೂ ಅವರು ಅಡ್ಡ ಬಂದರು. ಕೇರಳವು ನೆಲಕಚ್ಚಲಿ, ಇನ್ನಷ್ಟು ನೆಲಕಚ್ಚಲಿ ಎನ್ನುವ ವಿನಾಶಕಾರಿಕ ಮನೋಭಾವದಿಂದ ಕೇಂದ್ರ ಸರಕಾರವು ವರ್ತಿಸಿತು. ಆದರೆ, ರಾಜ್ಯವನ್ನು ಉಳಿಸುವ ರಾಜ್ಯ ಸರಕಾರದ ಪ್ರಯತ್ನಗಳಿಗೆ ಜನರು ಕೈಜೋಡಿಸಿದರು’’ ಎಂದು ಅವರು ನುಡಿದರು.
‘‘ರಾಜ್ಯವು ನೆಲಕಚ್ಚಬೇಕೆಂದು ಅವರು ಬಯಸಿದರೂ, ಅವರು ವಿವಿಧ ಕ್ಷೇತ್ರಗಳಲ್ಲಿ ರಾಜ್ಯಕ್ಕೆ ಹಲವು ಪ್ರಶಸ್ತಿಗಳನ್ನು ಕೊಡಲೇಬೇಕಾಯಿತು’’ ಎಂದರು.