ʼಶರಬತ್ ಜಿಹಾದ್ʼ ಹೇಳಿಕೆ | ರಾಮ್ದೇವ್ಗೆ ದಿಲ್ಲಿ ಹೈಕೋರ್ಟ್ ತರಾಟೆ

ರಾಮ್ದೇವ್ (PTI)
ಹೊಸದಿಲ್ಲಿ: ʼಶರಬತ್ ಜಿಹಾದ್ʼ ಹೇಳಿಕೆ ನೀಡಿದ ಪತಂಜಲಿ ಸಂಸ್ಥಾಪಕ ಮತ್ತು ಯೋಗ ಗುರು ರಾಮ್ದೇವ್ ರನ್ನು ದಿಲ್ಲಿ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದ್ದು, ಈ ಹೇಳಿಕೆಯು ಅಸಮರ್ಥನೀಯ ಮತ್ತು ನ್ಯಾಯಾಲಯಕ್ಕೆ ಆಘಾತ ತಂದಿದೆ ಎಂದು ಹೇಳಿದೆ.
ರಾಮ್ದೇವ್ ಈ ತಿಂಗಳ ಆರಂಭದಲ್ಲಿ ಪತಂಜಲಿಯ ರೋಸ್ ಶರಬತ್ ಪ್ರಾರಂಭಿಸಿದರು. ರೋಸ್ ಶರಬತ್ ಪ್ರಚಾರದ ವೀಡಿಯೊದಲ್ಲಿ ʼನಿಮಗೆ ಶರಬತ್ ನೀಡುವ ಕಂಪೆನಿಗಳಿದೆ. ಆದರೆ, ಆ ಕಂಪೆನಿಗಳು ಗಳಿಸಿದ ಹಣವನ್ನು ಮದರಸಾಗಳು ಮತ್ತು ಮಸೀದಿಗಳನ್ನು ನಿರ್ಮಿಸಲು ಬಳಸಲಾಗುತ್ತದೆ. ಆದರೆ ನೀವು ಪತಂಜಲಿಯ ರೋಸ್ ಶರಬತ್ ಕುಡಿದರೆ ಗುರುಕುಲಗಳು ನಿರ್ಮಾಣವಾಗುತ್ತವೆ, ಆಚಾರ್ಯ ಕುಲಂ ಅಭಿವೃದ್ಧಿಯಾಗುತ್ತದೆ, ಪತಂಜಲಿ ವಿಶ್ವವಿದ್ಯಾಲಯವು ವಿಸ್ತರಿಸುತ್ತದೆ ಮತ್ತು ಭಾರತೀಯ ಶಿಕ್ಷಾ ಮಂಡಳಿಯು ಬೆಳೆಯುತ್ತದೆʼʼ ಎಂದು ಹೇಳಿದ್ದರು.
ವೀಡಿಯೊದಲ್ಲಿ ಗುರಿಯಾಗಿಸಿಕೊಂಡ ಕಂಪೆನಿಯ ಹೆಸರನ್ನು ರಾಮದೇವ್ ಹೇಳದಿದ್ದರೂ ʼಹಮ್ದರ್ದ್ ರೂಹ್ ಅಫ್ಜಾʼವನ್ನು ಗುರಿಯಾಗಿಸಿಕೊಂಡಿದ್ದರು ಎಂದು ಹೇಳಲಾಗಿತ್ತು.
ಇದನ್ನು ಪ್ರಶ್ನಿಸಿ ಹಮ್ದರ್ದ್ ಕಂಪೆನಿಯು ಬಾಬಾ ರಾಮ್ದೇವ್ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿತ್ತು. ಮಂಗಳವಾರ ದಿಲ್ಲಿ ಹೈಕೋರ್ಟ್ಗೆ ಹಮ್ದರ್ದ್ ಪರವಾಗಿ ಹಾಜರಾದ ಹಿರಿಯ ವಕೀಲ ಮುಕುಲ್ ರೋಹಟಗಿ, ಇದು ಆಘಾತಕಾರಿ ಮತ್ತು ಕೋಮು ವಿಭಜನೆಯನ್ನು ಸೃಷ್ಟಿಸುವ ಪ್ರಕರಣವಾಗಿದೆ. ಇದು ದ್ವೇಷದ ಭಾಷಣಕ್ಕೆ ಸಮಾನವಾಗಿದೆ ಎಂದು ವಾದಿಸಿದರು.