ಮಕ್ಕಳ ಕಳ್ಳಸಾಗಣೆ ಪ್ರಕರಣದ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದ್ದ ಅಲಹಾಬಾದ್ ಹೈಕೋರ್ಟ್ನ ಆದೇಶ ವಜಾಗೊಳಿಸಿದ ಸುಪ್ರೀಂ ಕೋರ್ಟ್

Photo credit: PTI
ಹೊಸದಿಲ್ಲಿ: ಮಕ್ಕಳ ಕಳ್ಳಸಾಗಣೆ ಪ್ರಕರಣದಲ್ಲಿ ಮೂವರಿಗೆ ಜಾಮೀನು ಮಂಜೂರು ಮಾಡಿದ್ದ ಅಲಹಾಬಾದ್ ಹೈಕೋರ್ಟ್ನ ಆದೇಶವನ್ನು ಮಂಗಳವಾರ ವಜಾಗೊಳಿಸಿದ ಸುಪ್ರೀಂ ಕೋರ್ಟ್, ಹೈಕೋರ್ಟ್ ಹಾಗೂ ಉತ್ತರ ಪ್ರದೇಶ ಸರಕಾರದ ಅಸಡ್ಡೆಯ ವರ್ತನೆಯನ್ನೂ ತರಾಟೆಗೆ ತೆಗೆದುಕೊಂಡಿದೆ.
ಪ್ರಕರಣದ ವಿಚಾರಣೆ ನಡೆಸಿದ ನ್ಯಾ. ಜೆ.ಬಿ.ಪಾರ್ದಿವಾಲಾ ಹಾಗೂ ನ್ಯಾ. ಆರ್.ಮಹಾದೇವಂತೆ ಅವರನ್ನೊಳಗೊಂಡ ನ್ಯಾಯಪೀಠವು, "ಜಾಮೀನು ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಉಡಾಫೆಯಿಂದ ನಿರ್ವಹಿಸಿದ್ದು, ಇದರಿಂದ ಆರೋಪಿಗಳಿಗೆ ತಲೆಮರೆಸಿಕೊಳ್ಳಲು ಅವಕಾಶ ಲಭಿಸಿದೆ. ಈ ಆರೋಪಿಗಳು ಸಮಾಜಕ್ಕೆ ಗಂಭೀರ ಅಪಾಯವನ್ನೊಡ್ಡಿದ್ದಾರೆ. ಜಾಮೀನು ಮಂಜೂರು ಮಾಡುವಾಗ ಹೈಕೋರ್ಟ್ ಮಾಡಬಹುದಾಗಿದ್ದ ಕನಿಷ್ಠ ಕೆಲಸವೆಂದರೆ, ಪ್ರತಿ ವಾರ ಪೊಲೀಸರೆದುರು ಹಾಜರಾಗಬೇಕು ಎಂದು ಆರೋಪಿಗಳಿಗೆ ಶರತ್ತು ವಿಧಿಸುವುದಾಗಿತ್ತು. ಪೊಲೀಸರೀಗ ಆರೋಪಿಗಳೆಲ್ಲರ ಚಲನವಲನದ ಮೇಲೆ ನಿಗಾ ಕಳೆದುಕೊಂಡಿದ್ದಾರೆ" ಎಂದು ತರಾಟೆಗೆ ತೆಗೆದುಕೊಂಡಿದೆ.
ಪೋಷಕರು ತಮ್ಮ ಮಕ್ಕಳನ್ನು ರಕ್ಷಿಸಲು ಜಾಗೃತರಾಗಿರಬೇಕು ಹಾಗೂ ಎಚ್ಚರಿಕೆಯಿಂದಿರಬೇಕು ಎಂದು ಕಿವಿಮಾತು ಹೇಳಿದ ನ್ಯಾಯಪೀಠ, ಅವರು ಯಾವಾಗಲೂ ಪೊಲೀಸರು ಹಾಗೂ ಸರಕಾರಿ ಪ್ರಾಧಿಕಾರಗಳನ್ನು ಅವಲಂಬಿಸಲು ಸಾಧ್ಯವಿಲ್ಲ ಎಂದು ಎಚ್ಚರಿಸಿತು.
ಈ ವೇಳೆ ನವಜಾತ ಶಿಶುಗಳ ಕಳ್ಳಸಾಗಣೆ ಕುರಿತು The Times of India ಮಾಡಿದ್ದ ವರದಿಯನ್ನು ಪರಿಗಣನೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್, ಎಲ್ಲ ರಾಜ್ಯಗಳಿಗೂ ಸಮಗ್ರ ಮಾರ್ಗಸೂಚಿ ಬಿಡುಗಡೆ ಮಾಡಿದೆ. "ನಾವು The Times of India ವರದಿಯನ್ನು ಗಂಭೀರವಾಗಿ ಪರಿಗಣಿಸಿದ್ದು, ಈ ವರದಿಯನ್ನು ಗಮನಿಸಿ, ದಿಲ್ಲಿಯ ಒಳಗೆ ಮತ್ತು ಹೊರಗೆ ಕಾರ್ಯನಿರ್ವಹಿಸುತ್ತಿರುವ ಇಂತಹ ಗುಂಪುಗಳನ್ನು ಮಟ್ಟ ಹಾಕಲು ಏನೆಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬ ಕುರಿತು ಪ್ರಕರಣದ ವಸ್ತುಸ್ಥಿತಿ ವರದಿಯನ್ನು ಸಲ್ಲಿಸುವಂತೆ ಪೊಲೀಸರಿಗೆ ಸೂಚಿಸಿದ್ದೇವೆ" ಎಂದು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ.
"ಈ ಪ್ರಕರಣವನ್ನು ಉತ್ತರ ಪ್ರದೇಶ ಸರಕಾರ ನಿಭಾಯಿಸಿರುವ ನೀತಿ ಹಾಗೂ ಜಾಮೀನು ಅರ್ಜಿಯ ವಿರುದ್ಧವೇಕೆ ಮೇಲ್ಮನವಿ ಸಲ್ಲಿಸಲಿಲ್ಲ ಎಂಬ ಕುರಿತು ನಾವು ತೀವ್ರ ಅಸಮಾಧಾನಗೊಂಡಿದ್ದೇವೆ" ಎಂದೂ ನ್ಯಾಯಾಲಯ ಚಾಟಿ ಬೀಸಿತು.