ಉತ್ತರ ಪ್ರದೇಶ | ನಾಲ್ಕು ಜಿಲ್ಲೆಗಳಲ್ಲಿ ಅಕ್ರಮ ಕಟ್ಟಡವೆಂದು ಆಪಾದಿಸಿ ಮದರಸಾಗಳು, ಮಸೀದಿಗಳ ವಿರುದ್ಧ ಕ್ರಮ

ಸಾಂದರ್ಭಿಕ ಚಿತ್ರ (credit: indiatvnews.com)
ಲಕ್ನೋ: ಉತ್ತರಪ್ರದೇಶದ ನಾಲ್ಕು ಜಿಲ್ಲೆಗಳಲ್ಲಿ ಅಕ್ರಮ ಕಟ್ಟಡವೆಂದು ಆಪಾದಿಸಿ 20ಕ್ಕೂ ಅಧಿಕ ಮದರಸಾಗಳು, ಮಸೀದಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ.
ʼಶ್ರಾವಸ್ತಿಯಲ್ಲಿ ಮಾನ್ಯತೆ ಪಡೆಯದ 12 ಮದರಸಾಗಳ ವಿರುದ್ಧ ಕ್ರಮವನ್ನು ಕೈಗೊಳ್ಳಲಾಗಿದೆ ಮತ್ತು ಅವುಗಳನ್ನು ಬಂದ್ ಮಾಡಿಸಲಾಗಿದೆ. ಈವರೆಗೆ ಅಕ್ರಮವಾಗಿ ನಿರ್ಮಿಸಲಾಗಿರುವ 32 ಮದರಸಾಗಳ ವಿರುದ್ಧ ಕ್ರಮವನ್ನು ಕೈಗೊಳ್ಳಲಾಗಿದೆ. ಭರ್ತಾ ರೋಶನ್ಗಢ ಗ್ರಾಮದಲ್ಲಿ ಭಿಂಗಾದಲ್ಲಿನ ಮಸೀದಿಯನ್ನು ಭಾಗಶಃ ಸರಕಾರಿ ಭೂಮಿಯಲ್ಲಿ ನಿರ್ಮಿಸಲಾಗಿದೆ. ಇದನ್ನು ಕಾರ್ಯಾಚರಣೆ ವೇಳೆ ಕೆಡವಲಾಗಿದೆʼ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಅಜಯ್ ಕುಮಾರ್ ದ್ವಿವೇದಿ ಹೇಳಿದರು.
ಮಹಾರಾಜ್ಗಂಜ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಅನುನಯ್ ಝಾ ಪ್ರತಿಕ್ರಿಯಿಸಿ, ಭಾರತ-ನೇಪಾಳ ಗಡಿಯ ಸಮೀಪದ ಹಳ್ಳಿಯಲ್ಲಿ 'ಮಝಾರ್' ಆಗಿ ಅಭಿವೃದ್ಧಿಪಡಿಸಲು ಉದ್ದೇಶಿಸಿದ್ದ ಅಕ್ರಮ ರಚನೆಯನ್ನು ಗ್ರಾಮದ ಮುಖ್ಯಸ್ಥರ ಸಮ್ಮುಖದಲ್ಲಿ ತೆಗೆದುಹಾಕಲಾಗಿದೆ. ಇದಲ್ಲದೆ ತುತ್ತಿಬರಿ ಪೊಲೀಸ್ ಠಾಣೆ ವ್ಯಾಪ್ತಿಯ ರಾಮನಗರ ಗ್ರಾಮದಲ್ಲಿ ನಿರ್ಮಿಸಲಾಗಿದ್ದ ಅಕ್ರಮ ಮದರಸಾವನ್ನು ಕೂಡ ನೆಲಸಮಗೊಳಿಸಲಾಗಿದೆ ಎಂದು ಹೇಳಿದ್ದಾರೆ.
ʼಲಖಿಂಪುರ ಖೇರಿ ಜಿಲ್ಲೆಯ ಕೃಷ್ಣನಗರ ಕಾಲೋನಿಯಲ್ಲಿ ತಾತ್ಕಾಲಿಕವಾಗಿ ನಿರ್ಮಿಸಲಾಗಿದ್ದ ಮಸೀದಿಯನ್ನು ತೆರವುಗೊಳಿಸಲಾಗಿದೆ. ಚಂದನ್ ಚೌಕಿ ಗ್ರಾಮದಲ್ಲಿ 80 ವರ್ಷಗಳ ಹಿಂದೆ ನಿರ್ಮಿಸಲಾಗಿದ್ದ ಈದ್ಗಾವನ್ನು ತೆರವು ಮಾಡಲಾಗುತ್ತಿದೆʼ ಎಂದು ಮ್ಯಾಜಿಸ್ಟ್ರೇಟ್ ದುರ್ಗಾ ಶಕ್ತಿ ನಾಗ್ಪಾಲ್ ಹೇಳಿದ್ದಾರೆ.
ಬಹ್ರೈಚ್ನಲ್ಲಿ ಏಳು ಅಕ್ರಮ ಮದರಸಾಗಳ ವಿರುದ್ಧ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಬಹ್ರೈಚ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಮೋನಿಕಾ ರಾಣಿ ಹೇಳಿದ್ದಾರೆ. ಶ್ರಾವಸ್ತಿ ಮತ್ತು ಸಿದ್ಧಾರ್ಥನಗರದಲ್ಲಿ ಕೂಡ ಅಕ್ರಮ ಕಟ್ಟಡಗಳನ್ನು ನೆಲಸಮ ಮಾಡಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.