ಸಂವಿಧಾನವು ಸನಾತನ ಧರ್ಮದ ಸಾಕಾರ ರೂಪ , ಧಾರ್ಮಿಕ ಮತಾಂತರಗಳು ಸಂವಿಧಾನ ವಿರೋಧಿ: ಉಪರಾಷ್ಟ್ರಪತಿ ಧನ್ಕರ್
ಹೊಸದಿಲ್ಲಿ: ಧಾರ್ಮಿಕ ಮತಾಂತರಗಳು ರಾಷ್ಟ್ರೀಯ ಮೌಲ್ಯಗಳು ಮತ್ತು ಸಾಂವಿಧಾನಿಕ ತತ್ವಗಳೆರಡಕ್ಕೂ ಸಂಪೂರ್ಣ ವಿರುದ್ಧವಾಗಿವೆ ಎಂದು ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಗುರುವಾರ ಹೇಳಿದ್ದಾರೆ. ಸಮಾಜದ ದುರ್ಬಲ ವರ್ಗಗಳನ್ನು ಗುರಿಯಾಗಿಟ್ಟುಕೊಂಡು ‘‘ಸಕ್ಕರೆಲೇಪಿತ ತತ್ವ’’ವೊಂದನ್ನು ಬಳಸಲಾಗುತ್ತಿದೆ ಎಂದು ಅವರು ನುಡಿದರು.
ಜೈಪುರದಲ್ಲಿ ನಡೆದ ‘ಹಿಂದೂ ಆಧ್ಯಾತ್ಮಿಕ ಮತ್ತು ಸೇವಾ ಸಭೆ’ಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಧನ್ಕರ್, ‘‘ಸಂವಿಧಾನದಲ್ಲಿ ಅಳವಡಿಸಿಕೊಳ್ಳಲಾಗಿರುವ ಮೌಲ್ಯಗಳು ಸನಾತನ ಧರ್ಮದ ಸಾರವನ್ನು ಪ್ರತಿಬಿಂಬಿಸುತ್ತವೆ’’ ಎಂದು ಹೇಳಿದರು. ಸನಾತನ ಧರ್ಮವು ಎಲ್ಲವನ್ನೂ ಒಳಗೊಂಡಿದೆ ಮತ್ತು ಅದುವೇ ಮಾನವ ಜನಾಂಗದ ಮುನ್ನಡೆಗೆ ದಾರಿಯಾಗಿದೆ ಎಂದರು.
ಹಿಂದೂ ಧರ್ಮವು ಮಾನವೀಯತೆಯನ್ನು ಬೋಧಿಸುತ್ತದೆ ಎಂದು ಅಭಿಪ್ರಾಯಪಟ್ಟ ಅವರು, ಎಲ್ಲಾ ಜೀವಿಗಳು ಮತ್ತು ಪ್ರಕೃತಿಯ ರಕ್ಷಣೆಗೆ ಅದು ಒತ್ತು ನೀಡುತ್ತದೆ ಎಂದು ಹೇಳಿದರು.
‘‘ಸನಾತನವು ಎಂದೂ ವಿಷವನ್ನು ಹರಡುವುದಿಲ್ಲ, ಅದು ತನ್ನದೇ ಆದ ಶಕ್ತಿಗಳನ್ನು ಹೊರಸೂಸುತ್ತದೆ. ಇಲ್ಲಿ ಇನ್ನೊಂದು ವಿಷಯವಿದೆ. ಅದು ಅತ್ಯಂತ ಅಪಾಯಕಾರಿ ಮತ್ತು ದೇಶದ ರಾಜಕೀಯವನ್ನೇ ಬದಲಿಸಬಲ್ಲದಾಗಿದೆ. ಅದು ನೀತಿಗಳ ಮೂಲಕ, ಸಾಂಸ್ಥಿಕವಾಗಿ ಮತ್ತು ಯೋಜಿತ ಪಿತೂರಿಯ ಮೂಲಕ ನಡೆಯಬಹುದಾಗಿದೆ. ಅದುವೇ ಧಾರ್ಮಿಕ ಮತಾಂತರ’’ ಎಂದು ಅವರು ನುಡಿದರು.