ರುದ್ರೇಶ್ ಕೊಲೆ ಪ್ರಕರಣ: ಅಸೀಂ ಶರೀಫ್ ಜಾಮೀನು ಅರ್ಜಿ ವಜಾ

Update: 2019-08-02 16:48 GMT

ಬೆಂಗಳೂರು, ಆ.2: ಆರೆಸೆಸ್ಸ್ ಕಾರ್ಯಕರ್ತ ರುದ್ರೇಶ್ ಕೊಲೆ ಪ್ರಕರಣದ 5ನೆ ಆರೋಪಿ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

5ನೆ ಆರೋಪಿ ಅಸೀಂ ಶರೀಫ್ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿ ಆದೇಶ ಕಾಯ್ದಿರಿಸಿದ್ದ ನ್ಯಾಯಮೂರ್ತಿ ರವಿ ಮಳೀಮಠ ಹಾಗೂ ನ್ಯಾಯಮೂರ್ತಿ ಎಸ್.ಪಿ.ಸಂದೇಶ್ ಅವರಿದ್ದ ವಿಭಾಗೀಯ ನ್ಯಾಯಪೀಠ, ಶುಕ್ರವಾರ ಆದೇಶ ಹೊರಡಿಸಿತು.

ಶಿವಾಜಿನಗರದ ಕಾಮರಾಜ ರಸ್ತೆಯ ಶ್ರೀನಿವಾಸ್ ಮೆಡಿಕಲ್ ಸ್ಟೋರ್ ಎದುರು ನಿಂತಿದ್ದಾಗ ರುದ್ರೇಶ್‌ನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹತ್ಯೆಗೈದಿದ್ದರು. ಅಸೀಂ ಶರೀಫ್ ಪರ ವಾದಿಸಿದ್ದ ವಕೀಲರು, ಎನ್‌ಐಎ ಯಾವುದೇ ಪ್ರಕರಣದ ತನಿಖೆ ನಡೆಸಬೇಕಾದರೆ ಅಂತಹ ಪ್ರಕರಣ ಅಕ್ರಮ ಕೂಟ ಕಾಯ್ದೆ 1967ರ ಅನುಸಾರ ಷೆಡ್ಯೂಲ್ಡ್ ಅಪರಾಧ ಪ್ರಕರಣ ಸ್ವರೂಪ ಹೊಂದಿರಬೇಕು. ಆದರೆ, ಇದೊಂದು ಕೊಲೆ ಪ್ರಕರಣ, ಸುಮ್ಮನೆ ಇದಕ್ಕೆ ಭಯೋತ್ಪಾದನೆಯ ಬಣ್ಣ ಕಟ್ಟಲಾಗುತ್ತಿದೆ ಎಂದು ಪೀಠಕ್ಕೆ ತಿಳಿಸಿದ್ದರು.

ಎನ್‌ಐಎ ಪರ ವಾದಿಸಿದ್ದ ವಕೀಲರು, ಎಲ್ಲ ಆರೋಪಿಗಳು ಪಿಎಫ್‌ಐ ಸಂಘಟನೆಯವರು. ಕೊಲೆಯಾದ ದಿನ ಪಥ ಸಂಚಲನ ಇತ್ತು. ಹತ್ಯೆಯಾದ ರುದ್ರೇಶ್ ಮತ್ತು ಆರೋಪಿಗಳ ನಡುವೆ ಯಾವುದೇ ದ್ವೇಷ ಇರಲಿಲ್ಲ. ಪರಿಚಯವೇ ಇರಲಿಲ್ಲ. ಆದರೆ, ಆ ದಿನ ಯಾರನ್ನಾದರೂ ಓರ್ವ ವ್ಯಕ್ತಿಯನ್ನು ಕೊಲ್ಲಬೇಕೆಂದು ಆರೋಪಿಗಳು ಸಂಚು ರೂಪಿಸಿ, ಆರೆಸ್ಸೆಸ್ ಕಾರ್ಯಕರ್ತ ಎಂಬ ಒಂದೇ ಕಾರಣಕ್ಕಾಗಿ ರುದ್ರೇಶ್‌ನನ್ನು ಹತ್ಯೆ ಮಾಡಿದ್ದಾರೆ ಎಂದು ಪೀಠಕ್ಕೆ ತಿಳಿಸಿದ್ದರು. ಇಬ್ಬರು ವಕೀಲರ ವಾದ ಆಲಿಸಿ ಆದೇಶ ಕಾಯ್ದಿರಿಸಿದ್ದ ವಿಭಾಗೀಯ ನ್ಯಾಯಪೀಠವು ಶುಕ್ರವಾರ ಜಾಮೀನು ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News