ಸಿಎಎ, ಎನ್‍ಆರ್ ಸಿ: ಸಂಶಯ ನಿವಾರಿಸಲು ಮುಸ್ಲಿಮರಿಗಾಗಿ ಅನಿಮೇಟೆಡ್ ವಿಡಿಯೋ ಬಿಡುಗಡೆಗೊಳಿಸಿದ ಬಿಜೆಪಿ

Update: 2019-12-23 10:47 GMT

ಹೊಸದಿಲ್ಲಿ: ರವಿವಾರ ರಾಜಧಾನಿಯಲ್ಲಿ ನಡೆದ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಭಾರತೀಯ ಮುಸ್ಲಿಮರು ಪೌರತ್ವ ತಿದ್ದುಪಡಿ ಕಾಯಿದೆ ಹಾಗೂ ಎನ್‍ಆರ್ ಸಿ ಕುರಿತು ಭಯ ಪಡುವ ಅಗತ್ಯವಿಲ್ಲವೆಂದು ಹೇಳಿದ ಬೆನ್ನಿಗೇ ಬಿಜೆಪಿ ಈ ಎರಡು ವಿಚಾರಗಳ ಕುರಿತಾದ ಗೊಂದಲ ನಿವಾರಿಸುವ ಉದ್ದೇಶಿಂದ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭಿಸಿದೆ.

ಬಿಜೆಪಿಯ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್  ಬಿಡುಗಡೆಗೊಳಿಸಿರುವ ಅನಿಮೇಟೆಡ್ ವೀಡಿಯೋದಲ್ಲಿ ಎರಡು ಅನಿಮೇಟೆಡ್ ಕಾರ್ಟೂನ್ ಗಳು ಕಾಣಿಸುತ್ತವೆ. ಒಂದು ಸಿಎಎ ಹಾಗೂ ಎನ್‍ಆರ್ ಸಿ ಕುರಿತು ಪ್ರಶ್ನೆಗಳನ್ನು ಕೇಳಿದರೆ, ಇನ್ನೊಂದು ಗೊಂದಲ ಹಾಗೂ ಭಯ ನಿವಾರಿಸುವ ಉದ್ದೇಶದಿಂದ ಉತ್ತರ ನೀಡುತ್ತದೆ.

ವೀಡಿಯೋದಲ್ಲಿ ವಿಪಕ್ಷಗಳು ಸುಳ್ಳು ವಿಚಾರವನ್ನು ಹಬ್ಬಿ ಮುಸ್ಲಿಮರನ್ನು ಸಿಎಎ ಹಾಗೂ ಎನ್‍ಆರ್ ಸಿ ವಿಚಾರದಲ್ಲಿ ಪ್ರಚೋದಿಸುತ್ತಿದೆ ಎಂದು ಹೇಳಲಾಗಿದೆ.

"ಮೊದಲು ಕಾಯಿದೆಯನ್ನು ಅರಿತು ನಂತರ ಇತರರಿಗೆ ವಿವರಿಸಬೇಕೆಂದು ಎಲ್ಲಾ ಮುಸ್ಲಿಂ ಸೋದರ ಸೋದರಿಯರಿಗೆ ವಿನಂತಿ. ಇಲ್ಲದೇ ಹೋದಲ್ಲಿ ರಾಜಕೀಯ ಪಕ್ಷಗಳು ಸುಳ್ಳು ಸುದ್ದಿ ಹರಡಿ ಗೊಂದಲ ಸೃಷ್ಟಿಸಿ ಅವರ ಮತ ಬ್ಯಾಂಕ್ ರಾಜಕಾರಣಕ್ಕಾಗಿ ನಾವು ನಮ್ಮಲ್ಲಿಯೇ ಕಚ್ಚಾಡುವಂತೆ ಮಾಡುತ್ತವೆ. ವದಂತಿಗಳ ಬಗ್ಗೆ ಎಚ್ಚರದಿಂದಿರಿ ಹಾಗೂ ಸತ್ಯವನ್ನು ಅರಿಯಿರಿ'' ಎಂದು ವೀಡಿಯೋ ಜತೆಗೆ ಬಿಜೆಪಿ ಶೇರ್ ಮಾಡಿರುವ ಪೋಸ್ಟ್‍ ನಲ್ಲಿ ಬರೆಯಲಾಗಿದೆ.

ಎಲ್ಲಾ ಸಮುದಾಯಗಳ ನಡುವೆ ಶಾಂತಿ ಸ್ಥಾಪಿಸುವುದು ಸಿಎಎ ಉದ್ದೇಶ ಹಾಗೂ ಅದು ಭಾರತೀಯ ಮುಸ್ಲಿಮರ ವಿರುದ್ಧವಲ್ಲ ಎಂದು ನಕ್ಷೆಯೊಂದರ ಮೂಲಕ ವೀಡಿಯೋದಲ್ಲಿ ವಿವರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News