ಸಿಟಿಝನ್ಸ್ ಫಾರ್ ಡೆಮಾಕ್ರಸಿಯ ಸತ್ಯಶೋಧನಾ‌ ವರದಿ ಆರೆಸ್ಸೆಸ್, ಬಿಜೆಪಿ ಪ್ರಾಯೋಜಿತ ಷಡ್ಯಂತ್ರ: ಪಿಎಫ್ಐ

Update: 2020-09-05 07:14 GMT

ಬೆಂಗಳೂರು ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ 'ಸಿಟಿಝನ್ಸ್ ಫಾರ್ ಡೆಮಾಕ್ರಸಿ' ಸಿದ್ಧಪಡಿಸಿರುವ ಸತ್ಯಶೋಧನಾ‌ ವರದಿಯು ಆಡಳಿತ‌ ವ್ಯವಸ್ಥೆಯ ಘೋರ‌ ವೈಫಲ್ಯಗಳನ್ನು ಮುಚ್ಚಿಡುವ ಮತ್ತು ನಿರ್ದಿಷ್ಟ ಸಮುದಾಯದ‌ ಮೇಲೆ ಗಲಭೆಯ ಹೊಣೆಯನ್ನು ಹೊರಿಸುವ ಆರೆಸ್ಸೆಸ್ -ಬಿಜೆಪಿ ಪ್ರಾಯೋಜಿತ ಷಡ್ಯಂತ್ರವಾಗಿದೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಸಿರ್ ಪಾಷ ಹೇಳಿದ್ದಾರೆ.

ಗಲಭೆಯ ವೇಳೆ ಜನಸಮೂಹವು ಹಿಂದುಗಳನ್ನು ಗುರಿಪಡಿಸಿತ್ತು ಎಂದು ವರದಿಯಲ್ಲಿ ಹೇಳಲಾಗಿದೆ. ಆದರೆ ವಾಸ್ತವ ಇದಕ್ಕೆ ವಿರುದ್ಧವಾಗಿದೆ. ಪ್ರವಾದಿ ನಿಂದನೆಯ ಪೋಸ್ಟ್ ಹಾಕಿದ ಆರೋಪಿಯ ಬಂಧಕ್ಕೆ ಪೊಲೀಸರು ವಿಳಂಬಿಸಿದ ಕಾರಣದಿಂದಾಗಿ ಜನರು ರೊಚ್ಚಿಗೆದ್ದಿದ್ದರು. ಹಿಂಸಾಚಾರದ ಘಟನೆಯ ವೇಳೆ ದೇವಸ್ಥಾನಕ್ಕೆ, ಹಿಂದುಗಳ ಮನೆಗೆ ಯಾವುದೇ  ಹಾನಿಯಾಗದಂತೆ ಅಲ್ಲಿನ ಮುಸ್ಲಿಮರೇ ಸ್ವತಃ ರಕ್ಷಣೆ ನೀಡಿದ್ದರು. ಆರೋಪಿ ನವೀನನ ತಾಯಿ ಕೂಡ ತನಗೆ ರಕ್ಷಣೆ ನೀಡಿದ್ದು ಮುಸ್ಲಿಮರಾಗಿದ್ದಾರೆ ಎಂದು ಈಗಾಗಲೇ ಹೇಳಿಕೆ ನೀಡಿದ್ದಾರೆ. ಆದರೆ ಸತ್ಯಶೋಧನಾ ತಂಡವು ಏಕಪಕ್ಷೀಯವಾದ ವರದಿಯ ಮೂಲಕ ಘಟನೆಯನ್ನು ಕೋಮುವಾದೀಕರಣಗೊಳಿಸಲು ಪ್ರಯತ್ನಿಸಿರುವುದು ಬಹಳ ಸ್ಪಷ್ಟವಾಗಿದೆ ಎಂದು ಅವರು ಹೇಳಿದರು.

ಸತ್ಯಶೋಧನಾ ಸಮಿತಿಯಲ್ಲಿರುವ ಸದಸ್ಯರ ಹಿನ್ನೆಲೆಯನ್ನು ಗಮನಿಸಿದರೆ ಅವರು ಸಂಘಪರಿವಾರದೊಂದಿಗೆ ಗುರುತಿಸಿಕೊಂಡಿರುವ ವಿಚಾರ ಬೆಳಕಿಗೆ‌ ಬರುತ್ತದೆ. ಕೆಲ ತಿಂಗಳ ಹಿಂದೆ ದಿಲ್ಲಿಯಲ್ಲಿ ನಡೆದ ಗಲಭೆಯನ್ನು ಹಿಂದು ವಿರೋಧಿ ಗಲಭೆಯಾಗಿ ಬಿಂಬಿಸಲು ಇದೇ‌ ರೀತಿಯ ಸತ್ಯಶೋಧನಾ ವರದಿಯ ಮೂಲಕ ಹತಾಶ ಪ್ರಯತ್ನವನ್ನು ನಡೆಸಲಾಗಿತ್ತು ಎಂಬುದು ಇಲ್ಲಿ ಗಮನಾರ್ಹವಾಗಿದೆ ಎಂದರು.

ಇದೀಗ ಆರೆಸ್ಸೆಸ್-ಬಿಜೆಪಿ ಪ್ರಾಯೋಜಿತ ಈ ಸತ್ಯಶೋಧನಾ ತಂಡದಿಂದ ನಿರೀಕ್ಷಿತವಾದ ವರದಿಯೇ ಹೊರಬಿದ್ದಿದೆ. ಈ ವರದಿಯ ಹಿಂದಿನ ಪಿತೂರಿಯನ್ನು ಸಾರ್ವಜನಿಕರು ಅರ್ಥ ಮಾಡಿಕೊಳ್ಳಬೇಕು ಮತ್ತು ಈ ವರದಿಯ ಮೂಲಕ ಆಡಳಿತದ ವೈಫಲ್ಯವನ್ನು ಕಾನೂನುಬದ್ಧಗೊಳಿಸಿ, ವಾಸ್ತವ ಸಂಗತಿಗಳನ್ನು ಮರೆಮಾಚುವ ಷಡ್ಯಂತ್ರವನ್ನು ವಿಫಲಗೊಳಿಸಬೇಕೆಂದು ನಾಸಿರ್ ಪಾಷ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಸಂಯೋಜಕರು
ಮಾಧ್ಯಮ ಮತ್ತು ಸಾರ್ವಜನಿಕ ಸಂಪರ್ಕ ವಿಭಾಗ
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ
ಕರ್ನಾಟಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News