ಕ್ರೈಸ್ತಧರ್ಮಕ್ಕೆ ಮತಾಂತರಗೊಂಡ ಪರಿಶಿಷ್ಟ ಸಮುದಾಯಗಳನ್ನು ಪ್ರವರ್ಗ-1ರಲ್ಲಿ ಮುಂದುವರಿಸಲು ಡೇವಿಡ್ ಸಿಮೆಯೋನ್ ಮನವಿ
ಬೆಂಗಳೂರು : ಕ್ರೈಸ್ತಧರ್ಮಕ್ಕೆ ಮತಾಂತರ ಹೊಂದಿರುವ ಪರಿಶಿಷ್ಟ ಜಾತಿಗಳನ್ನು ಹಾಲಿ ಹಿಂದುಳಿದ ವರ್ಗಗಳ ಪಟ್ಟಿಯ ಪ್ರವರ್ಗ-1ರಲ್ಲಿ ನಮೂದಿಸಲಾಗಿದೆ. ಈ ವರ್ಗ ಕೆನೆಪದರ ವ್ಯಾಪ್ತಿಯಿಂದ ಹೊರಗಿದೆ. ಆ ಕಾರಣದಿಂದಾಗಿ ಇನ್ನು ಮುಂದೆಯೂ ಈ ಸಮುದಾಯಗಳನ್ನು ಅದೇ ಪ್ರವರ್ಗ-1ರಲ್ಲಿ ಮುಂದುವರಿಸಬೇಕು ಎಂದು ಅಹಿಂದ ಚಳವಳಿಯ ಸಂಚಾಲಕ ಡೇವಿಡ್ ಸಿಮೆಯೋನ್ ಮನವಿ ಮಾಡಿದ್ದಾರೆ.
ಬುಧವಾರ ನಗರದ ಪ್ರೆಸ್ಕ್ಲಬ್ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ರೈಸ್ತ ಸಮುದಾಯವನ್ನು ಹಾಲಿ ಹಿಂದುಳಿದ ವರ್ಗಗಳ ಪಟ್ಟಿಯ ಪ್ರವರ್ಗ-3(ಬಿ)ಯಲ್ಲಿ ನಮೂದಿಸಲಾಗಿದೆ. ಈ ಸಮುದಾಯಗಳಲ್ಲಿರುವ ಇತರೆ ಜಾತಿಗಳು ಆರ್ಥಿಕ, ರಾಜಕೀಯ, ಶೈಕ್ಷಣಿಕವಾಗಿ ಮುಂದುವರೆದಿದ್ದಾರೆ. ಆದರೆ ಕ್ರೈಸ್ತ ಸಮುದಾಯವು ಈಗಲೂ ಆರ್ಥಿಕ, ಸಾಮಾಜಿಕ, ರಾಜಕಿಯ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿದೆ ಎಂದು ಗಮನ ಸೆಳೆದರು.
ಈ ಕಾರಣಗಳಿಂದ ಸದರಿ ಪ್ರವರ್ಗದವರ ಜೊತೆ ನಮ್ಮ ಹಕ್ಕುಗಳನ್ನು ಪಡೆಯಲು ಕಷ್ಟವಾಗಿದೆ. ಕ್ರೈಸ್ತ ಸಮುದಾಯವನ್ನು ಹಾಲಿ ಇರುವ ಪ್ರವರ್ಗ-1(ಬಿ) ಮತ್ತು ಪ್ರವರ್ಗ-3(ಎ) ಪಟ್ಟಿಗಳನ್ನು ಹೊರತುಪಡಿಸಿ, ಬೇರೆ ಯಾವುದಾದರೂ ಹೋಮೋಜಿನಿಯಸ್ ಗ್ರೂಪ್ ಸರಿಹೊಂದುವಂತಹ ಗುಂಪುಗಳಲ್ಲಿ ಕ್ರೈಸ್ತ ಸಮುದಾಯವನ್ನು ವರ್ಗಾವಣೆ ಮಾಡಿ ಸೇರ್ಪಡೆ ಮಾಡಬೇಕು ಎಂದು ಡೇವಿಡ್ ಸಿಮೆಯೋನ್ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಸಮುದಾಯದ ಮುಖಂಡರಾದಡಾ.ರೆ.ಮನೋಹರ್ ಚಂದ್ರಪ್ರಸಾದ್, ಪ್ರಜ್ವಲ್ ಸ್ವಾಮಿ, ರಾಬರ್ಟ್ ಕ್ಲೈವ್, ನಾಥನ್ ಡೆನಿಯಲ್, ಶೀಲಾ ಶಾಂತರಾಜು, ಪಾಸ್ಟರ್ ಶಿವ ಶರಣಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.