ಬಿಎಂಟಿಸಿ ಎಂಡಿ, ನಿರ್ದೇಶಕರ ಸಹಿ ನಕಲು ಮಾಡಿ 76.57ಲಕ್ಷ ರೂ.ವಂಚನೆ: ಏಳು ಮಂದಿ ವಿರುದ್ಧ ಎಫ್‍ಐಆರ್

Update: 2023-07-31 16:28 GMT

ಸಾಂದರ್ಭಿಕ ಚಿತ್ರ

ಬೆಂಗಳೂರು: ಬಿಎಂಟಿಸಿಯಲ್ಲಿ ಅಧಿಕಾರಿಗಳಿಂದಲೇ ಭಾರೀ ಪ್ರಮಾಣ ವಂಚನೆ ಬೆಳಕಿಗೆ ಬಂದಿದ್ದು, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಹಾಗೂ ಇತರೆ ನಿರ್ದೇಶಕರ ನಕಲಿ ಸಹಿಗಳನ್ನು ಬಳಸಿಕೊಂಡು ಸುಮಾರು 76.57 ಲಕ್ಷ ರೂ. ವಂಚನೆ ಮಾಡಿರುವುದು ಇಲಾಖೆಯ ತನಿಖೆಯಿಂದ ಬಯಲಾಗಿದ್ದು, ಅಕ್ರಮದಲ್ಲಿ ಭಾಗಿಯಾದ ಏಳು ಮಂದಿ ಅಧಿಕಾರಿಗಳ ವಿರುದ್ಧ ನಗರದ ವಿಲ್ಸನ್ ಗಾರ್ಡನ್ ಠಾಣೆಯಲ್ಲಿ ಎರಡು ಪ್ರತ್ಯೇಕ ಎಫ್‍ಐಆರ್ ದಾಖಲಾಗಿದೆ.

ಈ ಕುರಿತು ದೂರು ನೀಡಿರುವ ಬಿಎಂಟಿಸಿ ಸಹಾಯಕ ಭದ್ರತಾ ಜಾಗೃತಾಧಿಕಾರಿ ಸಿ.ಕೆ.ರಮ್ಯಾ, ಬಿಎಂಟಿಸಿ ಅಧಿಕಾರಿಗಳು ಗುತ್ತಿಗೆದಾರರ ಜೊತೆ ಸೇರಿ ಅಕ್ರಮ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.

ಬಿಎಂಟಿಸಿಯ ವಾಣಿಜ್ಯ ವಿಭಾಗದ ಮುಖ್ಯ ಸಂಚಾರ ವ್ಯವಸ್ಥಾಪಕರಾಗಿದ್ದ ಶ್ರೀರಾಮ ಮುಲ್ಕಾವಾನ ಸೇರಿ ಏಳು ಮಂದಿಯ ಮೇಲೆ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ಮೊದಲ ಪ್ರಕರಣವು 4 ವಂಚನೆಗಳಿಗೆ ಸಂಬಂಧಿಸಿದ್ದಾಗಿದ್ದು, ಎರಡನೇ ಪ್ರಕರಣ ಮೂರು ವಂಚನೆಗಳಿಗೆ ಸಂಬಂಧಿಸಿದೆ ಎಂದು ಎಫ್‍ಐಆರ್‍ನಲ್ಲಿ ಉಲ್ಲೇಖಿಸಲಾಗಿದೆ. ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್‍ನ 420, 465, 468, 471 ಮತ್ತು 408ರ ಅಡಿಯಲ್ಲಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ಈ ಆರೋಪಿಗಳು 2020 ಮಾರ್ಚ್ 9 ರಿಂದ 2023ರ ಜುಲೈ 27ವರೆಗಿನ ಅವಧಿಯಲ್ಲಿ ನಿಗಮಕ್ಕೆ ವಂಚನೆ ಮಾಡಿದ್ದಾರೆ ಎಂದು ಸಿ.ಕೆ.ರಮ್ಯಾ ದೂರಿನಲ್ಲಿ ತಿಳಿಸಿದ್ದು, ಬಿಎಂಟಿಸಿಯ ಟೆಂಡರ್‍ಗಳ ನೀಡಿಕೆ, ಫ್ಲ್ಯಾಟ್‍ಗಳು ಮತ್ತು ವಾಣಿಜ್ಯ ಮಳಿಗೆಗಳ ಹಂಚಿಕೆ, ಟೆಂಡರ್ ಅವಧಿ ವಿಸ್ತರಣೆಗೆ ಸಂಬಂಧಪಟ್ಟ ಕಡತಗಳಿಗೆ ಬಿಎಂಟಿಸಿ ಎಂಡಿ, ನಿರ್ದೇಶಕರ ಹೆಸರಿನಲ್ಲಿ ನಕಲು ಸಹಿ ಮಾಡಿ ಸಂಸ್ಥೆಗೆ ಕೋಟ್ಯಂತರ ರೂಪಾಯಿ ವಂಚಿಸಿದ್ದಾರೆ. ಇದರಿಂದ ಸಂಸ್ಥೆಗೆ ನಷ್ಟವಾಗಿದೆ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಬಿಎಂಟಿಸಿ ಮಾಹಿತಿ ಮತ್ತು ತಂತ್ರಜ್ಞಾನ ವಿಭಾಗದ ನಿರ್ದೇಶಕ ಸೂರ್ಯಸೇನ್, ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್, ರೇಜು, ಸಿ. ಶಿಖಾ, ಭದ್ರತಾ ಮತ್ತು ಜಾಗೃತಿ ವಿಭಾಗದ ನಿರ್ದೇಶಕ ಕೆ ಅರುಣ ಸಹಿ ನಕಲು ಮಾಡಿ, ಈ ಅಕ್ರಮ ಎಸಗಲಾಗಿದೆ ಎಂಬುದು ಇಲಾಖಾ ತನಿಖೆಯಿಂದ ತಿಳಿದು ಬಂದಿದ್ದು, ಬಿಎಂಟಿಸಿಗೆ ಆರ್ಥಿಕ ನಷ್ಟ ಉಂಟಾಗಲು ಒಳಸಂಚು ರೂಪಿಸಿರುವ ಹಿನ್ನೆಲೆಯಲ್ಲಿ ವಾಣಿಜ್ಯ ವಿಭಾಗದ ಮುಖ್ಯ ಸಂಚಾರ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸಿದ್ದ ಹಾಗೂ ಪ್ರಸ್ತುತ ಕ.ಕ.ರ.ಸಾ.ಸಂಸ್ಥೆಯ ಮಂಡಳಿ ಕಾರ್ಯದರ್ಶಿ ಶ್ರೀರಾಮ ಮುಲ್ಕಾವಾನ, ವಿಭಾಗೀಯ ಸಂಚಲನ ಅಧಿಕಾರಿ ಶ್ಯಾಮಲಾ ಎಸ್. ಮದ್ದೋಡಿ, ಸಹಾಯಕ ಸಂಚಾರ ವ್ಯವಸ್ಥಾಪಕಿ ಮಮತಾ ಬಿ.ಕೆ, ಸಹಾಯಕ ಸಂಚಾರ ಅಧೀಕ್ಷಕಿ ಅನಿತಾ ಟಿ, ಗೋಪಿ, ಸಂಚಾರ ನಿರೀಕ್ಷಕ ಸತೀಶ್, ಕಿರಿಯ ಸಹಾಯಕ ಪ್ರಕಾಶ್ ಕೊಪ್ಪಳ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೂರು ವರ್ಷಗಳಿಂದ ನಿಗಮದ ಕೆಲ ಬಸ್ ನಿಲ್ದಾಣಗಳ ವಾಣಿಜ್ಯ ಸಂಕೀರ್ಣ, ಸ್ವಚ್ಛತಾ ನಿರ್ವಹಣಾ ಗುತ್ತಿಗೆ ಸೇರಿ ಪ್ರಮುಖ ನಾಲ್ಕು ಟೆಂಡರ್‍ಗಳಲ್ಲಿ ಅಧಿಕಾರಿಗಳು ಗುತ್ತಿಗೆದಾರರ ಜೊತೆ ಸೇರಿ ಅವ್ಯವಹಾರ ನಡೆಸಿದ್ದಾರೆ. ದಾಖಲೆಗಳಲ್ಲಿ ಬಿಎಂಟಿಸಿ ಅಧಿಕಾರಿಗಳ ಸಹಿ ನಕಲು ಮಾಡಿ ಬಿಎಂಟಿಸಿ ನಿಗಮಕ್ಕೆ ಒಟ್ಟು 76,57,481 ಲಕ್ಷ ರೂ. ವಂಚಿಸಿರುವುದಾಗಿ ಸಿ.ಕೆ.ರಮ್ಯಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಬಿಎಂಟಿಸಿ ಬಸ್ ನಿಲ್ದಾಣಗಳ ಆವರಣದಲ್ಲಿ ಜಾಹೀರಾತು ನೀಡಿಕೆ, ಬ್ಯಾಂಕ್ ಎಟಿಎಂ ಘಟಕಗಳ ಜಾಗದ ಪರವಾನಗಿ ಅವಧಿ ವಿಸ್ತರಣೆ, ಬಿಎಂಟಿಸಿಯ ಫ್ಲ್ಯಾಟ್‍ಗಳ ಹಂಚಿಕೆಗೆ ಸಂಬಂಧಪಟ್ಟ ಕಡತಗಳಿಗೆ ತಪ್ಪಿತಸ್ಥ ಅಧಿಕಾರಿಗಳು ಸಂಸ್ಥೆಯ ಹಾಲಿ ವ್ಯವಸ್ಥಾಪಕ ನಿರ್ದೇಶಕಿ ಜಿ.ಸತ್ಯವತಿ, ಹಿಂದಿನ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಭದ್ರತೆ ಮತ್ತು ಜಾಗೃತ ದಳದ ನಿರ್ದೇಶಕರ ಹೆಸರಿನಲ್ಲಿ ನಕಲಿ ಸಹಿ ಮಾಡಿ ವಂಚಿಸಿದ್ದಾರೆ. ಇದರಿಂದ ಸಂಸ್ಥೆಗೆ ಸಾಕಷ್ಟು ವಂಚನೆಯಾಗಿದೆ. ಅಧಿಕಾರಿಗಳ ಅಕ್ರಮವು ಈಗಾಗಲೇ ಇಲಾಖಾ ತನಿಖೆಯಲ್ಲಿ ದೃಢಪಟ್ಟಿದೆ ಎಂದು ಸಿ.ಕೆ.ರಮ್ಯಾ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News