ಮಾಧ್ಯಮ ಅಕಾಡೆಮಿಯಿಂದ ಪತ್ರಕರ್ತರ ಕಲ್ಯಾಣಕ್ಕೆ ಆದ್ಯತೆ : ಆಯೇಶಾ ಖಾನಂ
ಆಯೇಶಾ ಖಾನಂ
ಬೆಂಗಳೂರು : ಕರ್ನಾಟಕ ಮಾಧ್ಯಮ ಅಕಾಡೆಮಿ ವತಿಯಿಂದ 2025-26ನೆ ಸಾಲಿನಲ್ಲಿ ಪತ್ರಕರ್ತರ ಕಲ್ಯಾಣಕ್ಕೆ ವಿಶೇಷ ಕಾರ್ಯಕ್ರಮಗಳನ್ನು ಕ್ರಿಯಾ ಯೋಜನೆಯಲ್ಲಿ ರೂಪಿಸಲಾಗುವುದು ಎಂದು ಅಕಾಡೆಮಿ ಅಧ್ಯಕ್ಷೆ ಆಯೇಶಾ ಖಾನಂ ತಿಳಿಸಿದ್ದಾರೆ.
ಬುಧವಾರ ನಗರದ ಮಾಧ್ಯಮ ಅಕಾಡೆಮಿಯಲ್ಲಿ 2024-25ನೆ ಸಾಲಿನ ಲೆಕ್ಕ ಪತ್ರ ಮಂಡನೆ, 2025-26ನೆ ಸಾಲಿನ ಕ್ರಿಯಾ ಯೋಜನೆ ಹಾಗೂ 2023-24, 2024-25ನೆ ಸಾಲಿನ ಎಸ್ಸಿಪಿ, ಟಿಎಸ್ಪಿ ಉಪಸಮಿತಿ ಆಯ್ಕೆ ಕುರಿತಾದ ಚರ್ಚೆ ನಡೆಸಲು ಹಮ್ಮಿಕೊಳ್ಳಲಾದ ಸಭೆಯಲ್ಲಿ ಅವರು ಮಾಹಿತಿ ನೀಡಿದರು.
2024-25ನೆ ಸಾಲಿನಲ್ಲಿ ಅಕಾಡೆಮಿಯಲ್ಲಿ ವಿವಿಧ ಯೋಜನೆ, ಸಿಬ್ಬಂದಿ ವೇತನ ಇತ್ಯಾದಿಗೆ 2,50,54,775 ರೂ. ಗಳು ಖರ್ಚಾಗಿರುತ್ತದೆ. ಎಸ್ಸಿಪಿ, ಟಿಎಸ್ಪಿ ಯೋಜನೆಯಡಿ 20 ಪರಿಶಿಷ್ಟ ಜಾತಿ(ಎಸ್ಸಿ) ಹಾಗೂ 8 ಪರಿಶಿಷ್ಟ ಪಂಗಡ(ಎಸ್ಟಿ)ದ ಸಂಪಾದಕರು/ವರದಿಗಾರರಿಗೆ ‘ಮೊಜೊ ಕಿಟ್’ (ಮೊಬೈಲ್ ಹಾಗೂ ಮೊಬೈಲ್ ಸ್ಟಾಂಡ್) ನೀಡಲಾಗಿದೆ.
ಅಲ್ಲದೆ ಪತ್ರಕರ್ತರಿಗೆ ತರಬೇತಿ, ವಿವಿಧ ಜಿಲ್ಲೆಗಳಲ್ಲಿ ವಿಚಾರ ಸಂಕಿರಣ ಆಯೋಜನೆ, ಪತ್ರಕರ್ತರಿಗೆ ವಿವಿಧ ದತ್ತಿ, ವಾರ್ಷಿಕ ಪ್ರಶಸ್ತಿಗಳನ್ನು ನೀಡಿಕೆ ಮುಂತಾದ ಕಾರ್ಯಕ್ರಮಗಳನ್ನು ಅಕಾಡೆಮಿ ಹಮ್ಮಿಕೊಂಡು ಯಶಸ್ವಿಯಾಗಿಸಿದೆ ಎಂದು ತಿಳಿಸಿದರು.
2025-25ನೆ ಸಾಲಿನಲ್ಲಿ ಒಟ್ಟು 2,16,49,000 ರೂ.ಗಳ ಕ್ರಿಯಾ ಯೋಜನೆಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ವಿವಿಧ ಕಾರ್ಯಕ್ರಮಗಳನ್ನು ಪತ್ರಕರ್ತರಿಗಾಗಿ ಹಮ್ಮಿಕೊಳ್ಳಲಾಗುವುದು. ಪರಿಶಿಷ್ಟ ಜಾತಿ, ಪಂಗಡದವರಿಗೆ, ಗ್ರಾಮೀಣ ಪತ್ರಕರ್ತರಿಗೆ, ಮಹಿಳೆಯರಿಗೆ ವಿವಿಧ ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದು ಆಯೇಶಾ ಖಾನಂ ಮಾಹಿತಿ ನೀಡಿದರು.
ಸಭೆಯಲ್ಲಿ ಕಾರ್ಯನಿರಿತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಮಾಧ್ಯಮ ಅಕಾಡೆಮಿ ಕಾರ್ಯದರ್ಶಿ ಸಹನಾ ಎಂ. ಸೇರಿಂದತೆ ಅಕಾಡೆಮಿಯ ಸದಸ್ಯರು ಭಾಗವಹಿಸಿದ್ದರು.