ಮುಡಾ ಹಗರಣದಲ್ಲಿ ಸಿಎಂಗೆ ದೊಡ್ಡ ಹಿನ್ನಡೆ : ವಿಜಯೇಂದ್ರ

Update: 2025-01-27 15:38 IST
Photo of B.Y.Vijayendra

ಬಿ.ವೈ.ವಿಜಯೇಂದ್ರ

  • whatsapp icon

ಬೆಂಗಳೂರು : ಮೈಸೂರಿನ ಮುಡಾ ಹಗರಣದಲ್ಲಿ ಮುಖ್ಯಮಂತ್ರಿಗಳಿಗೆ ಬಹುದೊಡ್ಡ ಹಿನ್ನಡೆಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ʼಜಗನ್ನಾಥ ಭವನʼದಲ್ಲಿ ಇಂದು ಮಾಧ್ಯಮದವರ ಜೊತೆ ಮಾತನಾಡಿದ ಅವರು, ಬೇಗನೆ ಬಿ ರಿಪೋರ್ಟ್ ಹಾಕಿಸಿಕೊಂಡು ಪ್ರಕರಣ ಮುಚ್ಚಿಹಾಕುವ ಪ್ರಯತ್ನದಲ್ಲಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ದೊಡ್ಡ ಆಘಾತವಾಗಿದೆ. ಲೋಕಾಯುಕ್ತ ಸಂಸ್ಥೆಯ ತನಿಖೆಯನ್ನು ಮಾಧ್ಯಮಗಳೇ ತೋರಿಸಿವೆ. ರಾತ್ರಿ 8- 9 ಗಂಟೆಗೆ ಸಿದ್ದರಾಮಯ್ಯನವರ ಬಾಮೈದ ನೋಟಿಸ್ ಕೊಡದೆ ಇದ್ದರೂ ಮೈಸೂರಿನ ಲೋಕಾಯುಕ್ತ ಕಚೇರಿಗೆ ಭೇಟಿ ಕೊಡುತ್ತಿದ್ದರು ಎಂದು ಆಕ್ಷೇಪಿಸಿದರು.

ಸಿಎಂ ಕುಟುಂಬಕ್ಕೆ ಎಷ್ಟು ಮುಕ್ತ ವ್ಯವಸ್ಥೆ ಇತ್ತೆಂದು ಅವತ್ತು ಕೂಡ ಬಹಿರಂಗವಾಗಿದೆ. ಮೈಸೂರಿನ ಮುಡಾ ಹಗರಣದ ವಿಷಯದಲ್ಲಿ ಬಿಜೆಪಿ-ಜೆಡಿಎಸ್ ಪಕ್ಷ ಒಟ್ಟಾಗಿ ಪಾದಯಾತ್ರೆ ಮಾಡಿದ್ದವು. ನಮ್ಮ ಹೋರಾಟದ ಪರಿಣಾಮವಾಗಿ ಮುಖ್ಯಮಂತ್ರಿಗಳ ಧರ್ಮಪತ್ನಿಯವರು 14 ನಿವೇಶನ ಹಿಂತಿರುಗಿಸುತ್ತೇವೆ ಎಂದು ರಾತ್ರೋರಾತ್ರಿ ಮೂಡಕ್ಕೆ ಪತ್ರ ಬರೆದಿದ್ದರು. ಆ ಪತ್ರದ ಮೂಲಕ ಮೂಲಕ ಹಗರಣದಿಂದ ಹೊರಕ್ಕೆ ಬಂದ ಭ್ರಮೆಯಲ್ಲಿ ಮುಖ್ಯಮಂತ್ರಿಗಳೂ ಇದ್ದರು. ಇವತ್ತಿನ ಈಡಿ ನೋಟಿಸ್ ನಿಂದ ಆಘಾತ ಆಗಿರುವುದರಲ್ಲಿ ಎರಡು ಮಾತಿಲ್ಲ ಎಂದು ನುಡಿದರು.

ಈಡಿಗೆ ಅವರದೇ ಆದ ನಿಯಮಗಳಿರುತ್ತವೆ. ಅದರ ಪ್ರಕಾರ ಅವರು ಮುಂದುವರೆಯುತ್ತಾರೆ. ಈಡಿ ನೋಟಿಸ್ ರಾಜಕೀಯಪ್ರೇರಿತ ಎಂಬುದಕ್ಕಿಂತ ಹೆಚ್ಚಾಗಿ ಕಾಂಗ್ರೆಸ್ ಆಡಳಿತಾವಧಿಯಲ್ಲಿ ಸಾವಿರಾರು ಕೋಟಿ ರೂ. ಬಡವರ ಪಾಲಾಗಬೇಕಾದ ನಿವೇಶನಗಳ ಅಕ್ರಮ ಹಂಚಿಕೆ ನಡೆದಿತ್ತು. ಈ ದೊಡ್ಡ ಹಗರಣದ ಪರಿಣಾಮವನ್ನು ಮುಂದಿನ ದಿನಗಳಲ್ಲಿ ಎದುರಿಸಬೇಕಾಗುತ್ತದೆ ಎಂದು ಪ್ರಶ್ನೆಗೆ ಉತ್ತರವಾಗಿ ತಿಳಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆತುರಾತುರವಾಗಿ ಲೋಕಾಯುಕ್ತ ಸಂಸ್ಥೆಯಿಂದ ಬಿ ರಿಪೋರ್ಟ್ ಪಡೆದು ಮುಡಾ ಹಗರಣದಿಂದ ಹೊರಕ್ಕೆ ಬರಬಹುದೆಂಬ ಲೆಕ್ಕಾಚಾರದಲ್ಲಿದ್ದರು. ಇದೇ ಸಂದರ್ಭದಲ್ಲಿ ಈಡಿ (ಜಾರಿ ನಿರ್ದೇಶನಾಲಯ) ಮುಖ್ಯಮಂತ್ರಿಗಳ ಧರ್ಮಪತ್ನಿಗೂ ನೋಟಿಸ್ ಕೊಟ್ಟಿದೆ ಹಾಗೂ ತನಿಖೆಗೆ ಹಾಜರಾಗಲು ತಿಳಿಸಿದೆ ಎಂದು ವಿವರಿಸಿದರು.

ಜೊತೆಗೆ ಸಚಿವ ಬೈರತಿ ಸುರೇಶ್ರಿ ಗೂ ಈಡಿ ನೋಟಿಸ್ ಕೊಟ್ಟಿದೆ. ಹಾಗಾಗಿ ಅನಿವಾರ್ಯವಾಗಿ ಬೈರತಿ ಸುರೇಶ್, ಮುಖ್ಯಮಂತ್ರಿಗಳ ಧರ್ಮಪತ್ನಿ ಅವರು ತನಿಖಾ ಸಂಸ್ಥೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ವಿಶ್ಲೇಷಿಸಿದರು.

ಲೋಕಾಯುಕ್ತ ಕೊಟ್ಟ ವರದಿಯ ಮಾಹಿತಿ ಇಲ್ಲ :

ರಾಜ್ಯ ಹೈಕೋರ್ಟ್‌ ಗೆ ಲಕೋಟೆಯಲ್ಲಿ ವರದಿ ನೀಡಿದ ಮಾಹಿತಿಗಳು ಬರುತ್ತಿವೆ. ನಾನು ಡಿ.ಕೆ.ಶಿವಕುಮಾರ್ ಅವರ ಹೇಳಿಕೆಯನ್ನೂ ಗಮನಿಸಿದ್ದೇನೆ. ರಾಜಕೀಯಪ್ರೇರಿತ ಈಡಿ ಎಂದು ಅವರು ಹೇಳಿದ್ದಾರೆ. ಅವರ ಮುಖದಲ್ಲಿ ಮಂದಹಾಸವೂ ಕಾಣುತ್ತಿದೆ. ಅಬ್ಬಾ ಸಿದ್ದರಾಮಯ್ಯನವರ ಕುಟುಂಬಕ್ಕೆ ಈಡಿ ನೋಟಿಸ್ ಕೊಟ್ಟಿದೆ ಎಂಬ ಸಂತೋಷ ಅವರ ಮುಖದಲ್ಲಿತ್ತು ಎಂದು ಹೇಳಿದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News