ಚನ್ನಪಟ್ಟಣ ಜನತೆ ಉತ್ತರ ನೀಡಲಿದ್ದಾರೆ : ಡಿ.ಕೆ.ಸುರೇಶ್ ತಿರುಗೇಟು ಜೆಡಿಎಸ್

Update: 2024-10-28 22:38 IST
ಚನ್ನಪಟ್ಟಣ ಜನತೆ ಉತ್ತರ ನೀಡಲಿದ್ದಾರೆ : ಡಿ.ಕೆ.ಸುರೇಶ್ ತಿರುಗೇಟು ಜೆಡಿಎಸ್
  • whatsapp icon

ಬೆಂಗಳೂರು : ‘ಆಚಾರವಿಲ್ಲದ ನಾಲಿಗೆ, ನಿನ್ನ ನೀಚಬುದ್ಧಿಯ ಬಿಡು ನಾಲಿಗೆ’ ಮಾಜಿ ಪ್ರಧಾನಿ ದೇವೇಗೌಡರು ಆಂಬ್ಯುಲೆನ್ಸ್‌ನಲ್ಲಿ ಬಂದು ಪ್ರಚಾರ ಮಾಡುತ್ತಾರೆಂದು, ಅವರ ಆರೋಗ್ಯದ ಬಗ್ಗೆ ಅಪಹಾಸ್ಯ ಮಾಡಿರುವ ಮಾಜಿ ಸಂಸದ ಡಿ.ಕೆ.ಸುರೇಶ್, ನಿಮಗೆ ಚನ್ನಪಟ್ಟಣದ ಜನತೆ ಉತ್ತರಿಸುತ್ತಾರೆ’ ಎಂದು ಜೆಡಿಎಸ್ ತಿರುಗೇಟು ನೀಡಿದೆ.

ಸೋಮವಾರ ಎಕ್ಸ್‌ ನಲ್ಲಿ ಪೋಸ್ಟ್ ಹಾಕಿರುವ ಜೆಡಿಎಸ್, ‘ರೈತನಾಯಕ, ನೀರಾವರಿ ಹರಿಕಾರರು, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ನಾಡಿಗೆ ಕೊಟ್ಟಿರುವ ಕೊಡುಗೆಗಳು ಅಪಾರ. ದೇವೇಗೌಡರು ಹುಟ್ಟು ಹೋರಾಟಗಾರರು, ಕಾಂಗ್ರೆಸ್‍ನವರು ಮರೆತಿರಬಹುದು, ಹಿಂದೆ ಚನ್ನಪಟ್ಟಣದ ವಿಟ್ಲೇನಹಳ್ಳಿ ಗೋಲಿಬಾರ್ ನಿಮ್ಮದೇ ಕಾಂಗ್ರೆಸ್ ಸರಕಾರ ನಡೆಸಿತ್ತು. ಆಗಲೂ ದೇವೇಗೌಡರು ಚನ್ನಪಟ್ಟಣದಿಂದ ಬೆಂಗಳೂರಿನ ತನಕ ರೈತರಿಗೆ ನ್ಯಾಯ ಕೊಡಿಸಲು ಪಾದಯಾತ್ರೆ ಮಾಡಿದ್ದರು’ ಎಂದು ಸ್ಮರಿಸಿದೆ.

‘ಇಳಿ ವಯಸ್ಸಿನಲ್ಲೂ ರಾಜ್ಯಸಭೆಯಲ್ಲಿ ರಾಜ್ಯದ ಹಲವು ಸಮಸ್ಯೆಗಳ ಕುರಿತು ಮತ್ತು ದೇಶದ ರೈತರ ಬಗ್ಗೆ ಧ್ವನಿ ಎತ್ತಿ ಮಾತನಾಡುವ ಅವರ ಬಗ್ಗೆ ಲಘುವಾಗಿ ಮಾತಾಡಿರುವ ನೀವು, 2 ಬಾರಿ ಸಂಸದರಾಗಿ ಲೋಕಸಭೆಯಲ್ಲಿ ನೀರಾವರಿ, ರೈತರು ಹಾಗೂ ನಾಡಿನ ಸಮಸ್ಯೆಗಳ ಬಗ್ಗೆ ಎಷ್ಟು ಮಾತನಾಡಿದ್ದೀರಿ?’ ಎಂದು ಜೆಡಿಎಸ್ ಪ್ರಶ್ನಿಸಿದೆ.

‘ನಿಮ್ಮ ಆತ್ಮಸಾಕ್ಷಿಯನ್ನು ಪ್ರಶ್ನೆಮಾಡಿಕೊಳ್ಳಿ ಮಿಸ್ಟರ್ ಸುರೇಶ್. ಗೌಡರು ತಂದಿರುವ ನೀರಾವರಿ ಯೋಜನೆಗಳು, ಜಲಾಶಯಗಳ ನಿರ್ಮಾಣ ಕುರಿತು ಇಡೀ ದೇಶವೆ ಮೆಚ್ಚುಗೆ ವ್ಯಕ್ತಪಡಿಸುತ್ತದೆ. ರಾಜ್ಯದ ನದಿಗಳು-ನೀರಾವರಿ ಹೋರಾಟಗಳ ಬಗ್ಗೆ ಸಂಸತ್ತಿನಲ್ಲಿ ಈಗಲು ಗೌಡರು ಮಾತಾನಾಡುತ್ತಲೇ ಇದ್ದಾರೆ. ಅವರ ಕುಟುಂಬದ ಬಗ್ಗೆ ಟೀಕಿಸುತ್ತಿರುವ ಕೃತಜ್ಞತೆ ಇಲ್ಲದ ಆ ಮಾಗಡಿ ಶಾಸಕ, ಮೊದಲ ಬಾರಿಗೆ ಜನಪ್ರತಿನಿಧಿಯಾಗಿದ್ದು ಯಾರ ಕೃಪೆಯಿಂದ ಎಂಬುದು ಜನತೆಗೆ ಗೊತ್ತಿದೆ. ಕಾಂಗ್ರೆಸ್ ಹಿರಿಯರಿಗೆ ಹೇಗೆ ಗೌರವ ಕೊಡಬೇಕೆಂಬುದನ್ನು ಕಾಂಗ್ರೆಸ್ ನಾಯಕರಿಗೆ ಮೊದಲು ಕಲಿಸಲಿ ಎಂದು ಜೆಡಿಎಸ್ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News