ರೈಲ್ವೆ ಪರೀಕ್ಷೆಯಲ್ಲಿ ಮಂಗಳಸೂತ್ರ ನಿಷೇಧ ಬಿಜೆಪಿ ಸಭ್ಯತನವೇ?: ಆರ್.ಅಶೋಕ್ಗೆ ಸಚಿವ ಡಾ.ಎಂ.ಸಿ.ಸುಧಾಕರ್ ಪ್ರಶ್ನೆ

ಡಾ.ಎಂ.ಸಿ.ಸುಧಾಕರ್,ಆರ್.ಅಶೋಕ್
ಬೆಂಗಳೂರು, ಎ.28: ಕೇಂದ್ರ ಸರಕಾರದ ರೈಲ್ವೆ ಪರೀಕ್ಷೆಯಲ್ಲಿ ಮಂಗಳಸೂತ್ರ ನಿಷಿದ್ಧ ಮಾಡಲಾಗಿದ್ದು, ಹಿಂದೂ ಧರ್ಮದ ಗುತ್ತಿಗೆದಾರರಂತೆ ಅಬ್ಬರಿಸಿ ಬೊಬ್ಬಿರಿಯುವ ಬಿಜೆಪಿ ನಾಯಕರು, ಇದಕ್ಕೆ ಏನೆನ್ನುತ್ತಾರೆ? ಇದು ಬಿಜೆಪಿ ಸಭ್ಯತನವೇ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ವಿರೋಧ ಪಕ್ಷದ ನಾಯಕ ಆರ್.ಅಶೋಕ್ರನ್ನು ಪ್ರಶ್ನಿಸಿದ್ದಾರೆ.
ಸೋಮವಾರ ಪ್ರಕಟನೆ ಹೊರಡಿಸಿರುವ ಅವರು, ವಿರೋಧ ಪಕ್ಷದ ನಾಯಕ ಅಶೋಕ್ ಅವರೇ, ಸಿಇಟಿ ತಪಾಸಣಾ ಸಿಬ್ಬಂದಿಯೊಬ್ಬನ ಅಚಾತುರ್ಯದಿಂದ ನಡೆದ ಒಂದು ಘಟನೆ ಬಗ್ಗೆ ಹೇಳಿಕೆ ನೀಡಿ, ನಿಮ್ಮ ಕೊಳಕು ಮನಸ್ಥಿತಿಯನ್ನು ಬಿಚ್ಚಿಟ್ಟಿದ್ದೀರಿ, ಈಗ ಕೇಂದ್ರ ಸರಕಾರ ಮಹಿಳೆಯರ ಮಂಗಳಸೂತ್ರಕ್ಕೆ ಕೈ ಹಾಕಲು ಹೊರಟಿದೆ, ಆದರೆ ನೀವು ಮೌನವಹಿಸಿರುವುದು ಸರಿಯೇ ಎಂದು ಪ್ರಶ್ನಿಸಿದ್ದಾರೆ.
ಜಾತಿ ಧರ್ಮದ ಹೆಸರಿನಲ್ಲಿ ವಿಷ ಬೀಜ ಬಿತ್ತುವ ನಿಮ್ಮ ಈ ಕೀಳು ಮನೋಭಾವದ ಮೂಲಕ ನಿಮ್ಮ ಮನಸ್ಥಿತಿಯನ್ನು ಬೆತ್ತಲುಗೊಳಿಸಿದ್ದೀರಿ. ವಿರೋಧಪಕ್ಷದ ನಾಯಕರ ಸ್ಥಾನದ ಘನತೆ, ಗೌರವವನ್ನು, ಲೆಕ್ಕಿಸದೆ ಮಾಹಿತಿಯೇ ಇಲ್ಲದೆ, ಅದ್ಯಾವ ಪುರುಷಾರ್ಥಕ್ಕೆ ಸಮಾಜದಲ್ಲಿ ಶಾಂತಿ ಕದಡುವಂತಹ ನಿರ್ಲಜ್ಜ ಹೇಳಿಕೆ ನೀಡಿದ್ದೀರಿ ಎಂದು ಅವರು ಪ್ರಶ್ನಿಸಿದ್ದಾರೆ.
ಈಗ ನಿಮ್ಮದೇ ಸರಕಾರ ನಮ್ಮ ಹೆಣ್ಣು ಮಕ್ಕಳ ತಾಳಿಗೆ ಕೈ ಹಾಕಲು ಅಧಿಕೃತ ಆದೇಶವನ್ನೇ ಹೊರಡಿಸಿದೆ. ಇದಕ್ಕೆ ಉತ್ತರ ಕೊಟ್ಟು ನಿಮ್ಮ ಗೌರವ ಉಳಿಸಿಕೊಳ್ಳಿ. ರೈಲ್ವೆ ಪರೀಕ್ಷೆ ಬರೆಯಲು ಮಂಗಳಸೂತ್ರಕ್ಕೆ ಕೈ ಹಾಕಬೇಡಿ ಎಂದು ನಿಮ್ಮದೇ ಲೋಕಸಭಾ ಸದಸ್ಯರು ರೈಲ್ವೆ ಸಚಿವರನ್ನು ಅಂಗಲಾಚಿ ಬೇಡುತ್ತಿದ್ದಾರಲ್ಲ ಇದಕ್ಕೆ ಏನೆನ್ನುತ್ತೀರಿ ಎಂದು ಅವರು ವ್ಯಂಗ್ಯವಾಡಿದ್ದಾರೆ.