ತ್ರಿವರ್ಣಧ್ವಜ ಕೆಳಗಿಳಿಸಿ ಭಗವಾ ಧ್ವಜ ಏರಿಸುವಂತಹ ಭೀಕರ ಸನ್ನಿವೇಶ ಬರಲಿದೆ : ಕೋಟಿಗಾನಹಳ್ಳಿ ರಾಮಯ್ಯ ಆತಂಕ

Update: 2025-04-22 20:31 IST
ತ್ರಿವರ್ಣಧ್ವಜ ಕೆಳಗಿಳಿಸಿ ಭಗವಾ ಧ್ವಜ ಏರಿಸುವಂತಹ ಭೀಕರ ಸನ್ನಿವೇಶ ಬರಲಿದೆ : ಕೋಟಿಗಾನಹಳ್ಳಿ ರಾಮಯ್ಯ ಆತಂಕ
  • whatsapp icon

ಬೆಂಗಳೂರು : ಇಡೀ ಪ್ರಪಂಚವನ್ನು ಪುರೋಹಿತಶಾಹಿ, ಬಂಡವಾಳಶಾಹಿಗಳು ಶೇ.99ರಷ್ಟು ಆಕ್ರಮಣ ಮಾಡಿಕೊಂಡಿದ್ದು, ಇದಕ್ಕೆ ಬಹುದೊಡ್ಡ ಚಾಲಕ ಶಕ್ತಿಯಾಗಿ ಭಾರತದ ವೈದಿಕ ಪುರೋಹಿತಶಾಹಿ ಇದೆ. ಬಹುಶಃ 2047ರ ಹೊತ್ತಿಗೆ ಭಾರತದ ತ್ರಿವರ್ಣಧ್ವಜವನ್ನು ಕೆಳಗಿಳಿಸಿ ಭಗವಾ ಧ್ವಜವನ್ನು ಏರಿಸುವಂತಹ ಭೀಕರ ಸನ್ನಿವೇಶ ಬರಲಿದ್ದು, ದಲಿತರು ಸಹೋದರತ್ವ ಮಾರ್ಗದಲ್ಲಿ ಇದನ್ನು ಎದುರಿಸಬೇಕಾಗಿದೆ ಎಂದು ದಲಿತ ಸಾಹಿತ್ಯ ಸಮ್ಮೇಳನಾಧ್ಯಕ್ಷ, ಹಿರಿಯ ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಅಭಿವ್ಯಕ್ತಿಸಿದ್ದಾರೆ.

ಮಂಗಳವಾರ ನಗರದ ಕನ್ನಡ ಭವನದಲ್ಲಿರುವ ನಯನ ಸಭಾಂಗಣದಲ್ಲಿ ದಲಿತ ಸಾಹಿತ್ಯ ಪರಿಷತ್ತು, ಬೆಂಗಳೂರು ಘಟಕದ ವತಿಯಿಂದ ನಡೆದ ಜಿಲ್ಲಾಮಟ್ಟದ ಪ್ರಥಮ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ಭಾರತದಲ್ಲಿ ರಾಷ್ಟ್ರೀಯತೆಗೆ ಬದಲಾಗಿ ಆರೆಸ್ಸೆಸ್‍ನ ವೈಷ್ಣವ ರಾಷ್ಟ್ರೀಯತೆಯನ್ನು ಹೇರಿಕೆ ಮಾಡಲಾಗುತ್ತಿದೆ. ಇಂದು ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗಗಳಲ್ಲಿ ಬಲಪಂಥೀಯತೆ ತುಂಬಿಕೊಂಡಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಇತ್ತೀಚಿನ ಕಾಲದಲ್ಲಿ ‘ದಲಿತ’ ಎಂಬ ಪದ ಅರ್ಥವನ್ನು ಕಳೆದುಕೊಳ್ಳುತ್ತಿದೆ. ಜಾಗತೀಕರಣದ ಪ್ರಭಾವದ ನಂತರ ಎಲ್ಲ ದಲಿತ ಚಳವಳಿಗಳು ಒಡೆದಿವೆ. ದಲಿತ ಎಂಬುದು ಎಡ-ಬಲಗಳಾಗಿ ಓಳಾಗಿವೆ. ಇಂದು ದಲಿತ ಸಾಹಿತ್ಯವನ್ನು ಒಂದು ನೋಟವಾಗಿ ನೋಡಲು ಸಾಧ್ಯವಿಲ್ಲದಂತಾಗಿದೆ. ಬಹುತೇಕ ದಕ್ಷಿಣ ಭಾರತದಲ್ಲಿ ದಲಿತ ಪ್ರಜ್ಞೆಯು ಅಧಃಪತನಗೊಂಡಿದೆ. ನಾವೀಗ ದಲಿತ ಸೌಂದರ್ಯ ಮೀಮಾಂಸೆ ಏನೆಂಬುದನ್ನು ಮರುವ್ಯಾಖ್ಯಾನ ಮಾಡಿಕೊಳ್ಳಬೇಕಾದ ತುರ್ತು ಹೆಚ್ಚಾಗಿದೆ ಎಂದು ಕೋಟಿಗಾನಹಳ್ಳಿ ರಾಮಯ್ಯ ಎಚ್ಚರಿಸಿದರು.

ಅಂಬೇಡ್ಕರ್ ಹೇಳಿದ ಬಹುಮುಖ್ಯ ಅಂಶವೆಂದರೆ ಅದು ಸಹೋದರತ್ವ. ದಲಿತರಲ್ಲಿ ಸಹೋದರತ್ವ ಭಾವನೆ ಇಲ್ಲದಿದ್ದರೆ ಸ್ವಾತಂತ್ರ್ಯ, ಸಮಾನತೆ ಸಿಗುವುದಿಲ್ಲ. ಜಾತಿ ಹಾಗೂ ಅದರೊಳಗಿನ ಉಪಜಾತಿಗಳಲ್ಲಿ ಸಹೋದರತ್ವ ಭಾವನೆ ಬಂದಾಗ ಅನ್ಯಾಯಗಳನ್ನು ತಡೆಯಬಹುದು, ಹೋರಾಟವನ್ನು ಜಯಿಸಬಹುದಾಗಿದೆ ಎಂದು ಕೋಟಿಗಾನಹಳ್ಳಿ ರಾಮಯ್ಯ ತಿಳಿಸಿದರು.

ಭಾರತದಲ್ಲಿ ದಲಿತರು ಸಹೋದರತ್ವ ಭಾವನೆಯನ್ನು ಉಳಿಸಿಕೊಳ್ಳಲಿಲ್ಲ. ಅಂಬೇಡ್ಕರ್ ಹೇಳಿದ ಸಹೋದರತ್ವ ಪರಿಕಲ್ಪನೆಯನ್ನು ಸರಿಯಾದ ರೀತಿಯನ್ನು ಅಳವಡಿಸಿಕೊಳ್ಳಲಿಲ್ಲ. ಇವತ್ತಿನ ವಿದ್ಯಾವಂತರು, ಮಧ್ಯಮವರ್ಗ ಮತ್ತು ಅಂಬೇಡ್ಕರ್‌ರ ಅನುಯಾಯಿಗಳು ಸೇರಿಕೊಂಡು ಅಂಬೇಡ್ಕರ್ ಹೇಳಿದಂತೆ ನಡೆಯದೆ ಅವರ ನೋವಿಗೆ ಕಾರಣರಾದರು. ಒಂದರ್ಥದಲ್ಲಿ ಅವರನ್ನು ಕೊಂದರು ಎಂದು ಕೋಟಿಗಾನಹಳ್ಳಿ ರಾಮಯ್ಯ ಬೇಸರ ವ್ಯಕ್ತಪಡಿಸಿದರು.

ದಲಿತ ಸಾಹಿತ್ಯಕ್ಕೆ ಹೊಸ ನುಡಿ ಕಟ್ಟಬೇಕು: 1950-70ರ ಕಾಲಘಟ್ಟದ ಸಿದ್ಧಾಂತ, ಚಳವಳಿಗಳನ್ನು ಇವತ್ತಿನ ದಲಿತ ಸಮುದಾಯದ ಯುವ ತಲೆಮಾರು ಸಮಕಾಲೀನಗೊಳಿಸಿಕೊಳ್ಳಬೇಕಾಗಿದೆ. ಹೊಸ ರೀತಿಯಲ್ಲಿ ದಲಿತ ಪ್ರಜ್ಞೆಯನ್ನು ಚಿಂತಿಸಬೇಕಿದೆ. ದಲಿತ ಸಾಹಿತ್ಯದಲ್ಲಿ ಸೈದಾಂತಿಕವಾದ ಪ್ರತಿರೋಧದ ಅಂಶಗಳಿರಬೇಕು. ಆಗ ಮಾತ್ರ ಅದು ದಲಿತ ಸಾಹಿತ್ಯವಾಗಲು ಸಾಧ್ಯ. ಇವತ್ತಿನ ಯುವ ತಲೆಮಾರು ದಲಿತ ಸಾಹಿತ್ಯಕ್ಕೆ ಹೊಸ ನುಡಿಯನ್ನು ಕಟ್ಟಬೇಕಾಗಿದೆ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News