ಕಮಿಷನ್ ಆರೋಪದ ದಾಖಲೆ ಕೊಟ್ಟರೆ ತನಿಖೆ : ಕೃಷ್ಣಬೈರೇಗೌಡ
ಬೆಂಗಳೂರು : ರಾಜ್ಯ ಸರಕಾರದ ಮೇಲೆ ಗುತ್ತಿಗೆದಾರರ ಸಂಘವು ಮಾಡಿರುವ ಕಮಿಷನ್ ಆರೋಪಕ್ಕೆ ಸೂಕ್ತ ದಾಖಲೆ ಕೊಟ್ಟರೆ ತನಿಖೆ ನಡೆಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಪ್ರತಿಕ್ರಿಯಿಸಿದ್ದಾರೆ.
ಗುತ್ತಿಗೆದಾರರ ಸಂಘವು ಸಚಿವ ಸತೀಶ್ ಜಾರಕಿಹೊಳಿ, ಬೋಸರಾಜು ಅವರ ಮೇಲೆ ಕಮಿಷನ್ ಆರೋಪ ಮಾಡಿರುವ ವಿಚಾರವಾಗಿ ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಅವರು, ಗುತ್ತಿಗೆದಾರರು ಏನಾದರೂ ಆರೋಪ ಮಾಡಿದರೆ, ಅದಕ್ಕೆ ಸೂಕ್ತ ದಾಖಲಾತಿ ಕೊಟ್ಟರೆ ತನಿಖೆ ಮಾಡಿಸುತ್ತೇವೆ ಎಂದರು.
ಗುತ್ತಿಗೆದಾರರ ದೂರು ಪರಿಶೀಲನೆ ಮಾಡುತ್ತೇವೆ. ಮಧ್ಯವರ್ತಿಗಳು ಯಾರು ಎಂದು ಅವರು ಮಾಹಿತಿ ಕೊಡಲಿ. ಯಾರ ಕುಟುಂಬದ ಹಸ್ತಕ್ಷೇಪ ಎಂದು ದಾಖಲಾತಿ ಕೊಡಲಿ. ಅವರು ಕೊಟ್ಟರೆ ದೂರು ಪರಿಶೀಲನೆ ಮಾಡುತ್ತೇವೆ. ಸಚಿವರು ಯಾರು?, ಕುಟುಂಬದವರು ಯಾರು? ಎಂದು ನಿರ್ದಿಷ್ಟವಾಗಿ ಹೇಳಿದರೆ ತನಿಖೆ ಮಾಡಿಸುತ್ತೇವೆ ಎಂದು ಕೃಷ್ಣಬೈರೇಗೌಡ ತಿಳಿಸಿದರು.
ಬಿಜೆಪಿಯವರ ಮೇಲೆ ಶೇ.40 ಪರ್ಸೆಂಟ್ ಕಮಿಷನ್ ಆರೋಪದ ನ್ಯಾಯಾಂಗ ತನಿಖೆ ಆಗುತ್ತಿದೆ. ಕೋವಿಡ್ನಲ್ಲಿ ಅಕ್ರಮ ಆಗಿರುವ ಬಗ್ಗೆ ಬಿಜೆಪಿ ನಾಯಕರೇ ಹೇಳುತ್ತಿದ್ದಾರೆ. ಇದರ ತನಿಖೆಯೂ ನಡೆಯುತ್ತಿದೆ. ಅದೇ ರೀತಿ ಗುತ್ತಿಗೆದಾರರು ಏನಾದರೂ ದಾಖಲೆ ಸಹಿತ ಈ ಬಗ್ಗೆ ದೂರು ಕೊಟ್ಟರೆ ಕ್ರಮ ಜರುಗಿಸಲಾಗುವುದು ಎಂದು ಕೃಷ್ಣಬೈರೇಗೌಡ ಹೇಳಿದರು.