ಅಕ್ರಮ ಹಣ ವರ್ಗಾವಣೆ ಪ್ರಕರಣ : ಭೋವಿ ನಿಗಮದ ಮಾಜಿ ನಿರ್ದೇಶಕಿ 7 ದಿನ ಈಡಿ ಕಸ್ಟಡಿಗೆ
ಸಾಂದರ್ಭಿಕ ಚಿತ್ರ | PC: PTI
ಬೆಂಗಳೂರು : ಅಕ್ರಮ ಹಣ ವರ್ಗಾವಣೆ ಪ್ರಕರಣದಡಿ ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಹಿಂದಿನ ವ್ಯವಸ್ಥಾಪಕ ನಿರ್ದೇಶಕಿ ಆರ್.ಲೀಲಾವತಿ ಅವರನ್ನು ಬಂಧಿಸಿ ಏಳು ದಿನಗಳ ಕಾಲ ಜಾರಿ ನಿರ್ದೇಶನಾಲಯ (ಈ.ಡಿ.) ವಶಕ್ಕೆ ಪಡೆದಿರುವುದಾಗಿ ತಿಳಿಸಿದೆ.
ಭೋವಿ ನಿಗಮದಲ್ಲಿ ಬಹುಕೋಟಿ ಹಗರಣ ಸಂಬಂಧ ಎಸ್ಐಟಿ ತನಿಖೆ ನಡೆಸುತ್ತಿದ್ದು, ಈ ಮಧ್ಯೆ ಈ.ಡಿ. ಸಹ ಪ್ರತ್ಯೇಕ ತನಿಖೆ ಕೈಗೊಂಡಿದೆ. ಅಕ್ರಮ ಹಣ ವರ್ಗಾವಣೆ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದೆ ನಿಗಮದ ಹಿಂದಿನ ನಿರ್ದೇಶಕರಾಗಿದ್ದ ಬಿ.ಕೆ.ನಾಗರಾಜಪ್ಪ ಹಾಗೂ ಲೀಲಾವತಿ ಸೇರಿದಂತೆ ಹಲವರ ಮನೆಗಳ ಮೇಲೆ ಈ.ಡಿ. ದಾಳಿ ಮಾಡಿತ್ತು.
ಪರಿಶೀಲನೆ ವೇಳೆಯಲ್ಲಿ ಅಕ್ರಮವಾಗಿ ಹಣ ವರ್ಗಾವಣೆ ಸಂಬಂಧ ದಾಖಲಾತಿಗಳು ದೊರೆತಿದ್ದರಿಂದ ನಾಗರಾಜಪ್ಪ ಅವರನ್ನು ಬಂಧಿಸಿತ್ತು. ಮತ್ತೊಂದೆಡೆ ಲೀಲಾವತಿ ಮನೆಯಲ್ಲಿಯೂ ದಾಖಲಾತಿ ಸಿಕ್ಕಿದ್ದರಿಂದ ಎ.12ರಂದು ಈ.ಡಿ. ವಶಕ್ಕೆ ಪಡೆದುಕೊಂಡಿತ್ತು. ಎ.14ರ ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಿ ಏಳು ದಿನಗಳ ಕಾಲ ಕಸ್ಟಡಿಗೆ ಪಡೆದುಕೊಂಡಿರುವುದಾಗಿ ಪ್ರಕಟನೆಯಲ್ಲಿ ಈ.ಡಿ. ತಿಳಿಸಿದೆ.