ಪುಸ್ತಕ ಪ್ರಾಧಿಕಾರದ ಕನ್ನಡ ʼಪುಸ್ತಕ ಸೊಗಸುʼ, ʼಮುದ್ರಣ ಸೊಗಸುʼ ಬಹುಮಾನ ಪ್ರಕಟ
ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರದ 2022, 2023 ಮತ್ತು 2024ನೆ ಸಾಲಿನ ಕನ್ನಡ ಪುಸ್ತಕ ಸೊಗಸು ಹಾಗೂ ಮುದ್ರಣ ಸೊಗಸು ಬಹುಮಾನ ಪ್ರಕಟವಾಗಿದ್ದು, ಕೇಶವ ಮಳಗಿ, ಡಾ. ಬೇಲೂರು ರಘುನಂದನ್, ಪರವೀನ ಬಾನು ಎಂ. ಶೇಖ ಅವರ ಕೃತಿಗಳು ಬಹುಮಾನಗಳಿಗೆ ಆಯ್ಕೆಯಾಗಿವೆ.
2022ನೆ ಸಾಲಿನ ಪುಸ್ತಕ ಸೊಗಸು ಮೊದಲನೆ ಬಹುಮಾನ ಲೇಖಕ ಕೇಶವ ಮಳಗಿ ಬರೆದ ಗೇಬ್ರಿಯಲ್ ಗಾರ್ಸಿಯ ಮಾರ್ಕೇಸ್-ಗದ್ಯ ಗಾರುಡಿ ಕೃತಿಗೆ ಬಂದಿದ್ದು, ಎರಡನೆ ಬಹುಮಾನ ಜಿ.ಕೆ. ದೇವರಾಜಸ್ವಾಮಿ ಬರೆದ ಅಧಿಷ್ಠಾನ-ಬಾಯಿಪಾಠ ಪುಸ್ತಕ ಹಾಗೂ ಮೂರನೆ ಬಹುಮಾನ ಡಾ. ರವಿಕುಮಾರ್ ನೀಹ ಬರೆದ ಅರಸು ಕುರನ್ಗರಾಯ ಕೃತಿಗೆ ಬಂದಿದೆ.
ಮಕ್ಕಳ ಪುಸ್ತಕ ಸೊಗಸು ಬಹುಮಾನಕ್ಕೆ ಡಾ. ಕುರುವ ಬಸವರಾಜ್ ಬರೆದ ಮಲ್ಲಿಗೆ, ಮುಖಪುಟ ಚಿತ್ರ ವಿನ್ಯಾಸ ಬಹುಮಾನಕ್ಕೆ ಎಚ್.ಎಚ್. ಮಾದ್ಯಾರ್ ಬರೆದಿರುವ ಅಮೂಲ್ಯ ಮತ್ತು ಡಾ. ರಾಜಕುಮಾರ್ ಕುರಿತ ನೂರಾರು ಚುಕ್ಕಿ ಚಿತ್ರ ಸಂಪುಟ ಆಯ್ಕೆಯಾಗಿದೆ. ಮುಖಪುಟ ಚಿತ್ರ ಕಲೆಯ ಬಹುಮಾನಕ್ಕೆ ಪಾರ್ವತಿ ಜಿ. ಐತಾಳ್ ಬರೆದ ಮಾಧವಿ ಕಥನ, ಪುಸ್ತಕ ಮುದ್ರಣ ಸೊಗಸು ಬಹುಮಾನಕ್ಕೆ ಡಾ. ಬೇಲೂರು ರಘುನಂದನ್ ಬರೆದ ಚಿಟ್ಟೆ ಕೃತಿ ಆಯ್ಕೆಯಾಗಿದೆ.
2023ನೆ ಸಾಲಿನ ಪುಸ್ತಕ ಸೊಗಸು ಮೊದಲನೆ ಬಹುಮಾನಕ್ಕೆ ಡಾ. ಆರ್. ಎಚ್. ಕುಲಕರ್ಣಿ ಬರೆದ ದೃಶ್ಯಕಲಾ ಕಮಲ, ಎರಡನೆ ಬಹುಮಾನಕ್ಕೆ ಡಾ. ಮಲ್ಲಿಕಾರ್ಜುನ ಕಲಮರಹಳ್ಳಿ ಬರೆದ ಕಾಡುಗೊಲ್ಲ ಬುಡಕಟ್ಟು ಕುಲಕಥನ ಮೂರನೆ ಬಹುಮಾನಕ್ಕೆ ಡಾ. ಮಲ್ಲಿಕಾರ್ಜುನ ಸಿ. ಬಾಗೋಡಿ ಬರೆದ ಚಿತ್ರ ಭಿತ್ತಿ ಆಯ್ಕೆಯಾಗಿದೆ.
ಮಕ್ಕಳ ಪುಸ್ತಕ ಸೊಗಸು ಬಹುಮಾನಕ್ಕೆ ಪರವೀನ ಬಾನು ಎಂ. ಶೇಖ ಬರೆದ ಬಾಲ ಮಂದಾರ, ಮುಖಪುಟ ಚಿತ್ರ ವಿನ್ಯಾಸ ಬಹುಮಾನಕ್ಕೆ ಡಾ. ಲಲಿತಾ ಕೆ. ಹೊಸಪ್ಯಾಟಿ ಬರೆದ ಬ್ಯೂಟಿ ಬೆಳ್ಳಕ್ಕಿ-ಮಕ್ಕಳ ಕಥೆಗಳು ಕೃತಿ ಆಯ್ಕೆಯಾಗಿದೆ. ಮುಖಪುಟ ಚಿತ್ರ ಕಲೆಯ ಬಹುಮಾನಕ್ಕೆ ಚಂದ್ರಕಾಂತ ಪೋಕಳೆ ಬರೆದ ಬಿಡಾರ ಆತ್ಮಕಥೆ, ಪುಸ್ತಕ ಮುದ್ರಣ ಸೊಗಸು ಬಹುಮಾನಕ್ಕೆ ಡಾ. ಎಸ್. ಗುರುಮೂರ್ತಿ ಬರೆದ ಕಂಬದಹಳ್ಳಿ- ಕಂಬಾಪುರಿಯ ಪಂಚಕೂಟ ಬಸದಿ ಕೃತಿ ಆಯ್ಕೆಯಾಗಿದೆ.
2024ನೆ ಸಾಲಿನ ಪುಸ್ತಕ ಸೊಗಸು ಮೊದಲನೆ ಬಹುಮಾನಕ್ಕೆ ಪ್ರೊ. ಕೆ.ಸಿ. ಶಿವಾರೆಡ್ಡಿ ಬರೆದ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಸಮಗ್ರ ಕೃತಿ ಜಗತ್ತು ಸಂಪುಟಗಳು, ಎರಡನೆ ಬಹುಮಾನಕ್ಕೆ ಕೆ.ಸಿ. ಶ್ರೀನಾಥ ಬರೆದ ಶಕ್ತಿನದಿ ಶರಾವತಿ, ಮೂರನೆ ಬಹುಮಾನಕ್ಕೆ ಸ್ವಾಮಿ ಪೊನ್ನಾಚಿ ಬರೆದ ಕಾಡು ಹುಡುಗನ ಹಾಡು ಪಾಡು ಕೃತಿ ಆಯ್ಕೆಯಾಗಿದೆ.
ಮಕ್ಕಳ ಪುಸ್ತಕ ಸೊಗಸು ಬಹುಮಾನಕ್ಕೆ ಚಂದ್ರಗೌಡ ಕುಲಕರ್ಣಿ ಬರೆದ ಕನ್ನಡ ನುಡಿ ಚಂದ ಚಿಲಿಪಿಲಿ ಶ್ರೀಗಂಧ, ಮುಖಪುಟ ಚಿತ್ರ ವಿನ್ಯಾಸ ಬಹುಮಾನಕ್ಕೆ ಲಕ್ಷ್ಮಣ ಬಾದಮಿ ಬರೆದ ಮಾತಿಗಿಳಿದ ಚಿತ್ರ ಆಯ್ಕೆಯಾಗಿದೆ. ಮುಖಪುಟ ಚಿತ್ರ ಕಲೆಯ ಬಹುಮಾನಕ್ಕೆ ಕಪಿಲ ಪಿ. ಹುಮನಾಬಾದೆ ಬರೆದಿರುವ ಒಣಮಿ, ಪುಸ್ತಕ ಮುದ್ರಣ ಸೊಗಸು ಬಹುಮಾನಕ್ಕೆ ಡಾ. ಶ್ರೀನಿವಾಸಯ್ಯ ಎನ್.ವೈ. ಮತ್ತು ಎಂ.ಯು. ಶ್ವೇತಾ ಅವರ ಮತ್ತೆ ಮತ್ತೆ ಶಂಕರಗೌಡ ತಲೆಮಾರಿನಂತರದ ಮನಸುಗಳು ಇಣುಕುನೋಟ ಕೃತಿ ಆಯ್ಕೆಯಾಗಿದೆ.
ಪುಸ್ತಕ ಸೊಗಸು ಮೊದಲನೆ ಬಹುಮಾನ 25 ಸಾವಿರ ರೂ., ಎರಡನೆ ಬಹುಮಾನ 20 ಸಾವಿರ ರೂ., ಮೂರನೆ ಬಹುಮಾನ 10 ಸಾವಿರ ರೂ. ನಗದನ್ನು ಒಳಗೊಂಡಿದೆ. ಮುಖಪುಟ ಚಿತ್ರ ವಿನ್ಯಾಸ ಬಹುಮಾನ 10 ಸಾವಿರ ರೂ.ಗಳನ್ನು ಒಳಗೊಂಡಿದೆ. ಮಕ್ಕಳ ಪುಸ್ತಕ ಸೊಗಸು ಬಹುಮಾನ ಮತ್ತು ಮುಖಪುಟ ಚಿತ್ರ ಕಲೆಯ ಬಹುಮಾನ ತಲಾ 8 ಸಾವಿರ ರೂ.ಗಳ ನಗದನ್ನು ಒಳಗೊಂಡಿದೆ. ಪುಸ್ತಕ ಮುದ್ರಣ ಸೊಗಸು ಬಹುಮಾನ 5 ಸಾವಿರ ರೂ.ಗಳನ್ನು ಒಳಗೊಂಡಿದೆ.