‘ಅನುಭವ ಮಂಟಪ’ ಬಸವಾದಿ ಶರಣರ ವೈಭವ ರಥಯಾತ್ರೆಗೆ ಸಿಎಂ ಚಾಲನೆ

Update: 2025-04-17 19:48 IST
‘ಅನುಭವ ಮಂಟಪ’ ಬಸವಾದಿ ಶರಣರ ವೈಭವ ರಥಯಾತ್ರೆಗೆ ಸಿಎಂ ಚಾಲನೆ
  • whatsapp icon

ಬೆಂಗಳೂರು : ‘ಅನುಭವ ಮಂಟಪ-ಬಸವಾದಿ ಶರಣರ ವೈಭವ’ ರಥಯಾತ್ರೆಯು ಇಡೀ ರಾಜ್ಯದಲ್ಲಿ ಪ್ರಯಾಣ ಮಾಡಲಿದೆ. ಇದರಿಂದ ವಚನ ಸಾಹಿತ್ಯದ ಪರಿಚಯ, ಬಸವಣ್ಣನವರ ವಿಚಾರಗಳು ಪ್ರಚಾರವಾಗುತ್ತದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ತಿಳಿಸಿದ್ದಾರೆ.

ಗುರುವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ವಿಧಾನಸೌಧದಲ್ಲಿ ಆಯೋಜಿಸಲಾಗಿದ್ದ ‘ಅನುಭವ ಮಂಟಪ-ಬಸವಾದಿ ಶರಣರ ವೈಭವ’ ಕಾರ್ಯಕ್ರಮದ ಲಾಂಛನ ಬಿಡುಗಡೆ ಮತ್ತು ರಥಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, ಬಸವಣ್ಣನವರು ಸಮಾಜಕ್ಕಾಗಿ ಬದುಕಿದವರು. ಸಮಾಜದ ಬದಲಾವಣೆಗಾಗಿ ಬದುಕಿರುವವರೆಗೂ ಪ್ರಯತ್ನಿಸಿದರು ಎಂದು ಸ್ಮರಿಸಿದರು.

‘ಬಸವಣ್ಣನವರ ಅನುಭವ ಮಂಟಪ ಪರಿಕಲ್ಪನೆಯ ಮೂಲಕ 12ನೇ ಶತಮಾನದಲ್ಲಿಯೇ ಪ್ರಜಾಪ್ರಭುತ್ವದ ಸ್ಥಾಪನೆಯಾಗಿತು. ಇಲ್ಲಿ ಚರ್ಚೆ ಮತ್ತು ಅದಕ್ಕೆ ಪರಿಹಾರವನ್ನು ಕಂಡುಹಿಡಿದು ಅದನ್ನು ಜಾರಿ ಮಾಡುತ್ತಿದ್ದರು. ಜಗತ್ತಿನ ಮೊದಲನೇ ಸಂಸತ್ತು ಇದಾಗಿತ್ತು. ಎಲ್ಲ ಧರ್ಮ, ಜಾತಿಯವರಿಗೆ ಭಾಗವಹಿಸಲು ಅವಕಾಶವನ್ನು ಕಲ್ಪಿಸಲಾಗಿತ್ತಲ್ಲದೇ ಅವರ ಅಭಿಪ್ರಾಯವನ್ನು ಮುಕ್ತವಾಗಿ ವ್ಯಕ್ತಪಡಿಸಬಹುದಾಗಿತ್ತು ಎಂದು ಸಿದ್ದರಾಮಯ್ಯ ನುಡಿದರು.

ಕಳೆದ ಬಾರಿ ನಮ್ಮ ಸರಕಾರದ ಅವಧಿಯಲ್ಲಿ ಬಸವ ಕಲ್ಯಾಣದ ಪುನರುತ್ಥಾನ ಮಾಡಲು ಹಿರಿಯ ಸಾಹಿತಿ ಗೊ.ರು.ಚನ್ನಬಸಪ್ಪ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿತ್ತು. ಪುನರುತ್ಥಾನದ ಕೆಲಸವನ್ನು ಈ ಬಾರಿ ಪೂರೈಸಲಾಗುವುದು ಎಂದು ಸಿದ್ದರಾಮಯ್ಯ ಭರವಸೆ ನೀಡಿದರು.

ಸಾಂಸ್ಕೃತಿಕ ನಾಯಕ: ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ನಮ್ಮ ಸರಕಾರ ಘೋಷಣೆ ಮಾಡಿದೆ. ಕೇವಲ ಘೋಷಣೆ ಮಾಡಿಲ್ಲ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಒಪ್ಪಿಕೊಂಡು ಜಾರಿ ಮಾಡಿದೆ. ಬಸವಣ್ಣ ಸಾಮಾಜಿಕ ಕ್ರಾಂತಿ ಮಾಡಿದವರು. ಸಮಾಜದಲ್ಲಿನ ಸಾಮಾಜಿಕ ರೋಗಗಳಿಗೆ ಪರಿಹಾರವನ್ನು ಸೂಚಿಸಿದ್ದು ಮಾತ್ರವಲ್ಲದೇ ನುಡಿದಂತೆ ನಡೆಯುವ ಹಾಗೂ ನಡೆದಂತೆ ನುಡಿಯುವ ಪ್ರಯತ್ನವನ್ನು ಮಾಡಿದರು ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News