ಪಹಲ್ಗಾಮ್ ಉಗ್ರರ ದಾಳಿ ಬಗ್ಗೆ ಸೂಕ್ತ ತನಿಖೆಯಾಗಲಿ; ಅಖಿಲ ಕರ್ನಾಟಕ ಮಹಮ್ಮದೀಯರ ಕನ್ನಡ ವೇದಿಕೆ ಒತ್ತಾಯ

ಬೆಂಗಳೂರು: ʼಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿ ಘಟನೆಗೆ ಕಾರಣವಾದ ಭದ್ರತಾ ವೈಫಲ್ಯಗಳ ಬಗ್ಗೆ ಕೂಡಲೇ ಸೂಕ್ತ ತನಿಖೆ ನಡೆಸಬೇಕುʼ ಎಂದು ಅಖಿಲ ಕರ್ನಾಟಕ ಮಹಮ್ಮದೀಯರ ಕನ್ನಡ ವೇದಿಕೆ ಒತ್ತಾಯಿಸಿದೆ.
ಶುಕ್ರವಾರ ನಗರದ ಮತ್ತೀಕೆರೆಯ ಮಸ್ಟಿದ್ ಎ-ತಾಹಾ ಆವರಣದಲ್ಲಿ ನಡೆದ ಪಹಲ್ಗಾಮ್ ಉಗ್ರರ ದಾಳಿ ಖಂಡನಾ ಸಭೆ ಹಾಗೂ ಹತ್ಯೆಗೀಡಾದವರಿಗೆ ಶ್ರದ್ದಾಂಜಲಿ ಸಭೆಯಲ್ಲಿ ಅಖಿಲ ಕರ್ನಾಟಕ ಮಹಮ್ಮದೀಯರ ಕನ್ನಡ ವೇದಿಕೆ ಸದಸ್ಯರು, ಪಹಲ್ಗಾಮ್ ಘಟನೆಯು ಜನಸಾಮಾನ್ಯರ ಮೇಲೆ ಮೂಲಭೂತವಾದ ನಡೆಸಿದ ಅಟ್ಟಹಾಸ ಮತ್ತು ಭಾರತದ ಸಮಗ್ರತೆಯ ಮೇಲೆ ಭಯೋತ್ಪಾದಕರು ನಡೆಸಿದ ದಾಳಿಯಾಗಿದೆ ಎಂದು ಖಂಡಿಸಿದರು.
ಭಾರತದ ಸಾರ್ವಭೌಮತೆಯ ಸಂಕೇತ ಮತ್ತು ಭೂ ಲೋಕದ ಸ್ವರ್ಗ ಎಂದೇ ಬಿಂಬಿಸಲ್ಪಟ್ಟ, ಕಾಶ್ಮೀರದಲ್ಲಿ ಉಗ್ರರು ನಡೆಸಿದ ಪೈಶಾಚಿಕ ಕೃತ್ಯದಿಂದ ಇಡೀ ಮನುಕುಲವೇ ತಲೆತಗ್ಗಿಸುವಂತಾಗಿದೆ ಎಂದು ಹೇಳಿದರು.
ಇದೇ ವೇಳೆ ಘಟನೆಯಲ್ಲಿ ಹತ್ಯೆಗೀಡಾದವರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು.
ಈ ಸಂದರ್ಭ ಮಾಜಿ ಸಚಿವ ಆರ್.ರೋಷನ್ ಬೇಗ್, ಸೈಯದ್ ಅಶ್ರಫ್, ಪತ್ರಕರ್ತ ಬೇಲಗೂರು ಸಮೀಉಲ್ಲಾ, ಅಖಿಲ ಕರ್ನಾಟಕ ಮಹಮದೀಯರ ಕನ್ನಡ ವೇದಿಕೆಯ ಅಧ್ಯಕ್ಷ ಸಮೀಉಲ್ಲಾ ಖಾನ್, ಕಾರ್ಯದರ್ಶಿ ಪಹಝಹಾನ್, ಬೈತುಲ್ ಮಾಲ್ ಅಧ್ಯಕ್ಷ ನಝೀರ್, ಯಶವಂತಪುರ ಜಾಮಿಯಾ ಮಸ್ಟಿದ್ ಉಪಾಧ್ಯಕ್ಷ ಮಹಮ್ಮದ್ ಅಲಿ, ಬೆಂಗಳೂರು ಗ್ರಾಮಾಂತರ ವಕ್ಫ್ ಮಂಡಳಿ ಉಪಾಧ್ಯಕ್ಷ ಹಫೀಝ್-ಉರ್ ರಹ್ಮಾನ್, ಸಾಗರ್ ಸಮೀಉಲ್ಲಾ ಮತ್ತಿತರರು ಹಾಜರಿದ್ದರು.