ನಗರದ ರಸ್ತೆಗಳು ಕಳಪೆಯಾಗಿದೆ ಎಂದ ತೇಜಸ್ವಿ ಸೂರ್ಯ ಆರೋಪದಲ್ಲಿ ವಾಸ್ತವಿಕತೆ ಇಲ್ಲ: ದಾಖಲೆ ಸಹಿತ ಬಿಬಿಎಂಪಿ ಸ್ಪಷ್ಟನೆ

ತೇಜಸ್ವಿ ಸೂರ್ಯ, ಬಿಬಿಎಂಪಿ
ಬೆಂಗಳೂರು: ರವಿವಾರದಂದು ನಗರದಲ್ಲಿ ಆಯೋಜಿಸಿದ್ದ ಮ್ಯಾರಥಾನ್ ಓಟದ ಸಮಯದಲ್ಲಿ ಸಂಸದ ತೇಜಸ್ವಿ ಸೂರ್ಯ ನಗರದ ರಸ್ತೆಗಳು ಕಳಪೆಯಾಗಿದೆ ಎಂದು ಆರೋಪಿಸಿದ್ದು, ಇದರಲ್ಲಿ ಯಾವುದೇ ವಾಸ್ತವಿಕತೆ ಇಲ್ಲ ಎಂದು ಬಿಬಿಎಂಪಿ ದಾಖಲೆಗಳ ಸಹಿತ ಸ್ಪಷ್ಟಪಡಿಸಿದೆ.
ಮ್ಯಾರಥಾನ್ ಓಟದ ರಸ್ತೆಗಳು ಉತ್ತಮ ಗುಣಮಟ್ಟದಲ್ಲಿರುವುದರ ಬಗ್ಗೆ ಸೋಮವಾರದಂದು ಬಿಬಿಎಂಪಿಯು ದಾಖಲೆಗಳನ್ನು ಬಿಡುಗಡೆ ಮಾಡಿದ್ದು, ಅದರೊಂದಿಗೆ ಆಯೋಜಕರು ಬಿಬಿಎಂಪಿಗೆ ಸಲ್ಲಿಸಿದ ಅಭಿನಂದನಾ ಪತ್ರವನ್ನೂ ಲಗತ್ತಿಸಿದೆ. ಅಲ್ಲದೆ ಮ್ಯಾರಥಾನ್ನಲ್ಲಿ ಭಾಗವಹಿಸಿದ್ದ ಅಂತರಾಷ್ಟ್ರೀಯ ಮಟ್ಟದ ಗಣ್ಯರು ನಗರದ ಮೂಲಸೌಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಬಗ್ಗೆಯೂ ಬಿಬಿಎಂಪಿ ದಾಖಲೆಯನ್ನು ಬಿಡುಗಡೆ ಮಾಡಿದೆ.
ತೇಜಸ್ವಿ ಸೂರ್ಯ ನಗರದ ರಸ್ತೆಗಳ ಬಗೆಗಿನ ಆರೋಪಕ್ಕೆ ಸಂಬಂಧಪಟ್ಟಂತೆ ಬಿಬಿಎಂಪಿ ಕಾರ್ಯಪಾಲಕ ಅಭಿಯಂತರರಿಂದ ಬಿಬಿಎಂಪಿ ಪ್ರಧಾನ ಅಭಿಯಂತರರು ವರದಿಯನ್ನು ಪಡೆದುಕೊಂಡಿದ್ದಾರೆ. ಮ್ಯಾರಥಾನ್ ಆಯೋಜಿದ್ದ ಎರಡೂ ವರದಿಗಳು ರಸ್ತೆಗಳು ಗುಂಡಿ ಮುಕ್ತವಾಗಿದ್ದು, 10,000 ಮೀಟರ್ ಓಟಕ್ಕೆ ಯಾವುದೇ ರೀತಿಯ ಅಪಾಯವನ್ನು ಒಡ್ಡುವ ಪರಿಸ್ಥಿತಿ ಇಲ್ಲವೆಂದು ವರದಿಯಲ್ಲಿ ಉಲ್ಲೇಖವಾಗಿದೆ.
ಮತ್ತೊಂದು ಪ್ರಮುಖ ಅಂಶವೆಂದರೆ ರವಿವಾರ ನಡೆದ 10,000 ಮೀ ಮ್ಯಾರಥಾನ ಓಟದಲ್ಲಿ ಭಾರತದ ಕ್ರೀಡಾಪಟು ಅಭಿಷೇಕ್ ಪಾಲ್ ಹಿಂದಿನ ಎಲ್ಲಾ ದಾಖಲೆಗಳನ್ನು ಮೀರಿ 29 ನಿಮಿಷ 12 ಸೆಕೆಂಡ್ ಸಮಯದಲ್ಲಿ ಓಟವನ್ನು ಪೂರ್ಣಗೊಳಿಸಿದ್ದು, ರಸ್ತೆಯು ಉತ್ತಮವಾದ ಸ್ಥಿತಿಯಲ್ಲಿ ಇದ್ದ ಕಾರಣವನ್ನು ಎತ್ತಿ ತೋರಿಸಿರುತ್ತದೆ ಎಂದು ಬಿಬಿಎಂಪಿ ಹೇಳಿದೆ.