ಬೆಳಗಾವಿ | ಹಸುಗೂಸು, ಬಾಣಂತಿ, ವೃದ್ಧೆಯನ್ನು ಹೊರಹಾಕಿ ಮನೆ ಜಪ್ತಿ ಮಾಡಿದ ಫೈನಾನ್ಸ್‌ ಸಿಬ್ಬಂದಿ

Update: 2025-01-24 16:44 IST
ಬೆಳಗಾವಿ | ಹಸುಗೂಸು, ಬಾಣಂತಿ, ವೃದ್ಧೆಯನ್ನು ಹೊರಹಾಕಿ ಮನೆ ಜಪ್ತಿ ಮಾಡಿದ ಫೈನಾನ್ಸ್‌ ಸಿಬ್ಬಂದಿ
  • whatsapp icon

ಬೆಳಗಾವಿ : ಸಾಲ ಮರುಪಾವತಿಸದ ಹಿನ್ನೆಲೆಯಲ್ಲಿ ಒಂದು ತಿಂಗಳ ಹಸುಗೂಸು, ಬಾಣಂತಿ ಸೇರಿ ಮನೆಯವರನ್ನೆಲ್ಲಾ ಹೊರಗೆ ಹಾಕಿ ಮೈಕ್ರೋ ಫೈನಾನ್ಸ್​ ಸಂಸ್ಥೆಯೊಂದು ಮನೆ ಜಪ್ತಿ ಮಾಡಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ

ತಾಲ್ಲೂಕಿನ ತಾರಿಹಾಳ ಗ್ರಾಮದಲ್ಲಿ ಗುರುವಾರ ಸಾಲ ವಸೂಲಿಗೆ ಬಂದ ಖಾಸಗಿ ಫೈನಾನ್ಸ್‌ ಸಿಬ್ಬಂದಿ, ಬಾಣಂತಿ ಹಾಗೂ ಹಸುಗೂಸು ಸೇರಿ ಮನೆಯ ಎಲ್ಲರನ್ನೂ ಹೊರಗೆ ಹಾಕಿದ್ದಾರೆ. ಪಾತ್ರೆ, ಬಟ್ಟೆಗಳನ್ನೆಲ್ಲ ಹೊರಗೆ ಎಸೆದು ಬೀಗ ಜಡಿದಿದ್ದಾರೆ. ಮನೆ ಗೋಡೆ ಮುಂದೆ ಇದು ಹರಾಜಿಗಿದೆ ಎಂದು ಬರೆದಿದ್ದಾರೆ.

ತಾರಿಹಾಳ ಗ್ರಾಮದ ಗಣಪತಿ ರಾಮಚಂದ್ರ ಲೋಹಾರ್ ಅವರ ಮನೆ ಜಪ್ತಿ ಮಾಡಲಾಗಿದೆ. ಗಣಪತಿ ಅವರು ಐದು ವರ್ಷಗಳ ಹಿಂದೆ ಮನೆ ಕಟ್ಟಿಸಲು ಖಾಸಗಿ ಫೈನಾನ್ಸ್‌ನಿಂದ 5 ಲಕ್ಷ ರೂ. ಸಾಲ ಪಡೆದಿದ್ದರು. ನಿರಂತರ ಮೂರು ವರ್ಷ ಕಂತುಗಳನ್ನು ಸರಿಯಾಗಿಯೇ ಕಟ್ಟಿದ್ದಾರೆ. ವೃದ್ಧ ತಾಯಿಗೆ ಅನಾರೋಗ್ಯ, ಮಗಳ ಹೆರಿಗೆ ಹಿನ್ನೆಲೆಯಲ್ಲಿ ಕಳೆದ ಆರು ತಿಂಗಳಿಂದ ಕಂತು ಪಾವತಿಸಲು ಸಾಧ್ಯವಾಗಿಲ್ಲ ಎನ್ನಲಾಗಿದೆ.

ಇದರಿಂದ ಫೈನಾನ್ಸ್‌ನವರು ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯದ ಆದೇಶದಂತೆ ಪೊಲೀಸರು ಹಾಗೂ ವಕೀಲರ ಸಮ್ಮುಖದಲ್ಲೇ ಮನೆ ಖಾಲಿ ಮಾಡಿಸಿದ್ದಾರೆ. ಮನೆಯಲ್ಲಿ ಬಾಣಂತಿ, ಹಸುಗೂಸು, ಅನಾರೋಗ್ಯಕ್ಕೆ ಒಳಗಾದ ವೃದ್ಧೆ ಇದ್ದರು. ಕನಿಷ್ಠ ಸೌಜನ್ಯ ತೋರದ ಸಿಬ್ಬಂದಿ ಎಲ್ಲ ವಸ್ತುಗಳನ್ನು ಹೊರಗೆ ಹಾಕಿ, ಕುಟುಂಬವನ್ನು ಬೀದಿಪಾಲು ಮಾಡಿದ್ದಾರೆ ಎಂದು ಆರೋಪ ಕೇಳಿ ಬಂದಿದೆ.

ಕುಟುಂಬದವರು ಮನೆ ಪಕ್ಕದಲ್ಲೇ ಶೆಡ್‌ ಹಾಕಿ ಅದರಲ್ಲೇ ಬಿಸಿಲಿನಿಂದ ಆಶ್ರಯ ಪಡೆಯಬೇಕಾಯಿತು. 

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News