ಸಾಹಿತಿಗಳು ‘ಸಮಾಜಕ್ಕೆ ಮೆದುಳು’ ಇದ್ದಂತೆ...: ಸಿಎಂ ಸಿದ್ದರಾಮಯ್ಯ

Update: 2023-06-24 12:49 GMT

ಬೆಂಗಳೂರು, ಜೂ.24: ನಾಡಿನ ಸಾಹಿತಿಗಳು ಸಮಾಜಕ್ಕೆ ಮೆದುಳು ಇದ್ದಂತೆ. ಅವರ ಬಗ್ಗೆ ಅಪಾರ ಗೌರವಿದೆ. ಹೀಗಾಗಿ, ನಮ್ಮ ಸರಕಾರದಲ್ಲಿ ಸಾಹಿತಿಗಳು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಆತಂಕ ಪಡಬೇಕಾಗಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಶನಿವಾರ ನಗರದ ಗಾಂಧಿ ಭವನದಲ್ಲಿ ಕರ್ನಾಟಕ ರಾಜ್ಯ ಬರಹಗಾರರು ಹಾಗೂ ಪ್ರಕಾಶಕರ ಸಂಘದ 20ನೆ ವಾರ್ಷಿಕೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ರಕ್ಷಣೆ ಮಾಡುತ್ತೇವೆ. ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಯಾರೂ ಹೆದರಬೇಕಿಲ್ಲ ಎಂದರು.

ಲೇಖಕರ ಬರವಣಿಗೆಗಳು ಸಮಾಜಮುಖಿಯಾಗಿರಬೇಕು. ಸಮಾಜ ನನಗೇನು ನೀಡಿದೆ ಎಂದು ಪ್ರಶ್ನಿಸುವ ಬದಲು ಸಮಾಜಕ್ಕೆ ನನ್ನ ಕೊಡುಗೆಯೇನು ಎಂದು ಪ್ರಶ್ನಿಸಿಕೊಳ್ಳಬೇಕು. ಈ ಪ್ರಶ್ನೆಗೆ ನಾವು ಸಮಾಧಾನಕರ ಉತ್ತರ ಕಂಡುಕೊಳ್ಳುವ ಮೂಲಕ ನಮ್ಮ ಬದುಕನ್ನು ಸಾರ್ಥಕಗೊಳಿಸಿಕೊಳ್ಳಬೇಕು. ಈ ಬಗ್ಗೆ ಎಲ್ಲ ಲೇಖಕರು, ಪ್ರಕಾಶಕರು ಯೋಚಿಸುವ ಮೂಲಕ ಸಮಾಜದಲ್ಲಿನ ಅನೇಕ ನ್ಯೂನ್ಯತೆಗಳ್ನು ಹೋಗಲಾಡಿಸಬಹುದು ಎಂದು ತಿಳಿಸಿದರು.

ಸಮಾಜದಲ್ಲಿ ಬದಲಾವಣೆಗಳಾಗಬೇಕು. ಜಾತಿಪದ್ಧತಿಯ ಕಾರಣ, ಬಹಳ ಜನ ಅಕ್ಷರ ಸಂಸ್ಕøತಿಯಿಂದ ವಂಚಿತರಾಗಿದ್ದಾರೆ. ಇದರಿಂದ ಆರ್ಥಿಕ, ಸಾಮಾಜಿಕ ಅಸಮಾನತೆ ಉಂಟಾಗುತ್ತದೆ. ಈ ಅಸಮಾನತೆಯನ್ನು ಹೋಗಲಾಡಿಸಿದರೆ ಸಮಾಜದಲ್ಲಿ ಶಾಂತಿ, ಸೌಹಾರ್ದತೆ ನೆಲೆಸಿ ಅಭಿವೃದ್ಧಿ ಸಾಧ್ಯವಿದೆ. ನಮ್ಮ ಸಂವಿಧಾನದ ಉದ್ದೇಶವೂ ಇದೆ ಆಗಿದ್ದು, ಇದೇ ಯೋಚನೆಯ ಹಾದಿಯಲ್ಲಿಯೇ ನಮ್ಮ ಅನೇಕ ಬರಹಗಾರರು ಕೆಲಸ ಮಾಡುತ್ತಿದ್ದಾರೆ ಎಂದು ನುಡಿದರು.

ಇನ್ನೂ, ಭಾರತದಲ್ಲಿ ಒಂದು ವ್ಯಕ್ತಿ, ಒಂದು ಮತ, ಒಂದು ಮೌಲ್ಯವೆಂದು ಗುರುತಿಸುವಂತೆ ನಮ್ಮ ಸಂವಿಧಾನ ತಿಳಿಸಿದ್ದರೂ, ಸಾಮಾಜಿಕವಾಗಿ ಆರ್ಥಿಕವಾಗಿ ವೈರುಧ್ಯಗಳು ನಮ್ಮ ಸಮಾಜದಲ್ಲಿದೆ. ಅಸಮಾನತೆಗೆ ಒಳಗಾಗುವ ಜನರೇ ಭಾರತದ ಸ್ವಾತಂತ್ರ್ಯದ ಹಾಗೂ ಪ್ರಜಾಪ್ರಭುತ್ವದ ಸೌಧವನ್ನು ಧ್ವಂಸಗೊಳಿಸುವ ಸಾಧ್ಯತೆಯಿದೆ ಎಂದು ಡಾ.ಅಂಬೇಡ್ಕರ್ ಅವರು ಸಂವಿಧಾನ ಅಂಗೀಕೃತವಾದ ಸಂದರ್ಭದಲ್ಲಿ ಮಾಡಿದ ಐತಿಹಾಸಿಕ ಭಾಷಣದಲ್ಲಿ ತಿಳಿಸಿದ್ದರು. ಜ್ಞಾನ ವೃದ್ಧಿಗಾಗಿ ಪುಸ್ತಕವನ್ನು ಓದಲೇಬೇಕು. ಕಲಿತಷ್ಟು ಜ್ಞಾನ ವಿಕಾಸಗೊಳ್ಳುತ್ತದೆ. ಲೇಖಕರ ಬರಣವಣಿಗೆಗಳು ಸಮಾಜಮುಖಿಯಾಗಿರಬೇಕು ಎಂದು ಸಿದ್ದರಾಮಯ್ಯ ಕರೆ ನೀಡಿದರು.

ಪ್ರಶಸ್ತಿ ಪ್ರದಾನ: ಕಾರ್ಯಕ್ರಮದಲ್ಲಿ ನಾಡೋಜ ಡಾ.ಪಿ.ಎಸ್.ಶಂಕರ್, ಕೌಶಿಕ್ ಕೂಡುರಸ್ತೆ, ಬಿ.ಎನ್. ಶ್ರೀರಾಮ ಹಾಗೂ ಜಿ.ಎಚ್.ಕೃಷ್ಣಮೂರ್ತಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಹಿರಿಯ ಸಾಹಿತಿ ನಾಡೋಜ ಡಾ.ಹಂಪ ನಾಗರಾಜಯ್ಯ, ಹಂಪಿ ವಿವಿಯ ವಿಶ್ರಾಂತ ಕುಲಪತಿ ಡಾ.ಮಲ್ಲಿಕಾ ಘಂಟಿ, ಸಂಘದ ಅಧ್ಯಕ್ಷ ನಿಡಸಾಲೆ ಪುಟ್ಟಸ್ವಾಮಯ್ಯ, ಕಾರ್ಯದರ್ಶಿ ಆರ್.ದೊಡ್ಡೆಗೌಡ ಸೇರಿದಂತೆ ಪ್ರಮುಖರಿದ್ದರು.


ಜಾರಿ ಮಾಡದವರು, ಈಗ ಧರಣಿ: ‘ಐದು ಗ್ಯಾರಂಟಿಗಳನ್ನು ಈಡೇರಿಸದಿದ್ದರೆ ಅಧಿವೇಶನದಲ್ಲಿ ಧರಣಿ ಕೂರುವುದಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದು, ಅವರು ನೀಡಿದ್ದ ಪ್ರಣಾಳಿಕೆಯಲ್ಲಿ 1 ಲಕ್ಷ ರೂ.ವರೆಗಿನ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿನ ರೈತರ ಸಾಲವನ್ನು ಮನ್ನಾ ಮಾಡುವುದಾಗಿ ಹೇಳಿದ್ದರು. 10 ಗಂಟೆ ವಿದ್ಯುತ್ ನೀಡುತ್ತೇವೆ, ನೀರಾವರಿಗೆ 1.50ಲಕ್ಷ ಕೋಟಿ ರೂ.ಖರ್ಚು ಮಾಡುತ್ತೇವೆ ಎಂದೆಲ್ಲಾ ಹೇಳಿದ್ದರು. ಆದರೆ ಅವುಗಳನ್ನು ಜಾರಿ ಮಾಡದವರು ಈಗ ಧರಣಿ ಕುಳಿತುಕೊಳ್ಳುವುದಾಗಿ ಹೇಳುತ್ತಾರೆ’ ಎಂದು ಸಿದ್ದರಾಮಯ್ಯ ವ್ಯಂಗವಾಡಿದರು.

ಜನರ ಹಣವನ್ನು ಖರ್ಚು ಮಾಡುವಾಗ ಎಚ್ಚರಿಕೆ: ‘ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯಡಿ ಅರ್ಜಿ ಕರೆಯಲಾಗಿದೆ. ತೆರಿಗೆ ಹಣ ಒಬ್ಬರ ಖಾಸಗಿ ಸ್ವತ್ತಲ್ಲ. ಜನರ ಹಣವನ್ನು ಖರ್ಚು ಮಾಡುವಾಗ ಎಚ್ಚರಿಕೆ ಅಗತ್ಯ. 200 ಯೂನಿಟ್ ಉಚಿತ ವಿದ್ಯುತ್ ನೀಡುವ ಯೋಜನೆಗೆ 200 ಯೂನಿಟ್‍ಗೆ ಕೊಡಬೇಕು ಎನ್ನುತ್ತಾರೆ. ವರ್ಷಕ್ಕೆ ಸಾರಾಸರಿ 70 ಯೂನಿಟ್ ಖರ್ಚು ಮಾಡುವವರಿಗೆ 200 ಯೂನಿಟ್ ಉಚಿತ ಕೊಟ್ಟರೆ ಅದು ದುರುಪಯೋಗ ಮತ್ತು ದುರ್ಬಳಕೆಯಲ್ಲವೇ?’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News