ಬೀದರ್ | ನೀಲಿ ಧ್ವಜಕ್ಕೆ ಅವಮಾನ ಆರೋಪ : ಗ್ರಾಮಸ್ಥರಿಂದ ರಸ್ತೆ ತಡೆದು ಪ್ರತಿಭಟನೆ

ಬೀದರ್ : ಭಾಲ್ಕಿ ತಾಲ್ಲೂಕಿನ ವರವಟ್ಟಿ (ಬಿ) ಗ್ರಾಮದಲ್ಲಿ ರಸ್ತೆ ಪಕ್ಕದ ಕಂಬಕ್ಕೆ ಕಟ್ಟಿರುವ ನೀಲಿ ಹಾಗೂ ಪಂಚಶೀಲ ಧ್ವಜಗಳನ್ನು ಕೆಲವು ಕಿಡಿಗೇಡಿಗಳು ಕಿತ್ತು ನಾಲೆಯಲ್ಲಿ ಬಿಸಾಕಿ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ಭಾಲ್ಕಿ-ಘೋಡವಾಡಿ ಮುಖ್ಯರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ.
ಅಂಬೇಡ್ಕರ್ ಜಯಂತಿಯ ದಿನದಂದು ರಸ್ತೆ ಪಕ್ಕದ ಕಂಬಕ್ಕೆ ನೀಲಿ ಹಾಗೂ ಪಂಚಶೀಲ ಧ್ವಜಗಳನ್ನು ಕಟ್ಟಲಾಗಿತ್ತು. ಆದರೆ ಕೆಲವು ಕಿಡಿಗೇಡಿಗಳು ಆ ಧ್ವಜಗಳನ್ನು ಕಿತ್ತು ನಾಲೆಯಲ್ಲಿ ಬಿಸಾಕಿ ಅವಮಾನ ಮಾಡಿದ್ದಾರೆ ಎಂದು ಪ್ರತಿಭಟನಾನಿರತರು ಆರೋಪಿಸಿದ್ದಾರೆ.
ಇಂದು ಬೆಳಿಗ್ಗೆ ಕಿಡಿಗೇಡಿಗಳು ಧ್ವಜಗಳು ಕಿತ್ತು ಬಿಸಾಕಿ ಅವಮಾನ ಮಾಡಿದ್ದಾರೆ. ಹಾಗಾಗಿ ಮುಖ್ಯ ರಸ್ತೆ ಮೇಲೆ ಟೆಂಟ್ ಹೊಡೆದು ಮುಂಜಾನೆಯಿಂದ ಮಹಿಳೆಯರು ಸೇರಿದಂತೆ ನೂರಾರು ಜನರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಆರೋಪಿಗಳ ವಿರುದ್ಧ ಪ್ರಕರಣ ದಾಖಲು ಮಾಡಿ, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
ಈ ಘಟನೆ ತಿಳಿದು ಖಟಕ ಚಿಂಚೋಳಿ ಪೊಲೀಸರು ಸ್ಥಳಕ್ಕಾಗಮಿಸಿ, ಕಿಡಿಗೇಡಿಗಳ ವಿರುದ್ಧ ಪ್ರಕರಣ ದಾಖಲಿಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಪೊಲೀಸರ ಭರವಸೆ ಮೆರೆಗೆ ಗ್ರಾಮಸ್ಥರು ಪ್ರತಿಭಟನೆ ಕೈ ಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.

