ಬೀದರ್ | ಎ.26 ರಂದು ದಾವಣಗೆರೆಯಲ್ಲಿ ಸಂವಿಧಾನ ಯಾನ ಕಾರ್ಯಕ್ರಮ : ಓಂಪ್ರಕಾಶ್ ರೊಟ್ಟೆ

ಬೀದರ್ : ಎ.26 ರಂದು ದಾವಣಗೆರೆ ನಗರದ ಹೈಸ್ಕೂಲ್ ಫೀಲ್ಡ್ ಬಳಿ ಇರುವ ಬೀರ್ಲಿಂಗೇಶ್ವರ ದೇವಸ್ಥಾನದ ಅವರಣದಲ್ಲಿ ಎದ್ದೇಳು ಕರ್ನಾಟಕ ಸಂಘಟನೆ ಸೇರಿದಂತೆ 100 ಕ್ಕೂ ಅಧಿಕ ಸಂಘಟನೆಗಳ ಸಹಯೋಗದಲ್ಲಿ ಸಂವಿಧಾನ ಸಂರಕ್ಷರ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ಈ ಸಮಾವೇಶದಲ್ಲಿ ಜಿಲ್ಲೆಯ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಎದ್ದೇಳು ಕರ್ನಾಟಕ ಸಂಘಟನೆಯ ಜಿಲ್ಲಾ ಸಂಚಾಲಕ ಓಂಪ್ರಕಾಶ್ ರೊಟ್ಟೆ ತಿಳಿಸಿದರು.
ಇಂದು ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕರ್ನಾಟಕದಲ್ಲಿ 100ಕ್ಕೂ ಮೇಲ್ಪಟ್ಟ ಪ್ರಗತಿಪರ, ಜನಪರ ಕಾಳಜಿ ಹೊಂದಿರುವ ಸಂಘಟನೆಯ ಪ್ರಮುಖರು ಚಿಂತನ, ಮಂಥನ ಮಾಡಿಕೊಂಡು, ಸಂಘಟನೆಗಳ ಒಕ್ಕೂಟವೇ ಎದ್ದೇಳು ಕರ್ನಾಟಕ ಹೆಸರಿನಲ್ಲಿ ಸಂವಿಧಾನ ಸಂರಕ್ಷಣಾ ಪಡೆ ರಚಿಸಲಾಗಿದೆ ಎಂದರು.
ಸಂವಿಧಾನದ ಆಶಗಳು ಪ್ರಜಾಪ್ರಭುತ್ವದ ವ್ಯವಸ್ಥೆಯನ್ನೆ ಬುಡಮೇಲು ಮಾಡಲು ಹೊರಟಿರುವ ಪ್ರಮುಖವಾದ ಎರಡು ರಾಷ್ಟ್ರೀಯ ಪಕ್ಷಗಳು ಸಂವಿಧಾನ ಬದಲಾವಣೆ ಮತ್ತು ಸಂವಿಧಾನ ಉಳಿಸುತ್ತೇವೆ ಎಂದು ಹೇಳುತ್ತಾ, ಸರ್ಕಾರದ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಭ್ರಷ್ಟರ ರಕ್ಷಣೆ ಮಾಡುತ್ತಿವೆ. ಶ್ರೀಮಂತರ ಕಂಪನಿಗಳಿಗೆ ಸರಕಾರದಿಂದ ಧನ ಸಹಾಯ ನೀಡುತ್ತಿವೆ ಎಂದು ಆರೋಪಿಸಿದರು.
ಪ್ರಜಾಪ್ರಭುತ್ವ ಭಾರತದಲ್ಲಿ, ಭಾರತೀಯರಾದ ನಾವುಗಳು ನಮ್ಮನ್ನು ನಾವೇ ಅರ್ಪಿಸಿಕೊಂಡ ಸಂವಿಧಾನವನ್ನು ಸಂರಕ್ಷಣೆ ಮಾಡಿಕೊಳ್ಳುವ ಅನಿವಾರ್ಯತೆಯ ಪರಿಸ್ಥಿತಿಗೆ ತಂದು ನಿಲ್ಲಿಸಿದ್ದಾರೆ. ಮೂರು ಧರ್ಮಗಳ ಧರ್ಮಾಂಧರು ಸಂವಿಧಾನದ ವಿರುದ್ಧವಾಗಿ ನಡೆದುಕೊಂಡು ಈ ದೇಶದ ಮುಗ್ಧ ಯುವಕರನ್ನು ತಮ್ಮ ತಮ್ಮ ಧರ್ಮಾಂಧತೆಯ ವಿಷ ಬೀಜ ಬಿತ್ತಿ, ದೇಶದ ಸಂವಿಧಾನಕ್ಕೆ ಗಂಡಾಂತರ ತಂದು ದೇಶದಲ್ಲಿ ಅಜಾಗರೂಕತೆಯ ವಾತಾವರಣ ನಿರ್ಮಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಎದ್ದೇಳು ಕರ್ನಾಟಕ ಸಂಘಟನೆಯ ಜಿಲ್ಲಾ ಸಂಚಾಲಕ ಮಹಮ್ಮದ್ ನಿಝಾಮುದ್ದಿನ್, ಜಗದೀಶ್ವರ್ ಬಿರಾದಾರ್, ಸಂದೀಪ್ ಮುಕಿಂದೆ, ಮಾನವ ಬಂಧುತ್ವ ವೇದಿಕೆಯ ಜಿಲ್ಲಾಧ್ಯಕ್ಷ ಮಹೇಶ್ ಗೋರನಾಳಕರ್, ಪ್ರಮುಖರಾದ ಪ್ರಕಾಶ್ ರಾವಣ, ಕಾಳಿದಾಸ್ ಸೂರ್ಯವಂಶಿ, ಜೈವಂತ್ ಸಿಂಗಾರೆ, ಬಾಲಾಜಿ ಸೂರ್ಯವಂಶಿ ಹಾಗೂ ಸೈಯದ್ ಇಬ್ರಾಹಿಂ ಸೇರಿದಂತೆ ಇತರರು ಇದ್ದರು.