ಬೀದರ್ | ಸಿಂಧಕೇರಾ ಪಿಡಿಓ ಅವರನ್ನು ಅಮಾನತುಗೊಳಿಸಲು ಆಗ್ರಹಿಸಿ ಭಾರತೀಯ ದಲಿತ ಪ್ಯಾಂಥರ್ ಧರಣಿ

ಬೀದರ್ : ಹುಮನಾಬಾದ್ ತಾಲ್ಲೂಕಿನ ಸಿಂಧನಕೇರಾ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಗಂಧಾ ಅವರನ್ನು ಕೂಡಲೇ ಅಮಾನತುಗೊಳಿಸಿ, ಬಂಧಿಸಬೇಕು ಎಂದು ಭಾರತೀಯ ದಲಿತ ಪ್ಯಾಂಥರ್ ಒತ್ತಾಯಿಸಿದೆ.
ಇಂದು ಹುಮನಾಬಾದ ತಾಲೂಕು ಪಂಚಾಯತ್ ಎದುರುಗಡೆ ಸಾಂಕೇತಿಕ ಧರಣಿ ನಡೆಸಿ ತಹಶೀಲ್ದಾರ್ ಮೂಲಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ಪಿಡಿಓ ಸುಗಂಧಾ ಅವರ ಕಿರಕುಳದಿಂದ ಪಂಚಾಯತ್ಯಲ್ಲಿ ಡೇಟಾ ಎಂಟ್ರಿ ಆಪರೇಟರ್ ಸುಭಾಷ್ ಅವರ ಮೃತ್ಯು ಸಂಭವಿಸಿದೆ. ಇವರ ಮೇಲೆ ಪ್ರಕರಣ ದಾಖಲಾಗಿದ್ದರೂ ಕೂಡ ಇಲ್ಲಿವರೆಗೆ ಯಾವುದೇ ರೀತಿಯ ಸೂಕ್ತ ಕಾನೂನು ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಲಾಗಿದೆ.
ಸುಭಾಷ್ ಅವರನ್ನು ಎರಡು ವರ್ಷಗಳಿಂದ ಸಂಬಳ ನೀಡದೆ ಸತಾಯಿಸಲಾಗಿದೆ. ಅವರಿಗೆ ದಿನಾಲೂ ಕರೆ ಮಾಡಿ ಕಿರಕುಳ ಪಿಡಿಓ ಅವರು ಕಿರಕುಳ ನೀಡುತ್ತಿದ್ದರು. ಇವರ ಕಿರಕುಳ ತಾಳಲಾರದೆ ಸುಭಾಷ್ ಅವರು ಮೃತಪಟ್ಟಿದ್ದಾರೆ. ಹಾಗಾಗಿ ಪಿಡಿಓ ಸುಗಂಧಾ ಅವರನ್ನು ವಜಾಗೊಳಿಸಿ ಬಂಧಿಸಬೇಕು. ಮೃತಪಟ್ಟ ಪಂಚಾಯತ್ ಸಿಬ್ಬಂದಿ ಸುಭಾಷ್ ಅವರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಒದಗಿಸಬೇಕು. ಹಾಗೆಯೇ ಸುಭಾಷ್ ಅವರ ಕುಟುಂಬ ತುಂಬಾ ಸಂಕಷ್ಟದಲ್ಲಿದ್ದ ಕಾರಣ ಆ ಕುಟುಂಬದ ಸದಸ್ಯರೊಬ್ಬರನ್ನು ಪಂಚಾಯತಿಯಲ್ಲಿ ಅನುಕಂಪದ ಆಧಾರದ ಮೇಲೆ ಹುದ್ದೆ ನೀಡಬೇಕು ಎಂದು ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಭಾರತೀಯ ದಲಿತ ಪ್ಯಾಂಥರ್ ಜಿಲ್ಲಾ ಅಧ್ಯಕ್ಷ ವೈಜೀನಾಥ್ ಸಿಂಧೆ, ಜಿಲ್ಲಾ ಉಪಾಧ್ಯಕ್ಷ ಸಿದ್ದಾರ್ಥ್ ಡಾಂಗೆ, ತಾಲ್ಲೂಕು ಅಧ್ಯಕ್ಷ ಗಣಪತಿ ಅಷ್ಟೂರೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಶೀಲಕುಮಾರ್ ಭೋಲಾ, ಅಶೋಕ್ ಸಿಂಧೆ, ಅನಂತ್ ಮಾಳಗೆ ಹಾಗೂ ಸಿದ್ದಾರ್ಥ್ ಜಾವಿರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.