ಬೀದರ್ | ಹಿಂದೂ ರಾಷ್ಟ್ರಕ್ಕೆ ಸಂವಿಧಾನ ಸಿದ್ದವಾಗಿದೆ ಎಂಬ ಹೇಳಿಕೆ ನೀಡಿದ ಸ್ವಾಮೀಜಿಯನ್ನು ಗಡಿಪಾರು ಮಾಡಬೇಕು : ಪ್ರದೀಪ್ ನಾಟೇಕರ್

ಬೀದರ್ : ಹಿಂದೂ ರಾಷ್ಟ್ರಕ್ಕೆ ಸಂವಿಧಾನ ಸಿದ್ದವಾಗಿದೆ ಎಂಬ ಹೇಳಿಕೆ ನೀಡಿದ ಆನಂದ ಸ್ವರೂಪ ಶಾಂಭವಿ ಮಠದ ಪೀಠಾಧಿಪತಿಯನ್ನು ದೇಶದಿಂದ ಗಡಿಪಾರು ಮಾಡಬೇಕು ಎಂದು ಭಾರತೀಯ ವಿದ್ಯಾರ್ಥಿ ಸಂಘದ ಜಿಲ್ಲಾಧ್ಯಕ್ಷ ಪ್ರದೀಪ್ ನಾಟೇಕರ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆಯಲ್ಲಿ ಅವರು, ಭಾರತ ದೇಶ ಬಹುಸಾಂಸ್ಕೃತಿಕ ಹಾಗೂ ಭಾಷೆಗಳಿಂದ ಕೂಡಿದೆ. ಇಲ್ಲಿ ಹಲವಾರು ಜಾತಿ, ಧರ್ಮ, ವರ್ಗಗಳು ಇವೆ. ಪ್ರಸ್ತುತ ಸಂವಿಧಾನದಲ್ಲಿ ಎಲ್ಲರಿಗೂ ಸಮಾನವಾದ ಹಕ್ಕು ನೀಡಲಾಗಿದೆ. ಇಂತಹ ಸಂವಿಧಾನ ಬದಲಾಯಿಸಿ, ಹಿಂದೂ ಸಂವಿಧಾನ ತರುವುದಕ್ಕೆ ಅವರು ಸಿದ್ದರಾದರೆ ಅವರು ಮೊದಲು ಭೀಮಾಕೊರೆಗಾಂವ್ ಕದನ ನೆನಪಿಸಿಕೊಳ್ಳಬೇಕು. ಇನ್ನೊಂದು ಭೀಮಾ ಕೋರೆಗಾಂವ್ ಕದನಕ್ಕೆ ಅವಕಾಶ ಮಾಡಿ ಕೊಡಬಾರದು ಎಂದು ಎಚ್ಚರಿಸಿದ್ದಾರೆ.
ಮನುವಾದಿಗಳ ಮೂಲ ಉದ್ದೇಶವೇನೆಂದರೆ, ಮೇಲ್ಜಾತಿಯಲ್ಲಿ ಹುಟ್ಟಿ, ವೇದ ಉಪನಿಷತ್ ಗಳನ್ನು ಅಧ್ಯಯನ ಮಾಡಿದವರು ಮಾತ್ರ ಅಧಿಕಾರದಲ್ಲಿರಬೇಕು. ಇನ್ನುಳಿದ ಎಲ್ಲಾ ಜಾತಿ ಜನಾಂಗದವರಿಗೆ ಅಧಿಕಾರದಿಂದ ದೂರ ತಳ್ಳಬೇಕು ಎಂಬುದಾಗಿದೆ. ಆರ್ ಎರೆಸ್ಸೆಸ್ ನ 100ನೇ ವರ್ಷ ಸಂಭ್ರಮದ ಆಚರಣೆಯಲ್ಲಿ ಈ ದೇಶವನ್ನು ಹಿಂದೂ ರಾಷ್ಟ್ರವೆಂದು ಘೋಷಣೆ ಮಾಡಲು ಹೊರಟಿದ್ದಾರೆ. ಇದರಿಂದಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯ ಕಗ್ಗೊಲೆ ಮಾಡಲು ಹೊರಟಿದ್ದಾರೆ ಎಂದು ಕಿಡಿ ಕಾರಿದ್ದಾರೆ.
ಹಿಂದೂ ಸಂವಿಧಾನದ ಹೇಳಿಕೆ ನೀಡಿದ ಸ್ವಾಮೀಜಿಯ ವಿರುದ್ಧ ಕೂಡಲೇ ದೇಶ ವಿರೋಧಿ ಪ್ರಕರಣ ದಾಖಲಿಸಿ ಇವರನ್ನು ದೇಶದಿಂದ ಗಡಿಪಾರು ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.