ಜಾತಿ ನಿರ್ಮೂಲನೆ ಮಾಡಬೇಕಾದರೆ ಅಂತರ್ಜಾತಿ ವಿವಾಹಗಳು ಆಗಬೇಕಿದೆ : ವಿಜಯಲಕ್ಷ್ಮಿ ಪಾಟೀಲ್

ಬೀದರ್ : ಜಾತಿ ನಿರ್ಮೂಲನೆ ಮಾಡಬೇಕಾದರೆ ಇಂದಿನ ದಿನಗಳಲ್ಲಿ ಅಂತರ್ಜಾತಿ ವಿವಾಹಗಳು ಆಗಬೇಕಿದೆ. ಇದರಿಂದ ಮಾತ್ರ ಜಾತಿ ಹೋಗಲಾಡಿಸಲು ಸಾಧ್ಯವಿದೆ ಎಂದು ಜನವಾದಿ ಮಹಿಳಾ ಸಂಘದ ಜಿಲ್ಲಾಧ್ಯಕ್ಷೆ ವಿಜಯಲಕ್ಷ್ಮಿ ಪಾಟೀಲ್ ಗಡ್ಡೆ ಅವರು ಹೇಳಿದರು.
ಇಂದು ನಗರದ ರಂಗ ಮಂದಿರದಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದಿಂದ ನಡೆದ ಡಾ. ಅಂಬೇಡ್ಕರ್ ಅವರ ಜಯಂತಿಯ ನಿಮಿತ್ಯ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇವತ್ತಿಗೂ ಕೂಡ ಇಷ್ಟೆಲ್ಲ ಜ್ಞಾನಿಗಳಿದ್ದರೂ, ಓದು, ಬರಹ ಕಲಿತು ಸಂವಿಧಾನ ಬಲ್ಲಿದವರಾಗಿದ್ದರು ಕೂಡ ಅಂತರ್ಜಾತಿ ವಿವಾಹವಾಗುವವರನ್ನು ಹತ್ಯೆ ಮಾಡುತ್ತಿದ್ದಾರೆ. ನಾವು ಇದಕ್ಕೆ ಮರ್ಯಾದೆ ಕೇಡು ಎಂದು ಕರೆಯುತ್ತಿದ್ದೇವೆ ಎಂದು ಕಳವಳ ವ್ಯಕ್ತಪಡಿಸಿದರು.
ಮಹಿಳೆಯರನ್ನ ಅಗೌರವದಿಂದ ನೋಡಿ, ತುಚ್ಛಿಕರಣದಿಂದ ಮಾತಾಡುವವರಿಗೆ ಇವತ್ತು ಬಾಬಾಸಾಹೇಬರ ಹೆಸರು ಕೂಡ ತೆಗೆದುಕೊಳ್ಳುವ ಹಕ್ಕು ಕೂಡ ಇಲ್ಲ. ಭಾರತದ ಮಹಿಳೆಯರಿಗೆ ಸಂವಿಧಾನದ ಹಕ್ಕುಗಳು ಸಿಗುವಂತಾಗಬೇಕು ಎಂದು ತಿಳಿಸಿದರು.
ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರು ಮಾತನಾಡಿ, ಅಂಬೇಡ್ಕರ್ ಅವರು ಸಂವಿಧಾನದಲ್ಲಿ 340 ನೇ ವಿಧಿ ನೀಡಿದ್ದಾರೆ. ಅದು ಇನ್ನು ಪರಿಣಾಮಕಾರಿಯಾಗಿ ಜಾರಿಗೆ ಬರಬೇಕಿದೆ. ಈ ದೇಶದ ಪ್ರಜಾಪ್ರಭುತ್ವ ಯಾವಾಗ ಯಶಸ್ವಿಯಾಗುತ್ತದೆ ಎಂದರೆ ದೇಶದಲ್ಲಿರುವ 140 ಕೋಟಿ ಜನ ಬಡತನ ರೇಖೆಗಿಂತ ಮೇಲೆ ಬಂದಾಗ ಮಾತ್ರ ಯಶಸ್ವಿಯಾಗುತ್ತದೆ ಎಂದರು.
ನಮ್ಮ ಜಿಲ್ಲೆ ಎಲ್ಲ ರೀತಿಯಿಂದ ಮುಂದುವರೆದು, ಶೋಷಣ ಮುಕ್ತ, ಜಾತಿ ರಹಿತ ಜಿಲ್ಲೆಯಾಗಬೇಕು ಎನ್ನುವ ದೂರದೃಷ್ಟಿ ಇಟ್ಟುಕೊಂಡು ನಾವು ಅನೇಕ ರೀತಿಯ ಅಭಿವೃದ್ಧಿ ಕೆಲಸಗಳು ಮಾಡುತ್ತಿದ್ದೇವೆ ಎಂದು ತಿಳಿಸಿದ ಅವರು, ಇಲ್ಲಿರುವ ಹಿಂದುಳಿದ ವರ್ಗಗಳ ಒಕ್ಕೂಟದಲ್ಲಿ ಬರುವ ಹತ್ತು ಹದಿನೈದು ಸಣ್ಣ ಸಣ್ಣ ಎಲ್ಲ ಸಮುದಾಯಗಳಿಗೆ ತಮ್ಮದೆ ಆದಂತಹ ಭವನ ನಿರ್ಮಾಣ ಮಾಡುವುದಕ್ಕೆ ಸರಕಾರದಿಂದ ನಿವೇಶನ ಕೊಡಿಸುತ್ತೇನೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ರಾಜಪ್ಪ ಮುತ್ತ್ಯಾ ಕರಕನಳ್ಳಿ ಅವರು ಸಾನಿಧ್ಯ ವಹಿಸಿದ್ದರು. ಪೌರಾಡಳಿತ ಮತ್ತು ಹಜ್ ಸಚಿವ ರಹಿಮ್ ಖಾನ್, ಬುಡಾದ ಅಧ್ಯಕ್ಷ ಬಸವರಾಜ್ ಜಾಬಶೆಟ್ಟಿ ನಗರ ಸಭೆ ಅಧ್ಯಕ್ಷ ಮಹಮ್ಮದ್ ಗೌಸ್, ಹಿಂದುಳಿದ ವರ್ಗಗಳ ಒಕ್ಕೂಟದ ಉಪಾಧ್ಯಕ್ಷ ತಾನಾಜಿ ಸಗರ್, ಅಮೃತರಾವ್ ಚಿಮಕೋಡೆ, ಅಬ್ದುಲ್ ಮನ್ನಾನ್ ಶೇಠ್, ಶಶಿಕಲಾ ಮಾಳಗೆ, ಡಾ.ರಾಜಶೇಖರ್ ಸೇಡಂಕರ್, ಬಾಬುರಾವ್ ಕುಂಬಾರ್, ಮಹಾಂತೇಶ್ ವಕೀಲ್, ಬಾಬುರಾವ್ ಪಾಸ್ವನ್, ರಮೇಶ್ ಡಾಕುಳಗಿ, ವಿದ್ಯಾವತಿ ತುಗಾಂವೆ, ಅನಿಲಕುಮಾರ್ ಬೆಲ್ದಾರ್, ಆನಂದ್ ದೇವಪ್ಪ ಹಾಗೂ ಪ್ರದೀಪ್ ನಾಟೆಕರ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.

