ಬೀದರ್: ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಶಾಸಕ ಪ್ರಭು ಚೌವ್ಹಾಣ್

ಬೀದರ್: ಸುಮಾರು 24 ಕೋಟಿ ರೂ. ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಇಂದು ಔರಾದ್ ಶಾಸಕ ಪ್ರಭು ಚೌವ್ಹಾಣ್ ಅವರು ಚಾಲನೆ ನೀಡಿದರು.
ಸಿ ಆರ್ ಎಫ್ ಯೋಜನೆಯಡಿ ಠಾಣಾ ಕುಶನೂರ್ ಗ್ರಾಮದಿಂದ ಸಂಗಮ್ ವರೆಗೆ ರಸ್ತೆ ಸುಧಾರಣೆ, ಕೆ ಕೆ ಆರ್ ಡಿ ಬಿ ಯೋಜನೆಯಡಿ ಚಿಂತಾಕಿ, ಬೆಳ್ದಲ್, ಯನಗುಂದಾ, ಖೇರ್ಡಾ ಗ್ರಾಮಗಳಲ್ಲಿ ಸಿಸಿ ರಸ್ತೆ ನಿರ್ಮಾಣ, ಡೋಣಗಾಂವ್ (ಎಂಪಿ) ಗ್ರಾಮದಲ್ಲಿ ರಸ್ತೆ ನಿರ್ಮಾಣ, ರಾಂಪುರ್-ಕೋಟಗ್ಯಾಳ್ ರಸ್ತೆಯಿಂದ ಕಮಲನಗರ್ ವರೆಗೆ ರಸ್ತೆ, ಲಾಧಾ ಗ್ರಾಮದಿಂದ ಲಾಧಾ ಕ್ರಾಸ್ ವರೆಗೆ ರಸ್ತೆ ನಿರ್ಮಾಣ, ಜಮಲಪುರ್ ಗ್ರಾಮದ ರಸ್ತೆ, ಏಕಂಬಾ ಗ್ರಾಮದಿಂದ ಔರಾದ್ ರಸ್ತೆ, ರೈಪಳ್ಳಿ ಯಿಂದ ತೆಲಂಗಾಣಾ ಬಾರ್ಡರ್ ವರೆಗೆ ರಸ್ತೆ, ಚಿರ್ಕಿ ತಾಂಡಾದಿಂದ ಚಿಮ್ಮೆಗಾಂವ್ ವರೆಗೆ ರಸ್ತೆ, ಚಿಕ್ಲಿ ಜೆ ಗ್ರಾಮದಿಂದ ಮಾಣಿಕ್ ತಾಂಡಾ ವರೆಗೆ ರಸ್ತೆ, ವಲ್ಲೇಪುರ್ ಗ್ರಾಮದಿಂದ ವಲ್ಲೇಪುರ್ ಕ್ರಾಸ್ ವರೆಗೆ ರಸ್ತೆ, ತೆಗಾಂಪೂರ್ ಗ್ರಾಮದ ಎಂ ಐ ಟ್ಯಾಂಕ್ ಹತ್ತಿರ ಸಿ.ಡಿ ನಿರ್ಮಾಣ ಹೀಗೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅವರು ಶಂಕುಸ್ಥಾಪನೆ ಮಾಡಿದರು.
ಕಾಮಗಾರಿ ವೆಚ್ಚ ಅಂದಾಜು ಪಟ್ಟಿಯಲ್ಲಿ ಇರುವಂತೆ ಆಗಬೇಕು. ಗುಣಮಟ್ಟದಿಂದ ಮತ್ತು ನಿಗದಿತ ಅವಧಿಯೊಳಗೆ ಕಾಮಗಾಗಿ ಮುಗಿಸಬೇಕು. ಡಾಂಬರೀಕರಣ, ಕ್ಯೂರಿಂಗ್ ಸರಿಯಾಗಿ ಆಗಬೇಕು. ರಸ್ತೆಯ ಬಗ್ಗೆ ಜನರಿಂದ ಯಾವುದೇ ರೀತಿಯ ದೂರುಗಳು ಬಾರದ ಹಾಗೆ ಅಚ್ಚುಕಟ್ಟಾಗಿ ಕೆಲಸ ನಿರ್ವಹಿಸಬೇಕು. ಇಲ್ಲವಾದಲ್ಲಿ ಯಾವುದೇ ಕಾರಣಕ್ಕೂ ನಾನು ಸುಮ್ಮನೆ ಬಿಡುವುದಿಲ್ಲ ಎಂದು ಅಧಿಕಾರಿಗಳಿಗೆ ಎಚ್ಚರಿಸಿದರು.
ಸಾರ್ವಜನಿಕರು ಕೂಡ ಜವಾಬ್ದಾರಿಯುತವಾಗಿ ಪ್ರದರ್ಶಿಸಬೇಕು. ತಮ್ಮ ಊರಿನಲ್ಲಿ ನಡೆಯುತ್ತಿರುವ ಕಾಮಗಾರಿಗಳ ಮೇಲೆ ನಿಗಾ ಇಡಬೇಕು. ಎಲ್ಲಿಯಾದರೂ ಲೋಪಗಳು ಕಾಣಿಸಿದಲ್ಲಿ ತಕ್ಷಣ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಕೆಲಸ ಸರಿಪಡಿಸಲು ಮುಂದಾಗಬೇಕು. ಯೋಜನೆ ಸರಿಯಾಗಿ ಆಗುವಂತೆ ನೋಡಿಕೊಳ್ಳಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪಂಚಾಯತ್ ರಾಜ್ ಇಲಾಖೆಯ ವೆಂಕಟ್ ಶಿಂಧೆ, ಮುಖಂಡರಾದ ರಾಮಶೆಟ್ಟಿ ಪನ್ನಾಳೆ, ಧೊಂಡಿಬಾ ನರೋಟೆ, ಖಂಡೋಬಾ ಕಂಗಟೆ, ಅನೀಲ್ ಬಿರಾದಾರ್, ಶಿವು, ಉದಯ್ ಸೋಲಾಪುರೆ, ಬಂಟಿ ರಾಂಪುರೆ, ರಾಜಕುಮಾರ್ ಅಲಬಿದೆ, ಪ್ರದೀಪ್ ಪವಾರ್ ಹಾಗೂ ಲೋಕೋಪಯೋಗಿ ಇಲಾಖೆಯ ಅಧಿಕಾರಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿ ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.

