ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೆಶಕಿಯನ್ನು ಸೇವೆಯಿಂದ ಅಮಾನತುಗೊಳಿಸುವಂತೆ ಮನವಿ

Update: 2025-04-26 21:59 IST
ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೆಶಕಿಯನ್ನು ಸೇವೆಯಿಂದ ಅಮಾನತುಗೊಳಿಸುವಂತೆ ಮನವಿ
  • whatsapp icon

ಬೀದರ್ : ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೆಶಕಿ ಹೆಚ್. ಎಸ್. ಸಿಂಧು ಅವರನ್ನು ಅಮಾನತುಗೊಳಿಸುವಂತೆ ಒತ್ತಾಯಿಸಿ ಇಂದು ವಿವಿಧ ದಲಿತ ಸಂಘಟನೆಗಳ ನಾಯಕರು ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರನ್ನು ಮನವಿ ಪತ್ರ ಸಲ್ಲಿಸಿದರು.

ಈ ಹಿಂದೆ ಇಲಾಖೆಯಿಂದ ನಡೆದ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಬಿಡುಗಡೆಯಾದ ಅನುದಾನವನ್ನು ದುರ್ಬಳಕೆ ಮಾಡಿ ಭ್ರಷ್ಟಚಾರ ಮಾಡಿದ್ದಾರೆ. 2024-25 ನೇ ಸಾಲಿನ ಜಿಲ್ಲೆಯ ವಿವಿಧ ಲೆಕ್ಕ ಶಿರ್ಷಿಕೆ ಅಡಿಯಲ್ಲಿ ಬಿಡುಗಡೆಯಾದ ಅನುದಾನವನ್ನು ಬಳಕೆ ಮಾಡದೆ ಹಾಗೂ ಮೇಲ್ವಿಚಾರಣೆ ಮಾಡದೆ ಇಲಾಖೆಯ ನಿಯಮಗಳನ್ನು ಉಲ್ಲಂಘನೆ ಮಾಡಿರುತ್ತಾರೆ. ಇದರಿಂದ ಜನರಿಗೆ ಸಿಗುವ ಸೌಲಭ್ಯಗಳಿಂದ ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಜಿಲ್ಲೆಗೆ ವರ್ಗಾವಣೆಯಾಗಿ ಬಂದಾಗಿನಿಂದ ಕಚೇರಿಯಲ್ಲಿ ತನ್ನ ಸ್ವಜಾತಿಗೆ ಸೇರಿದ ಅಧಿಕಾರಿಗಳನ್ನು ಎತ್ತಿಕಟ್ಟುವ ಮೂಲಕ ಇಲಾಖೆಯ ಸಿಬ್ಬಂದಿಗಳ ಮಧ್ಯ ಜಗಳ ಹಚ್ಚುತ್ತಿದ್ದಾರೆ. ಇದರಿಂದಾಗಿ ಸಾರ್ವಜನಿಕರ ಕೆಲಸಗಳಿಗೆ ತೊಂದರೆ ಉಂಟು ಮಾಡುತ್ತಿದ್ದಾರೆ ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.

ಇಲಾಖೆ ವತಿಯಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಗಳ ಕಾಲೋನಿಗಳಿಗೆ ವಿವಿಧ ಮೂಲ ಸೌಲಭ್ಯಗಳು ದೊರಕಿಸಲು ಪ್ರಧಾನ ಮಂತ್ರಿ ಆದರ್ಶ ಗ್ರಾಮ ಯೋಜನೆಯ ಕಾಮಗಾರಿ ಕುಂಠಿತವಾಗಿದೆ. ಇವರು ವಸತಿ ನಿಲಯದ ಅನುದಾನ ಹಾಗೂ ಇನ್ನಿತರ ಅನುದಾನಗಳನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.

ಹೆಚ್.ಎಸ್. ಸಿಂಧೂ ಅವರ ವಿರುದ್ದ ಸೂಕ್ತ ಕಾನೂನಿನ ಕ್ರಮ ಕೈಗೊಂಡು ಅವರು ದುರ್ಬಳಕೆ ಮಾಡಿಕೊಂಡು ಹಣ ಇಲಾಖೆಗೆ ಭರಿಸಿಕೊಳ್ಳಬೇಕು. ಹಾಗೆಯೇ ಅವರನ್ನು ಹುದ್ದೆಯಿಂದ ಅಮಾನತುಗೊಳಿಸಬೇಕು ಎಂದು ಆಗ್ರಹಿಸಲಾಗಿದೆ.

ಈ ಸಂದರ್ಭದಲ್ಲಿ ಸಂವಿಧಾನ ಸಂರಕ್ಷಣಾ ಸಮಿತಿಯ ಮಹಾ ಪ್ರಧಾನ ಕಾರ್ಯದರ್ಶಿ ಅನೀಲಕುಮಾರ್ ಬೇಲ್ದಾರ್, ಅಂಬೇಡ್ಕರ ವಾದ ರಾಜ್ಯ ಸಂಘಟನಾ ಸಂಚಾಲಕ ರಮೇಶ್ ಡಾಕುಳಗಿ, ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಬಾಬು ಪಾಸ್ವಾನ್, ಶಿವಕುಮಾರ್ ನೀಲಿಕಟ್ಟಿ, ಅಶೋಕ್ ಮಾಳಗೆ, ಗೌತಮ್ ಭೋಸ್ಲೆ, ರಮೇಶ್ ಪಾಸ್ವಾನ್, ಸಂದೀಪ ಕಾಂಟೆ, ಶ್ರೀಪತರಾವ್ ದೀನೆ, ಅಂಬಾದಾಸ್ ಗಾಯಕವಾಡ್, ಪ್ರದೀಪ್ ನಾಟೇಕರ್, ಸಾಯಿ ಸಿಂಧೆ, ಅವಿನಾಶ್ ದೀನೆ, ಶಾಲಿವಾನ್ ಬಡಿಗೇರ್, ರಘುನಾಥ್ ಗಾಯಕವಾಡ್, ಬಾಬು ಮಿಠಾರೆ, ರಮೇಶ್ ಮಂದಕನಳ್ಳಿ, ನರಸಿಂಗ್ ಸಾಮ್ರಾಟ, ಸಂಜುಕುಮಾರ್ ಸಾಗರ್ ಹಾಗೂ ಸುನೀಲ್ ಸಂಗಮ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News