ಚಿಕ್ಕಮಗಳೂರು | ಸರಕಾರಿ ಸಾರಿಗೆ ಬಸ್ಸಿನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 220 ಗ್ರಾಂ. ಚಿನ್ನಾಭರಣ ಜಪ್ತಿ

Update: 2024-03-21 18:01 IST
ಚಿಕ್ಕಮಗಳೂರು | ಸರಕಾರಿ ಸಾರಿಗೆ ಬಸ್ಸಿನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 220 ಗ್ರಾಂ. ಚಿನ್ನಾಭರಣ ಜಪ್ತಿ
  • whatsapp icon

ಚಿಕ್ಕಮಗಳೂರು: ಸರಕಾರಿ ಸಾರಿಗೆ ಬಸ್ಸಿನಲ್ಲಿ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ ಸುಮಾರು 220 ಗ್ರಾಂ. ಚಿನ್ನಾಭರಣಗಳನ್ನು ಗುರುವಾರ ತಾಲೂಕಿನ ಮಾಗಡಿ ಚೆಕ್‍ಪೋಸ್ಟ್ ನಲ್ಲಿ‌ ಚುನಾವಣಾಧಿಕಾರಿಗಳು ಜಪ್ತಿ ಮಾಡಿದ್ದಾರೆ.

ಬೆಂಗಳೂರಿನಿಂದ-ಚಿಕ್ಕಮಗಳೂರಿಗೆ ದಾಖಲೆ ಇಲ್ಲದೇ ಸಾಗಿಸುತ್ತಿದ್ದ 220 ಗ್ರಾಂ. ತೂಕದ ಚಿನ್ನದ ತಾಳಿ, ಮಾಲೆ, ಬ್ರೇಸ್ಲೆಟ್, ಬಳೆ, ಸರ, ಉಂಗುರಗಳನ್ನು ಪೊಲೀಸರು ಹಾಗೂ ಚುನಾವಣಾಧಿಕಾರಿಗಳ ತಂಡ ವಶಕ್ಕೆ ಪಡೆದುಕೊಂಡಿದೆ. ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ಬರುತ್ತಿದ್ದ ವ್ಯಕ್ತಿಯೊಬ್ಬರು ಈ ಚಿನ್ನಾಭರಣಗಳನ್ನು ಸಾಗಿಸುತ್ತಿದ್ದು, ಆಭರಣಗಳಿಗೆ ಸಂಬಂಧಿಸಿದ ಯಾವುದೇ ದಾಖಲೆ ನೀಡದ ಹಿನ್ನೆಲೆಯಲ್ಲಿ ಆಭರಣಗಳನ್ನು ಸೀಜ್ ಮಾಡಲಾಗಿದೆ. ಈ ಚಿನ್ನಾಭರಣಗಳ ಒಟ್ಟು ಮೌಲ್ಯ 13.20 ಲಕ್ಷ ಎಂದು ಎಸ್‍ಎಸ್‍ಟಿ ಅಧಿಕಾರಿಗಳ ತಂಡ ಅಂದಾಜಿಸಿದೆ. ಘಟನೆ ಸಂಬಂಧ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆಭರಣಗಳ ಮೂಲದ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

ಇನ್ನು ಬುಧವಾರ ರಾತ್ರಿ ಮೂಡಿಗೆರೆ ತಾಲೂಕಿನ ಗೋಣಿಬೀಡು ಪೊಲೀಸ್ ಠಾಣಾ ವ್ಯಾಪ್ತಿಯ ಕಸ್ಕೆಬೈಲ್ ಚೆಕ್‍ಪೋಸ್ಟ್ ನಲ್ಲಿ ವಾಹನದಲ್ಲಿ ದಾಖಲೆ ಇಲ್ಲದೇ ಸಾಗಿಸುತ್ತಿದ್ದ 3,62,750 ರೂ. ನಗದನ್ನು ಚುನಾವಣಾಧಿಕಾರಿಗಳು ಜಪ್ತಿ ಮಾಡಿದ್ದರೆ, ಗುರುವಾರ ಬೆಳಗ್ಗೆ ಕೊಟ್ಟಿಗೆಹಾರ ಚೆಕ್‍ಪೋಸ್ಟ್ ನಲ್ಲಿ 1ಲಕ್ಷ ರೂ. ನಗದು ಹಾಗೂ ಅಜ್ಜಂಪುರ ತಾಲೂಕಿನ ಗಡಿ ಅಹ್ಮದಾನಗರದ ಚೆಕ್‍ಪೋಸ್ಟ್ ನಲ್ಲಿ 1.30ಲಕ್ಷ ರೂ. ನಗದನ್ನು ಚುನಾವಣಾಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News