ಚಿಕ್ಕಮಗಳೂರು | ಕುಡಿದ ಮತ್ತಿನಲ್ಲಿ ಸಹೋದರನ ಅತ್ತೆಯನ್ನು ಸುತ್ತಿಗೆಯಿಂದ ಹೊಡೆದು ಹತ್ಯೆ ಮಾಡಿದ ಆರೋಪಿ

ಆರೋಪಿ ಶಶಿಧರ ಪೂಜಾರಿ
ಚಿಕ್ಕಮಗಳೂರು : ಕುಡಿದು ಗಲಾಟೆ ಮಾಡುತ್ತಿದ್ದವನಿಗೆ ಬುದ್ಧಿವಾದ ಹೇಳಿದ ಕ್ಷುಲ್ಲಕ ಕಾರಣಕ್ಕೆ ಸಹೋದರನ ಅತ್ತೆಯನ್ನೇ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಭಾರತೀಬೈಲ್ ಗ್ರಾಮದಲ್ಲಿ ಸೋಮವಾರ ನಡೆದಿದೆ.
ಶಶಿಧರ ಪೂಜಾರಿ ಎಂಬಾತ ಸಹೋದರನ ಪತ್ನಿಯ ತಾಯಿ ಯಮುನಾರನ್ನು ಹತ್ಯೆ ಮಾಡಿದ ಆರೋಪಿಯಾಗಿದ್ದು, ಘಟನೆ ಬಳಿಕ ಆರೋಪಿ ತಲೆಮರೆಸಿಕೊಂಡು ಪರಾರಿಯಾಗಿದ್ದಾನೆ. ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯ ಪತ್ತೆಗಾಗಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಯಮುನಾ ಅವರ ಮಗಳನ್ನು ಆರೋಪಿ ಶಶಿಧರನ ಸಹೋದರನಿಗೆ ಕೊಟ್ಟು ವಿವಾಹ ಮಾಡಿದ್ದು, ಇತ್ತೀಚೆಗೆ ಯಮುನಾ ಅವರು ಭಾರತೀಬೈಲ್ ಗ್ರಾಮದಲ್ಲಿರುವ ತನ್ನ ಮಗಳ ಮನೆಗೆ ಬಂದಿದ್ದರು. ಕೆಲ ದಿನಗಳಿಂದ ಮಗಳ ಮನೆಯಲ್ಲಿದ್ದುಕೊಂಡು ಕೂಲಿ ಕೆಲಸಕ್ಕೂ ಹೋಗುತ್ತಿದ್ದರು. ಸೋಮವಾರ ಮಧ್ಯಾಹ್ನದ ಬಳಿಕ ಕೆಲಸಕ್ಕೆ ಹೋಗಿದ್ದ ಯಮುನಾ ಮನೆಗೆ ಬಂದಾಗ ಕುಡಿದ ಮತ್ತಿನಲ್ಲಿ ಶಶಿಧರ ಜಗಳವಾಡುತ್ತಿದ್ದ. ಈ ವೇಳೆ ಯಮುನಾ ಶಶಿಧರನಿಗೆ ಬುದ್ಧಿವಾದ ಹೇಳಿದ್ದಾರೆ. ಇಷ್ಟಕ್ಕೆ ಕುಪಿತನಾದ ಶಶಿಧರ ಮನೆಯಲ್ಲಿದ್ದ ಸುತ್ತಿಗೆಯಿಂದ ಯಮುನಾರ ತಲೆಗೆ ಹೊಡೆದಿದ್ದಾನೆ ಎನ್ನಲಾಗಿದೆ.
ಹಲ್ಲೆಯಿಂದ ತಲೆಗೆ ತೀವ್ರವಾಗಿ ಗಾಯಗೊಂಡಿದ್ದ ಯಮುನಾ ಕುಸಿದು ಬಿದ್ದಿದ್ದಾರೆ. ಕೂಡಲೇ ಆಕೆಯನ್ನು ಮೂಡಿಗೆರೆ ಆಸ್ಪತ್ರೆಗೆ ಕರೆ ತಂದಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಯಮುನಾ ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ.