ಉ.ಕ. ಕರಾವಳಿಯ ಜನವಸತಿ ಪ್ರದೇಶದಲ್ಲಿ ಉಪ್ಪು ನೀರಿನ ಸಮಸ್ಯೆ

Update: 2023-11-12 06:38 GMT

ಕಾರವಾರ, ನ.11: ಜಿಲ್ಲೆಯ ಕರಾವಳಿಯ ವಿವಿಧ ತಾಲೂಕಿನಲ್ಲಿ ಉಪ್ಪುನೀರಿನಿಂದ ಜನರಿಗೆ ಸಮಸ್ಯೆಯಾಗುತ್ತಿದ್ದು ಜನವಸತಿ ಪ್ರದೇಶಕ್ಕೆ ಉಪ್ಪುನೀರು ನುಗ್ಗುವುದರಿಂದ ಕುಡಿಯುವ ನೀರಿಗಾಗಿ ತೊಂದರೆ ಅನುಭವಿಸುತ್ತಿದ್ದಾರೆ. ಕಾಳಿ ನದಿ ಹಿನ್ನೀರಿನ ಪ್ರದೇಶದ ಹಣಕೋಣ ಗ್ರಾಪಂ ವ್ಯಾಪ್ತಿಯ ಬಾವಿಗಳ ನೀರು ಈಗಾಗಲೇ ಉಪ್ಪಾಗಿದೆ.

ಕಾರವಾರದಲ್ಲಿ ಕಾಳಿ ಸಂಗಮ ಪ್ರದೇಶದಿಂದ ನದಿಯಲ್ಲಿ ಸುಮಾರು 25 ಕಿಮೀವರೆಗೂ ಸಮುದ್ರದ ಉಬ್ಬರದ ಸಮಯದಲ್ಲಿ ಉಪ್ಪು ನೀರು ನುಗ್ಗುತ್ತದೆ. ನದಿ ಹರಿವಿನ ವ್ಯಾಪ್ತಿ ಮಾತ್ರವಲ್ಲದೆ, ಹಿನ್ನೀರಿನ ಘಜನಿ ಪ್ರದೇಶಗಳು, ಸಣ್ಣ ತೊರೆಗಳ ಜಲವೂ ಉಪ್ಪಾಗಿದೆ. ಕಾರವಾರ ತಾಲೂಕಿನ ಚಿತ್ತಾಕುಲಾ, ಅಸ್ನೋಟಿ, ಹಣಕೋಣ, ಘಾಡಸಾಯಿ, ಕಡವಾಡ, ಕಿನ್ನರ, ವೈಲವಾಡ ಮುಂತಾದ ಗ್ರಾಪಂ ವ್ಯಾಪ್ತಿಯ ಕೆಲವು ಜಮೀನು ಕೃಷಿ ಮಾಡಲು ಆಗದಿರುವುದು, ಬಾವಿಗಳ ನೀರು ಕುಡಿಯಲು ಆಗದ ಸಮಸ್ಯೆ ಅನೇಕ ವರ್ಷಗಳಿಂದ ಇದ್ದು, ಬಗೆಹರಿಯದ ಸಮಸ್ಯೆಯಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಕಾಳಿ ಎಡದಂಡೆಯ ಗ್ರಾಮಗಳಿಗೆ ನದಿಯಿಂದ ನೀರೆತ್ತಿ ಕುಡಿಯಲು ಪೂರೈಸುವ ಕೆರವಡಿ ಬಹು ಗ್ರಾಮ ಯೋಜನೆಯಲ್ಲಿ ಕಳೆದ ವರ್ಷ ಬೇಸಿಗೆಯಲ್ಲಿ ಉಪ್ಪು ನೀರು ಕಾಣಿಸಿಕೊಂಡಿತ್ತು. ಕಾಳಿ ಬಲದಂಡೆಯ ಗ್ರಾಮಗಳಿಗೆ ನೀರು ಪೂರೈಸುವ ಗೋಟೆಗಾಳಿ ಬಹುಗ್ರಾಮ ಯೋಜನೆಗೂ ಎರಡು ವರ್ಷದ ಹಿಂದೆ ಇದೇ ಸಮಸ್ಯೆಯಾಗಿತ್ತು. ಈ ಬಾರಿ ಅವಧಿಗೂ ಮುಂಚೆ ಉಪ್ಪು ನೀರಿನ ಸಮಸ್ಯೆ ಎದುರಾಗುವ ಆತಂಕವಿದೆ ಎನ್ನುತ್ತಾರೆ ಅಧಿಕಾರಿಗಳು.

ಹಣಕೋಣ ಗ್ರಾಪಂ ವ್ಯಾಪ್ತಿಯ ಅಂಬಿವಾಡ, ಬಾಬುನಾಯ್ಕವಾಡ, ಪಾಟ್ಲೋವಾಡ, ಮುಂತಾದೆಡೆ ಈಗಾಗಲೇ ಕುಡಿಯುವ ನೀರಿನ ಸಮಸ್ಯೆ ಶುರುವಾಗಿದೆ. ಅಂಬಿವಾಡದ 7 ಬಾವಿಗಳು ಈಗಾಗಲೇ ಉಪ್ಪುನೀರಿನಿಂದ ಹಾಳಾಗಿವೆ. ಇಲ್ಲಿನ ಮನೆಗಳಿಗೆ ಜಲಜೀವನ್ ಮಿಷನ್ ಯೋಜನೆ ತಲುಪಿಲ್ಲ. ಬೇರೆ ಕುಡಿಯುವ ನೀರಿನ ಯೋಜನೆಯೂ ಇಲ್ಲ. ಇದರಿಂದ ಗ್ರಾಮಸ್ಥರು ನೀರಿಗಾಗಿ ದೂರದವರೆಗೆ ಕೊಡ ಹೊತ್ತು ಓಡಾಡುವ ಪರಿಸ್ಥಿತಿ ಸೃಷ್ಟಿಯಾಗಿದೆ. ಪಕ್ಕದಲ್ಲಿರುವ ಖಾರ್ಲ್ಯಾಂಡ್ ಒಡ್ಡು ಸಹ ಸಮರ್ಪಕವಾಗಿಲ್ಲ. ಗೇಟ್ ಹಾಕಿ ದುರಸ್ತಿ ಮಾಡುವಂತೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ನೀರು ಪೂರೈಕೆಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಆಡಳಿತ ಸ್ಪಂದಿಸುತ್ತಿಲ್ಲ ಎಂದು ಸ್ಥಳೀಯ ಜಗದೀಶ ಗಂಗೇಪುತ್ರ ಆರೋಪಿಸಿದ್ದಾರೆ.

ಮಳೆಗಾಲದಲ್ಲಿ ಬೆಟ್ಟದ ಮೇಲಿನಿಂದ ಬರುವ ಸಿಹಿ ನೀರಿನ ಹರಿವು ಜೋರಾಗಿರುವುದರಿಂದ ಈ ಉಪ್ಪು ನೀರಿನ ಪ್ರಭಾವ ಕಡಿಮೆಯಾಗುತ್ತಿತ್ತು. ಇದರಿಂದ ಜೂನ್‌ನಿಂದ ಸುಮಾರು ಡಿಸೆಂಬರ್ ಅಥವಾ ಕೆಲವರ್ಷ ಜನವರಿವರೆಗೂ ಜನರಿಗೆ ಉಪ್ಪುನೀರಿನ ಸಮಸ್ಯೆ ಕಡಿಮೆಯಾಗುತ್ತಿತ್ತು. ಬಾವಿಗಳಲ್ಲಿ ಸಿಹಿ ನೀರು ಸಿಗುತ್ತಿತ್ತು. ಆದರೆ, ಈ ಬಾರಿ ಮಳೆ ಇಲ್ಲ. ಬೆಟ್ಟದ ಮೇಲಿನಿಂದ ಹರಿಯುವ ತೊರೆಗಳ ಅಬ್ಬರವಿಲ್ಲ. ಇದರಿಂದ ಆಗಸ್ಟ್ ನಿಂದಲೇ ಬಾವಿ ನೀರು ಉಪ್ಪಾಗಿದ್ದು ಕುಡಿಯಲು ಉಪಯೋಗಕ್ಕೆ ಬಾರದಂತಾಗಿದೆ.

ಗಂಗಾವಳಿಯಲ್ಲೂ ನೀರಿನ ಪ್ರಮಾಣ ಇಳಿಕೆಯಾಗಿದ್ದು, ಕಾರವಾರ ಹಾಗೂ ಅಂಕೋಲಾ ಪಟ್ಟಣ ಹಾಗೂ ಹಲವು ಗ್ರಾಮಗಳಿಗೆ ಅವಧಿಗಿಂತ ಪೂರ್ವದಲ್ಲಿ ನೀರಿನ ಸಮಸ್ಯೆ ಎದುರಾಗುವ ಮುನ್ಸೂಚನೆ ದೊರೆತಿದೆ. ಕಾರವಾರ, ಅಂಕೋಲಾ ಪಟ್ಟಣ ಹಾಗೂ 13 ಗ್ರಾಪಂಗಳಿಗೆ ಗಂಗಾವಳಿ ನದಿಯಿಂದ ನೀರು ಪೂರೈಸಲಾಗುತ್ತದೆ. 1975 ರಿಂದ ಅಂಕೋಲಾದ ಹೊನ್ನಳ್ಳಿ ಬಳಿ ನೀರೆತ್ತಿ ಕೊಳವೆ ಮಾರ್ಗದ ಮೂಲಕ ಪೂರೈಕೆ ಮಾಡಲಾಗುತ್ತ ಬರಲಾಗುತ್ತಿದೆ. ಪ್ರತಿ ವರ್ಷ ಈ ಅವಧಿಯಲ್ಲಿ ಹೊನ್ನಳ್ಳಿ ಬಳಿ 3.5 ಮೀಟರ್‌ನಷ್ಟು ನೀರು ಇರುತ್ತಿತ್ತು. ಆದರೆ, ಈ ವರ್ಷ ನೀರಿನ ಪ್ರಮಾಣ 2.6 ಮೀಟರ್‌ಗೆ ಇಳಿದಿದೆ. ಸೀಬರ್ಡ್ ನೌಕಾ ಯೋಜನೆ, ಗ್ರಾಸಿಂ ಇಂಡಸ್ಟ್ರೀ ಸೇರಿ ಹಲವೆಡೆ ಇದೇ ಯೋಜನೆಯಿಂದ ನೀರು ಪೂರೈಕೆ ಮಾಡಲಾಗುತ್ತದೆ. ಪ್ರತಿ ದಿನ 21 ಮಿಲಿಯನ್ ಲೀಟರ್ ನೀರನ್ನು ಎತ್ತಲಾಗುತ್ತದೆ. ಇದೇ ಪರಿಸ್ಥಿತಿ ಮುಂದುವರಿದರೆ ಡಿಸೆಂಬರ್ ಒಳಗೆ ನೀರೆತ್ತುವುದು ಸಮಸ್ಯೆಯಾಗಬಹುದು ಎಂಬುದು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧಿಕಾರಿಗಳ ಅಭಿಪ್ರಾಯವಾಗಿದೆ.

 

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News