ಪಣಂಬೂರು: ಬಾಲಕಿ ಅಪಹರಣ ಪ್ರಕರಣಕ್ಕೆ ಹೊಸ ತಿರುವು; ಆರೋಪಿಯ ಬಂಧನ

Update: 2023-08-14 10:28 GMT

ಪಣಂಬೂರು, ಆ.14: ಇಲ್ಲಿನ ಪೊಲೀಸ್‌ ಠಾಣೆಯಲ್ಲಿ ವರದಿಯಾಗಿದ್ದ ಅಪ್ರಾಪ್ತ ಬಾಲಕಿ ಅಪಹರಣ ಪ್ರಕರಣಕ್ಕೆ ಹೊಸ ತಿರುವು ಲಭಿಸಿದ್ದು, ಪಣಂಬೂರು ಪೊಲೀಸರು ಬಾಲಕಿ ಸಹಿತ ಆರೋಪಿಯನ್ನು ಬಂಧಿಸಿ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬಂಧಿತನನ್ನು ಕಸ್ಬಾ ಬೆಂಗ್ರೆ ನಿವಾಸಿ ಮುಹಮ್ಮದ್‌ ಸರ್ಫರಾಝ್‌ ಯಾನೆ ಚಪ್ಪು (22) ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಆರೋಪಿಯು ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಪುಸಲಾಯಿಸಿ ಆಗಸ್ಟ್‌ 10ರಂದು ಅಪಹರಣ ಮಾಡಿರುವುದಾಗಿ ಬಾಲಕಿಯ ಪೋಷಕರು ಪಣಂಬೂರು ಪೊಲೀಸರಿಗೆ ದೂರು ನೀಡಿದ್ದರು. ದೂರು ದಾಖಲಾಗುತ್ತಿದ್ದಂತೆ ಕಾರ್ಯಾಚರಣೆಗೆ ಇಳಿದ ಪಣಂಬೂರು ಪೊಲೀಸ್‌ ಠಾಣೆಯ ಪೊಲೀಸ್‌ ನಿರೀಕ್ಷಕ ಸೋಮಶೇಖರ್ ಜೆ.ಪಿ. ಅವರ ನೇತೃತ್ವದ ಪೊಲೀಸ್‌ ತಂಡ ಕೆಲವೇ ಗಂಟೆಗಳ ಕಾರ್ಯಾಚರಣೆ ನಡೆಸಿ ಅಪಹರಣಕ್ಕೊಳಗಾಗಿದ್ದ ಬಾಲಕಿ ಸಹಿತ ಆರೋಪಿ ಮುಹಮ್ಮದ್‌ ಸರ್ಫರಾಝ್‌ ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಯ ವಿರುದ್ಧ ಠಾಣಾ ಅ.ಕ್ರ ನಂಬ್ರ 03/20 ಕಲಂ 303 37 ಐಪಿಸಿ ಕಲಂ 4, ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆರೋಪಿಯ ವಿರುದ್ಧ ಪಣಂಬೂರು, ಕಂಕನಾಡಿ, ಮಂಗಳೂರು ಉತ್ತರ, ಹಾಗೂ ಉಡುಪಿ ಜಿಲ್ಲೆಯ ಬೈದೂರು ಪೊಲೀಸ್‌ ಠಾಣೆಗಳಲ್ಲಿ ವಿವಿಧ ಕಲಂಗಳಡಿ ಒಟ್ಟು 8 ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಕಂಕನಾಡಿ ನಗರ ಠಾಣಾ ಅ.ಕ್ರ ನಂಬ್ರ 63/2023 ಕಲಂ:457,360 ಐಪಿಸಿ ಮತ್ತು ಬೈಂದೂರು ಠಾಣಾ ಅ.ಕ್ರ ನಂಬ್ರ 06/2013 ಕಲಂ:457,368 ಐಪಿಸಿ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಅಪ್ರಾಪ್ತ ಬಾಲಕಿ ಅಪಹರಣ ಪ್ರಕರಣದಲ್ಲಿ ಅಪಹರಣಕ್ಕೊಳಗಾದ ಬಾಲಕಿ ಮತ್ತು ಆರೋಪಿ ಪತ್ತೆ ಕಾರ್ಯದಲ್ಲಿ ಮಂಗಳೂರು ಉತ್ತರ ವಿಭಾಗದ ಸಹಾಯಕ ಪೊಲೀಸ್‌ ಆಯುಕ್ತರಾದ ಮನೋರ್ ಕುಮಾರ್ ನಾಯ್ಕ ಅವರ ನೇತೃತ್ವದಲ್ಲಿ ಪಣಂಬೂರು ಠಾಣಾ ಪೊಲೀಸ್‌ ನಿರೀಕ್ಷಕ ಸೋಮಶೇಖರ್ ಜೆ.ಸಿ, ಪೊಲೀಸ್ ಉಪ ನಿರೀಕ್ಷಕರಾದ ರಾಘವೇಂದ್ರ ಎಂ. ನಾಯ್ಕ ಮತ್ತು ಜ್ಞಾನಶೇಖರ್ ಹಾಗೂ ಪಣಂಬೂರು ಪೊಲೀಸ್ ಠಾಣಾ ಎ.ಎಸ್.ಐ ಕೃಷ್ಣ ಹಾಗೂ ಸಿಬ್ಬಂದಿಗಳಾದ, ಪ್ರಮೋದ್ ಕುಮಾರ್, ಪ್ರೇಮಾನಂದ್, ಮಾಣಿಕ್, ಕುಮಾರಿ ಸೀಮಾ, ಇತರರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News