ಪಾದೂರು ಸುಬ್ರಹ್ಮಣ್ಯ ತಂತ್ರಿ

ಶಿರ್ವ, ಮಾ.14: ಕಟಪಾಡಿ ಎಸ್ವಿಎಸ್ ಪದವಿ ಪೂರ್ವ ಕಾಲೇಜು ಪ್ರೌಢ ಶಾಲಾ ವಿಭಾಗದ ಮುಖ್ಯ ಶಿಕ್ಷಕರು, ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ, ವೇದಾಂತ ಶಿರೋಮಣಿ ಪಾದೂರು ಸುಬ್ರಹ್ಮಣ್ಯ ತಂತ್ರಿ(58) ಇಂದು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.
1993ರಲ್ಲಿ ಸಂಸ್ಕೃತ ಅಧ್ಯಾಪಕರಾಗಿ ಸೇವೆ ಆರಂಭಿಸಿದ ಇವರು 2018 ರಿಂದ ಮುಖ್ಯ ಶಿಕ್ಷಕರಾಗಿ ಸೇವೆಯಲ್ಲಿದ್ದರು. ಕಾಪು ವಲಯ ಬ್ರಾಹ್ಮಣ ಸಂಘದ ಅಧ್ಯಕ್ಷರಾಗಿದ್ದು, ಉಡುಪಿ ಸಂಸ್ಕೃತ ಕಾಲೇಜಿನಲ್ಲಿ ಉಪನ್ಯಾಸಕರಾಗಿಯೂ ಸೇವೆ ಸಲ್ಲಿಸಿದ್ದರು. ವೇದ ಅಧ್ಯಯನಶೀಲರಾಗಿದ್ದು ಪಲಿಮಾರು ಮಠದ ಪರ್ಯಾಯ ಸಂದರ್ಭದಲ್ಲಿ ನ್ಯಾಯ ಸುಧಾ ವಿದ್ವಾನ್ ಹಾಗೂ ಅದಮಾರು ಮಠದ ಪರ್ಯಾಯ ಸಂದರ್ಭದಲ್ಲಿ ಆಸ್ಥಾನ ವಿದ್ವಾನ್ ಗೌರವ ಪಡೆದಿದ್ದರು.
ಸುಜ್ಞಾನ ಟ್ರಸ್ಟ್ ಇದರ ಸದಸ್ಯರಾಗಿದ್ದು, ಇವರ ವಿದ್ವತ್ ಸಾಧನೆಗೆ ಹತ್ತು ಹಲವು ಗೌರವಗಳು ಲಭಿಸಿವೆ. ಇವರು ಪತ್ನಿ, ಪುತ್ರ, ಪುತ್ರಿ ಮತುತಿ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.
ಇವರ ನಿಧನಕ್ಕೆ ಕಾಪು ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಎಸ್ವಿಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಕೆ.ಸತ್ಯೇಂದ್ರ ಪೈ, ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಕೆ.ದಯಾನಂದ ಪೈ ಸಹಿತ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯರು, ಶಿಕ್ಷಕರು, ವಿದ್ಯಾರ್ಥಿ ಸಮೂಹ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.