ಸಿಎಂ ರಾಜಕೀಯ ಸಲಹೆಗಾರ ಸ್ಥಾನಕ್ಕೆ ನೀಡಿರುವ ರಾಜೀನಾಮೆಯನ್ನು ವಾಪಸ್ ಪಡೆಯಲ್ಲ : ಬಿ.ಆರ್.ಪಾಟೀಲ್ ಸ್ಪಷ್ಟನೆ

ಬಿ.ಆರ್.ಪಾಟೀಲ್
ಕಲಬುರಗಿ : ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರರ ಸ್ಥಾನಕ್ಕೆ ನೀಡಿರುವ ರಾಜೀನಾಮೆಯನ್ನು ಯಾವುದೇ ಕಾರಣಕ್ಕೂ ವಾಪಸ್ ಪಡೆಯುವುದಿಲ್ಲ ಎಂದು ಅಳಂದ ಶಾಸಕ ಬಿ.ಆರ್.ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
ರವಿವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ʼಸಿಎಂ ರಾಜಕೀಯ ಸಲಹೆಗಾರ ಹುದ್ದೆಗೆ ರಾಜೀನಾಮೆ ನೀಡಿರುವುದು ವಿಶೇಷ ಬೆಳವಣಿಗೆ ಏನಿಲ್ಲ, ನಾನು ಯಾವತ್ತೋ ರಾಜೀನಾಮೆ ಕೊಡಬೇಕು ಅಂದುಕೊಂಡಿದ್ದೆ. ಅದು ಈಗ ಕೊಟ್ಟಿದ್ದೇನೆʼ ಎಂದು ಹೇಳಿದರು.
ರಾಜ್ಯಪಾಲರ ತೂಗುಗತ್ತಿ ಮೇಲಿತ್ತು. ಹಾಗಾಗಿ ರಾಜಕೀಯ ಸಲಹೆಗಾರರ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಇನ್ನೂ ಯಾರ ಜೊತೆಗೂ ನನಗೆ ಅಸಮಾಧಾನ ಇಲ್ಲ. ಅಸಮಾಧಾನದ ಸುದ್ದಿಗಳೆಲ್ಲವೂ ಮಾಧ್ಯಮದವರ ಸೃಷ್ಠಿ ಎಂದು ಬಿ.ಆರ್.ಪಾಟೀಲ್ ತಿಳಿಸಿದರು.
ಗ್ಯಾರಂಟಿ ಯೋಜನೆಗಳಿಂದ ನಮ್ಮ ಕ್ಷೇತ್ರಕ್ಕೆ ಅನುದಾನ ಸಿಗುತ್ತಿಲ್ಲ. ಹಾಗೆಂದು ನನಗೆ ಯಾವುದೇ ಅಸಮಾಧಾನ ಇಲ್ಲ. ರಾಜೀನಾಮೆ ಪತ್ರದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಎಲ್ಲವನ್ನೂ ತಿಳಿಸಿದ್ದೇನೆ. ಅವುಗಳನ್ನು ಬಹಿರಂಗಪಡಿಸುವುದಿಲ್ಲ ಎಂದರು.