ಚಿಂಚೋಳಿ ತಾಲೂಕಿನಲ್ಲಿ ಅಕ್ರಮ ಚಟುವಟಿಕೆಗಳು ಹೆಚ್ಚಾಗುತ್ತಿವೆ : ಅನಿಲಕುಮಾರ ಬಿರಾದಾರ

ಕಲಬುರಗಿ : ಚಿಂಚೋಳಿ ತಾಲೂಕಿನಲ್ಲಿ ಅಕ್ರಮ ಗಣಿಗಾರಿಕೆ, ಮರಳು ಸಾಗಣೆ, ಸವಳು ದಂಧೆ, ಡೀಸೆಲ್ ಮಾಫಿಯಾ, ಐಪಿಎಲ್ ಬೆಟ್ಟಿಂಗ್ ಸೇರಿದಂತೆ ಹಲವು ಅಕ್ರಮ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿವೆ ಎಂದು ರಾಜ್ಯ ಮಾಹಿತಿ ಹಕ್ಕು ಸಾಮಾಜಿಕ ಕಾರ್ಯಕರ್ತರ ವೇದಿಕೆ (ರಿ) ಹಾಗೂ ಪ್ರಗತಿಪರ ಚಿಂತಕರು ಆರೋಪಿಸಿದ್ದಾರೆ.
ಚಿಂಚೋಳಿ ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ತಹಶೀಲ್ದಾರ್ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಮನವಿ ಪತ್ರ ಸಲ್ಲಿಸಿದ ಬಳಿಕ ಮಾತನಾಡಿದ ಸಾಮಾಜಿಕ ಕಾರ್ಯಕರ್ತರ ವೇದಿಕೆಯ ತಾಲೂಕಾಧ್ಯಕ್ಷ ಅನಿಲಕುಮಾರ ಬಿರಾದಾರ, "2018–19ರಲ್ಲಿ ಕಲಬುರಗಿ ಜಿಲ್ಲೆ ಉಸ್ತುವಾರಿ ಸಚಿವರಾಗಿದ್ದ ಸಂದರ್ಭದಲ್ಲಿ ನಡೆಸಿದ ದಾಳಿಗಳಿಂದ ಇಂತಹ ಅಕ್ರಮ ಚಟುವಟಿಕೆಗಳು ತಾತ್ಕಾಲಿಕವಾಗಿ ನಿಂತಿದ್ದವು. ಆದರೆ ಇದೀಗ ಮತ್ತೆ ದಂಧೆಗಳು ಉಲ್ಬಣಗೊಂಡಿವೆ. ಹೊಸ ಅಧಿಕಾರಿಗಳ ತಂಡವನ್ನು ರಚಿಸಿ, ಪುನಃ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು" ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಸೂರ್ಯಕಾಂತ ಗಾರಂಪಳ್ಳಿ, ಕೆ.ಎಂ.ಬಾರಿ, ಕುರುಬ ಸಮಾಜದ ತಾಲೂಕು ಅಧ್ಯಕ್ಷ ಹನುಮಂತ ಪೂಜಾರಿ, ಪುರಸಭೆ ಮಾಜಿ ಉಪಾಧ್ಯಕ್ಷ ರಾಜು ಪವಾರ್, ಯುವ ಮುಖಂಡ ಅಮರ ಲೋಡನೂರ, ಸಂಘಟನೆಯ ಅಧ್ಯಕ್ಷ ಲಿಂಬಾಜಿ ಶಾದಿಪುರ ಸೇರಿದಂತೆ ಹಲವರು ಉಪಸ್ಥಿತರಿದ್ದರು.