ಕಲಬುರಗಿ | ಅಲೆಮಾರಿ ಸಮುದಾಯದವರಿಗೆ ಜಾಗೃತಿ ಮೂಡಿಸಿ, ಸವಲತ್ತು ಕಲ್ಪಿಸಿ : ಪಲ್ಲವಿ ಜಿ.

Update: 2025-04-22 18:28 IST
ಕಲಬುರಗಿ | ಅಲೆಮಾರಿ ಸಮುದಾಯದವರಿಗೆ ಜಾಗೃತಿ ಮೂಡಿಸಿ, ಸವಲತ್ತು ಕಲ್ಪಿಸಿ : ಪಲ್ಲವಿ ಜಿ.
  • whatsapp icon

ಕಲಬುರಗಿ : ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಹಾಗೂ ಅರೆ ಅಲೆಮಾರಿ ಜನರ ಕಲ್ಯಾಣಕ್ಕೆ ಸರ್ಕಾರ ಹತ್ತಾರು ಯೋಜನೆ ರೂಪಿಸಿದ್ದು, ಇದನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರುವ ಜವಾಬ್ದಾರಿ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳ ಜವಾಬ್ದಾರಿಯಾಗಿದ್ದು, ಅಧಿಕಾರಿಗಳು ಮತುವರ್ಜಿಯಿಂದ ಕಾರ್ಯನಿರ್ವಹಿಸಬೇಕು ಎಂದು ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ ಜಿ. ಅವರು ಹೇಳಿದರು.

ಮಂಗಳವಾರ ಇಲ್ಲಿನ ಡಿ.ಸಿ ಕಚೇರಿ ಸಭಾಂಗಣದಲ್ಲಿ ಅಲೆಮಾರಿ-ಅರೆ ಅಲೆಮಾರಿ ಸಮುದಾಯದ ಜನರಿಗೆ ನಿಗಮದಿಂದ ನೀಡಲಾಗುವ ವಿವಿಧ ಸೌಲಭ್ಯಗಳ ಕುರಿತು ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಅಲೆಮಾರಿ ಸಮುದಾಯ ಯೋಜನೆಗಳ ಅನುಷ್ಠಾನ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಅನುಷ್ಠಾನ ಸಮಿತಿಗೆ ಹೊಸದಾಗಿ ಸದಸ್ಯರನ್ನು ಕೂಡಲೇ ನೇಮಿಸಬೇಕು ಎಂದರು.

ನಿಗಮದಿಂದ ವಸತಿ ರಹಿತರಿಗೆ ಸಾಲ ನೀಡಲಾಗುತ್ತದೆ. ಆದರೆ ಜಿಲ್ಲೆಯಿಂದ ಇದುವರೆಗೆ ಕೇವಲ‌ 8 ಪ್ರಸ್ತಾವನೆ ಬಂದಿವೆ. ಹೆಚ್ಚಿನ‌ ಪ್ರಸ್ತಾವನೆಗಳು ಕಳುಹಿಸಿದಲ್ಲಿ ನಿಗಮದಿಂದ ಅನುಮೋದನೆ ನೀಡಲಾಗುವುದು.‌ ಇನ್ನು ಬ್ಯಾಂಕ್ ಲಿಂಕೇಜ್ ಕಾರ್ಯಕ್ರಮಗಳಲ್ಲಿ ಫಲಾನುಭವಿಗಳಿಗೆ ಬ್ಯಾಂಕ್ ಗಳು ಅನಗತ್ಯ ಕಿರಿಕಿರಿ ಮಾಡಬಾರದು ಎಂದು ಲೀಡ್ ಬ್ಯಾಂಕ್ ಮ್ಯಾನೇಜರ್ ಸಂತೋಷಕುಮಾರ ಅವರಿಗೆ ಸೂಚಿಸಿದರು.

ಅಲೆಮಾರಿ ಸಮುದಾಯ ದಿನನಿತ್ಯ ಸಂಚಾರ ಮಾಡುತ್ತಾ ಊರಿಂದ ಊರಿಗೆ ಅಲೆಯುತ್ತಾರೆ. ಹೀಗಾಗಿ ಇಲ್ಲಿ ಮಕ್ಕಳು ಶಿಕ್ಷಣದಿಂದ ವಂಚಿತರಾಗುವುದು ಸರ್ವೇ ಸಾಮಾನ್ಯ. ಹೀಗಾಗಿ ಇಂತಹ ಮಕ್ಕಳನ್ನು ಶಿಕ್ಷಕರು, ಶಿಕ್ಷಣ ಇಲಾಖೆ ಗುರುತಿಸಿ ಅವರಿಗೆ ಪ್ರಾಥಮಿಕ ಶಿಕ್ಷಣ ಕೊಡಿಸಬೇಕು. ಇನ್ನು 6ನೇ ತರಗತಿ ಪ್ರವೇಶಕ್ಕೆ ಸಮಾಜ ಕಲ್ಯಾಣ ಇಲಾಖೆ ಅಧೀನದ ಕ್ರೈಸ್ ವಸತಿ ಶಾಲೆಯಲ್ಲಿ ಪ್ರವೇಶ ಪರೀಕ್ಷೆ ಇಲ್ಲದೆ ಅಲೆಮಾರಿ ಸಮುದಾಯದ ಮಕ್ಕಳಿಗೆ ಪ್ರವೇಶಾತಿ ಕಲ್ಪಿಸಲು ಸರ್ಕಾರದ ಆದೇಶವಿದ್ದು, ಈ ಬಗ್ಗೆ ಸಮುದಾಯದ ಜನರಿಗೆ ಅರಿವು ಮೂಡಿಸಬೇಕು ಎಂದರು.

ಅಲೆಮಾರಿ ಸಮುದಾಯದಲ್ಲಿ ಬಾಲ್ಯ ವಿವಾಹ ಪ್ರಕರಣಗಳು ಹೆಚ್ಚಿದ್ದು, ಇದರ ನಿವಾರಣೆಗೆ ಜಾಗೃತಿ ಕೆಲಸ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಮಾಡಬೇಕು ಎಂದು ಪಲ್ಲವಿ ಜಿ. ಅಭಿಪ್ರಾಯಪಟ್ಟರು.

ಡಿ.ಸಿ. ಬಿ.ಫೌಝಿಯಾ ತರನ್ನುಮ್ ಮಾತನಾಡಿ, ಮಿಷನ್ ಸುರಕ್ಷಾ ಯೋಜನೆಯಡಿ 450 ತರಬೇತಿದಾರರನ್ನು ಬಳಸಿಕೊಂಡು ಕಲಬುರಗಿ ಜಿಲ್ಲೆಯಲ್ಲಿ ಬಾಲ್ಯ ವಿವಾಹ, ಪೋಕ್ಸೋ, ಸೇಫ್ ಟಚ್, ಅನಸೇಫ್ ಕುರಿತು ವ್ಯಾಪಕ ಪ್ರಚಾರ ಮಾಡಲಾಗಿದೆ. ಅಲೆಮಾರಿ ಸಮುದಾಯದ ಜನರು ಹೆಚ್ಚಿರುವ ಸ್ಥಳಗಳಲ್ಲಿ ಈ ಬಗ್ಗೆ ಇನ್ನು ಹೆಚ್ಚು ಪ್ರಚಾರ ಕೈಗೊಳ್ಳಿ ಎಂದರು.

ಸಮಾಜ ಕಲ್ಯಾಣ ಇಲಾಖೆಯ ಅಪರ‌ ನಿರ್ದೇಶಕ ಅಲ್ಲಾಭಕ್ಷ ಮಾತನಾಡಿದರು.

ಸಭೆಯಲ್ಲಿ ಅಧ್ಯಕ್ಷರ ಆಪ್ತ‌ ಕಾರ್ಯದರ್ಶಿ ಬಿ.ಎಸ್.ಆನಂದಕುಮಾರ, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಹೆಚ್ಚುವರಿ ಎಸ್.ಪಿ.ಮಹೇಶ ಮೇಘಣ್ಣನವರ್, ಸೇಡಂ ಉಪ ವಿಭಾಗದ ಸಹಾಯಕ ಆಯುಕ್ತ ಪ್ರಭುರೆಡ್ಡಿ, ಕಲಬುರಗಿ ಜಿಲ್ಲಾ ಪಂಚಾಯತಿಯ ಯೋಜನಾ ನಿರ್ದೇಶಕ ಜಗದೇವಪ್ಪ, ಸೇರಿದಂತೆ ತಾಲೂಕಿನ ತಹಶೀಲ್ದಾರರು, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರುಗಳು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News