ಕಲಬುರಗಿ | ನೊಂದವರಿಗೆ ನ್ಯಾಯ ಕೊಡಿಸಿದವರು ಡಾ.ಅಂಬೇಡ್ಕರ್ : ನಿತಿನ್ ಗುತ್ತೇದಾರ್

ಕಲಬುರಗಿ : ಸಮಾಜದ ಹಿಂದುಳಿದ ಹಾಗೂ ನೊಂದವರಿಗೆ ಶಕ್ತಿ ಹಾಗೂ ಧೈರ್ಯ ತುಂಬಲು ಹಾಗೂ ಎಲ್ಲ ವರ್ಗಗಳಿಗೂ ಸಮಾನತೆ ದೊರಕಲು ಜೀವನದುದ್ದಕ್ಕೂ ಹೋರಾಡಿ ಸರ್ವರಿಗೂ ನ್ಯಾಯ ಕೊಡಿಸಿದ ಡಾ.ಬಿ.ಆರ್.ಅಂಬೇಡ್ಕರ್ ಎಂದಿಗೂ ಅಜರಾಮರ ಎಂದು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ನಿತಿನ್ ಗುತ್ತೇದಾರ್ ಹೇಳಿದರು.
ಅಫಜಲಪುರ ತಾಲೂಕಿನ ದುದ್ದಣಗಿ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ರವರ 134ನೇ ಜಯಂತೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬಾಬಾ ಸಾಹೇಬ್ ರು ಹೊಂದಿದ್ದ ದೂರದೃಷ್ಟಿತ್ವ, ಚಿಂತನೆಗಳು, ವಿಚಾರಧಾರೆಗಳು ಸರ್ವಕಾಲಕ್ಕೂ ಪ್ರಸ್ತುತ. ಅವರು ಬಾಲ್ಯದಲ್ಲಿಯೇ ಜಾತಿ ವ್ಯವಸ್ಥೆ ನೋವನ್ನು ಅನುಭವಿಸಿ, ಅದನ್ನು ಮೆಟ್ಟಿ ಉನ್ನತ ಶಿಕ್ಷಣ ಪಡೆದರು. ಅಲ್ಲದೇ ಮೀಸಲಾತಿಯೇ ಇಲ್ಲದ ಕಾಲಘಟ್ಟದಲ್ಲಿ ವಿದೇಶಿ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದ ಮೊದಲ ಭಾರತೀಯರಾಗಿದ್ದಾರೆ. ಹೀಗಾಗಿ ಬಾಬಾ ಸಾಹೇಬ್ ರ ಬದುಕು ನಮಗೆ ನಿತ್ಯವೂ ಸ್ಪೂರ್ತಿ ಆಗಬೇಕು ಎಂದರು.
ಈ ಸಂದರ್ಭದಲ್ಲಿ ರಮೇಶ್ ಬಾಕೆ, ರಾಜು ಜಿಡ್ಡಗಿ, ಚನ್ನವೀರಯ್ಯ ಮಠ, ಅಮೃತ ನಂದೂರ, ಡಾ.ಪುಂಡಲೀಕ ಕಲಶೆಟ್ಟಿ, ರಾಜು ಬೆನಕನಹಳ್ಳಿ, ವೈಜನಾಥ ನಿಂಗದಳ್ಳಿ, ಮಹಾಂತೇಶ್ ಬಳೂಂಡಗಿ, ರವಿ ಗೌರ್, ಬಿ.ಎಂ.ರಾವ್, ಬಸವರಾಜ ಚಾಂದಕವಟೆ, ಗುರುದೇವ ಪೂಜಾರಿ, ಲೋಕೇಶ್ ಹರಿಜನ್, ಬಾಬು ಹೊಸ್ಮನಿ, ವಿಠ್ಠಲ ದೊಡ್ಮನಿ, ಸಿದ್ದಪ್ಪ ಹೊಸ್ಮನಿ ಮುಂತಾದವರಿದ್ದರು.